ಜೆಡಿಎಸ್ನ ಬಾಗಳಿ ರೇವಣ್ಣ ಕಾಂಗ್ರೆಸ್ಗೆ ಇಂದು
ಚಾಮರಾಜನಗರ: ಜೆಡಿಎಸ್ ರಾಜ್ಯ ಕಾರ್ಯದರ್ಶಿಯಾಗಿದ್ದ ಬಾಗಳಿ ರೇವಣ್ಣ ಅವರು ಪಕ್ಷ ತೊರೆಯಲು ತೀರ್ಮಾನಿಸಿದ್ದು ಕೊಳ್ಳೇಗಾಲದಲ್ಲಿ ಶುಕ್ರವಾರ ಸಿ.ಎಂ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರಲಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಎಚ್.ಡಿ.ಕುಮಾರಸ್ವಾಮಿ ಅವರು ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ ಕೊನೆ ಗಳಿಯಲ್ಲಿ ಟಿಕೆಟ್ ಕೈತಪ್ಪಿತ್ತು. ಬಿಜೆಪಿಯಿಂದ ಬಂದಿದ್ದ ಆಲೂರು ಮಲ್ಲುಗೆ ಟಿಕೆಟ್ ನೀಡಲಾಗಿತ್ತು’ ಎಂದರು. ‘ಇದರಿಂದ ನನಗೆ ತುಂಬಾ ನೋವಾಯಿತು. ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಪಕ್ಷದಲ್ಲಿ ನನಗೆ ಅನ್ಯಾಯವಾಗಿದೆ. ಜಿಲ್ಲಾ ಅಧ್ಯಕ್ಷ ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರಿಂದಾಗಿ ನನಗೆ ಟಿಕೆಟ್ ತಪ್ಪಿತ್ತು. ಈಗ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೋಮುವಾದಿ ಬಿಜೆಪಿಯ ಜೊತೆ ಕೈಜೋಡಿಸಿದೆ. ಹಾಗಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ. ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಪತ್ರವನ್ನು ಶುಕ್ರವಾರ ಕಳುಹಿಸುವೆ’ ಎಂದರು. ‘ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಮತ್ತು ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಸಚಿವರಾದ ಮಹದೇವಪ್ಪ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಯಾವುದೇ ಷರತ್ತು ಹಾಕದೆ ಕಾಂಗ್ರೆಸ್ಗೆ ಸೇರುತ್ತಿದ್ದೇನೆ’ ಎಂದು ರೇವಣ್ಣ ಹೇಳಿದರು. ಮುಖಂಡರಾದ ಪುಟ್ಟಸ್ವಾಮಿ ವರದರಾಜು ಸಿದ್ದಯ್ಯನಪುರ ಧನಂಜಯ ಸಿದ್ದರಾಜು ರೈತ ಮುಖಂಡ ಮಹೇಶ್ ಶ್ರೀಕಂಠ ಇದ್ದರು.