ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧಿ ಹೆಜ್ಜೆಗಳು: ಚಿಕ್ಕಬಳ್ಳಾಪುರದಲ್ಲಿ ಗಾಂಧೀಜಿ ಭಾಷಣ

ಡಿ.ಜಿ.ಮಲ್ಲಿಕಾರ್ಜುನ
Published : 1 ಅಕ್ಟೋಬರ್ 2024, 7:14 IST
Last Updated : 1 ಅಕ್ಟೋಬರ್ 2024, 7:14 IST
ಫಾಲೋ ಮಾಡಿ
Comments

ಶಿಡ್ಲಘಟ್ಟ: 1927ರ ಜೂನ್ 5ರಂದು ಚಿಕ್ಕಬಳ್ಳಾಪುರದಲ್ಲಿ ಗಾಂಧೀಜಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು.

‘ನಾನು ನಂದಿಯಲ್ಲಿರುವಷ್ಟು ಕಾಲವೂ ಚೆನ್ನಾಗಿ ನೋಡಿಕೊಂಡ ಚಿಕ್ಕಬಳ್ಳಾಪುರದ ಜನತೆಗೆ ಅನಂತ ಧನ್ಯವಾದಗಳು. ನಿಮ್ಮ ಕರುಣಾಳು ಮನಸ್ಸುಗಳನ್ನು ನಾನೆಂದಿಗೂ ಮರೆಯಲಾರೆ. ಈ ಮೈಸೂರು ಪ್ರಾಂತ್ಯದಲ್ಲಿ ನನ್ನ ಓಡಾಟದ ಮುಖ್ಯ ಉದ್ದೇಶ, ಸಮಾಜದ ಅತ್ಯಂತ ಬಡವರು ಹಾಗೂ ಕೂಲಿಕಾರ್ಮಿಕರ ದನಿಯಾಗುವುದಾಗಿದೆ. ಬಹುಶಃ ಚರಕದ ಸಂದೇಶ ನಿಮ್ಮ ಹೃದಯವನ್ನು ಈಗಾಗಲೇ ತಲುಪಿರಬಹುದು. ನೀವುಗಳು ನಿಮ್ಮದೇ ಚರಕದಲ್ಲಿ ನೂಲನ್ನು ತೆಗೆದು ಅದರಿಂದ ತಯಾರಾದ ಖದ್ದರ್ (ಹತ್ತಿಯ ಬಟ್ಟೆ) ಧರಿಸಿದಾಗ ನನಗೆ ನಿಜಕ್ಕೂ ಅತ್ಯಂತ ಸಂತೋಷವಾಗುತ್ತದೆ’ ಎಂದು ಗಾಂಧೀಜಿ ಹೇಳಿದ್ದರು.

‘ಅಸ್ಪೃಶ್ಯತೆ ಎಂಬುದು ಸಮಾಜದ ದೊಡ್ಡ ಕಳಂಕ. ಚಿಕ್ಕಬಳ್ಳಾಪುರದಲ್ಲಿ ಬಹುಶಃ ಅಸ್ಪೃಶ್ಯತೆ ಇಲ್ಲವೆಂದು ಭಾವಿಸಿರುವೆ. ತಮ್ಮದೇ ದೇಶವಾಸಿಗಳನ್ನು ಅಸ್ಪೃಶ್ಯರೆಂದು ದೂರ ಮಾಡುವುದು ಹೀನಾತಿಹೀನ. ನೀವುಗಳೆಲ್ಲಾ ಎಲ್ಲರನ್ನೊಳಗೊಳ್ಳುವ ಬಗ್ಗೆ ನೆನಪಿಟ್ಟುಕೊಂಡು ಪಾಲಿಸಿ. ದಯಾ ಹೃದಯವುಳ್ಳ ನಿಮ್ಮ ಪ್ರೀತಿಗೆ ನಾನು ಚಿರಋಣಿ’ ಎಂದು ಹೇಳಿದ್ದರು.

1936ರ ಮೇ 31ರ ಭಾನುವಾರ ಮಹಾತ್ಮ ಗಾಂಧೀಜಿ ಅವರು ಸುಲ್ತಾನ್ ಪೇಟೆಯಿಂದ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದರು. ಅವರನ್ನು ಸ್ಥಳೀಯ ಸಬ್ ಡಿವಿಜನಲ್ ಆಫೀಸರ್ ಇಸ್ಮಾಯಿಲ್ ಷರೀಫ್ ಸ್ವಾಗತಿಸಿ, ತಮ್ಮ ಮನೆಗೆ ಕರೆದೊಯ್ದರು. ಅಲ್ಲಿ ಆತಿಥ್ಯವನ್ನು ಸ್ವೀಕರಿಸಿದ ನಂತರ ಚಿಕ್ಕಬಳ್ಳಾಪುರ ಪ್ರೌಢಶಾಲೆಯ ಬಳಿ ಸಾರ್ವಜನಿಕ ಸಭೆಗಾಗಿ ಹಾಕಿದ್ದ ಮಂಟಪಕ್ಕೆ ಆಗಮಿಸಿದರು.

ಗಾಂಧಿ ಅವರನ್ನು ಕಂಡು ಸಾವಿರಾರು ಜನರು ಪ್ರಚಂಡ ಜಯಘೋಷ ಮಾಡಿದರು. ಪುರಸಭೆಯವರು ಗಾಂಧೀಜಿಗೆ ಸನ್ಮಾನ ಪತ್ರವನ್ನು ಅರ್ಪಿಸಿ, ಹರಿಜನರ ಉದ್ಧಾರ ಹಾಗೂ ಹರಿಜನ ಕೇರಿ ಸ್ವಚ್ಛತೆಗಾಗಿ ತಾವು ಕೈಗೊಂಡ ಕ್ರಮಗಳನ್ನು ನಿವೇದಿಸುವುದರ ಜೊತೆಗೆ ನೂರು ರೂಪಾಯಿ ದೇಣಿಗೆಯನ್ನು ಅರ್ಪಿಸಿದರು.

ಗಾಂಧೀಜಿ ನಗುತ್ತಾ, ‘ವೈದ್ಯರು ನನಗೆ ಹೆಚ್ಚು ಮಾತನಾಡಬಾರದೆಂದು ಹೇಳಿದ್ದಾರೆ. ಇಲ್ಲಿ ಬೆಳೆಯುವ ಆಲೂಗಡ್ಡೆ ಧಾರಣೆ ಬಹಳ ಕುಸಿದಿರುವುದರಿಂದ ವರ್ತಕರಿಗೆ ಹೇರಳ ನಷ್ಟವಾಗಿದೆ. ಆದ್ದರಿಂದ ಹರಿಜನ ನಿಧಿಗೆ ಕೊಟ್ಟ ನಿಧಿಯೂ ಕಡಿಮೆ ಇದೆ’.

‘ಜೂನ್ 4 ರಂದು ಮಹಾರಾಜರ ವರ್ಧಂತಿ (ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನ). ಅವರಿಗೆ ಪರಮಾತ್ಮನು ದೀರ್ಘಾಯು, ಆರೋಗ್ಯವನ್ನು ದಯಪಾಲಿಸಲೆಂದು ಪ್ರಾರ್ಥಿಸುವುದು ನನ್ನ ಮೊದಲ ಕೆಲಸ. ಮಹಾರಾಜರು ಆಳುತ್ತಿರುವ ಈ ರಾಜ್ಯ ರಾಮರಾಜ್ಯವಾಗಲೆಂದು ನಾನು ಹಾರೈಸುತ್ತೇನೆ. ಹಿಂದೆ ರಾಜರಿಗೂ ಹಳ್ಳಿಯ ಪ್ರಜೆಗಳಿಗೂ ಯಾವುದೇ ಬೇಧವಿರಲಿಲ್ಲ. ಈಗಲೂ ಅದೇ ರೀತಿ ಆಗಬೇಕು. ಎಲ್ಲರೂ ಸಮಾನರಂತೆ ನಡೆದುಕೊಳ್ಳಬೇಕು. ಹರಿಜನ ಉದ್ಧಾರಕ್ಕಾಗಿ ಪುರಸಭೆಯವರು ಈವರೆಗೆ ಮಾಡಿರುವ ಕೆಲಸ ಉತ್ತಮವಾಗಿದ್ದರೂ ಹರಿಜನ ಮತ್ತು ಸವರ್ಣ ಎಂಬ ಭೇದ ಹೋಗುವವರೆಗೆ ನನಗೆ ಸಮಾಧಾನವಿಲ್ಲ. ಹರಿಜನರು ದೇವಾಲಯ ಪ್ರವೇಶಿಸಲು ಯಾವ ಆತಂಕ ಇಲ್ಲ’ ಎಂದು ಹಿಂದಿಯಲ್ಲಿ ಭಾಷಣ ಮಾಡಿದರು.

ಗಾಂಧೀಜಿ ಅವರ ಭಾಷಣವನ್ನು ಸಬ್ ಡಿವಿಜನಲ್ ಆಫೀಸರ್ ಇಸ್ಮಾಯಿಲ್ ಷರೀಫ್ ಅವರು ಕನ್ನಡಕ್ಕೆ ಭಾಷಾಂತರಿಸಿ ಜನರಿಗೆ ಹೇಳಿದ್ದರು.

ಚಿಕ್ಕಬಳ್ಳಾಪುರಕ್ಕೆ ಗಾಂಧೀಜಿ ಭೇಟಿ ನೀಡಿರುವ ವರದಿಯಿರುವ  ಜೂನ್ 1 1936 ರ “ದಿ ಹಿಂದೂ” ಪತ್ರಿಕೆ
ಚಿಕ್ಕಬಳ್ಳಾಪುರಕ್ಕೆ ಗಾಂಧೀಜಿ ಭೇಟಿ ನೀಡಿರುವ ವರದಿಯಿರುವ  ಜೂನ್ 1 1936 ರ “ದಿ ಹಿಂದೂ” ಪತ್ರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT