‘ಚನ್ನಬಸವ ಪಟ್ಟದ್ದೇವರು ಕಲ್ಯಾಣ ನಾಡಿನ ನಡೆದಾಡುವ ದೇವರು. ನೂತನ ಅನುಭವ ಮಂಟಪದ ಶಿಲ್ಪಿ. ಕನ್ನಡದ ಪಟ್ಟದೇವರೆಂದೇ ಹೆಸರಾಗಿದ್ದಾರೆ. ಅಪ್ಪಟ ಬಸವತತ್ವ ನಿಷ್ಠರು. ನಿಜಾಮನ ಆಳ್ವಿಕೆಯಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಕಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಟ್ಟಿ ಹಿಂದುಳಿದ ಭಾಗದ ಜನರಿಗೆ ಶಿಕ್ಷಣ ನೀಡಿದವರು. ಮಹಿಳೆಯರಿಗಾಗಿ ಅಕ್ಕಮಹಾದೇವಿ ಮಹಿಳಾ ಕಾಲೇಜು ಕಟ್ಟಿದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಉಚಿತ ಪ್ರಸಾದ ನಿಲಯ ಆರಂಭಿಸಿ ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದವರು. ಈಗಲೂ ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ನೂರಾರು ಮಕ್ಕಳು ಓದುತ್ತಿದ್ದಾರೆ. ಈ ನಾಡಿಗೆ ಪಟ್ಟದ್ದೇವರ ಕೊಡುಗೆ ಬಹಳ ದೊಡ್ಡದು. ಅಂತಹ ವ್ಯಕ್ತಿಯ ಸ್ತಬ್ಧಚಿತ್ರವನ್ನು ನಿರ್ಮಿಸಿ, ಮೈಸೂರು ದಸರಾ ಮೆರವಣಿಗೆಗೆ ಆಯ್ಕೆ ಮಾಡಿರುವುದು ಪ್ರತಿಯೊಬ್ಬರಿಗೂ ಹೆಮ್ಮೆ ಹಾಗೂ ಸಂತಸದ ವಿಷಯವಾಗಿದೆ’ ಎಂದು ಬಾಬುವಾಲಿ ತಿಳಿಸಿದ್ದಾರೆ.