ಚಿಕ್ಕಮಗಳೂರು: ತಾಲ್ಲೂಕಿನ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ಈಚೆಗೆ ಬಾಬಾ ಬುಡನ್ ವಂಶಸ್ಥ ಸಯ್ಯದ್ ಫಕ್ರುದ್ದೀನ್ ಷಾ ಖಾದ್ರಿ ಅವರು ಭೇಟಿ ನೀಡಿ ಗುಹೆಯ ದಾದಾ ಹಯಾತ್ ಮೀರ್ ಖಲಂದರ್ ಧ್ಯಾನ ಸ್ಥಳದಲ್ಲಿನ ಬಾಗಿಲಿನ ಮೇಲ್ಭಾಗದಲ್ಲಿರುವ ಕಲಿಮ ತಯ್ಯಿಬಿನ ದರ್ಶನ ಪಡೆದರು.
ಕಲಿಮ ತಯ್ಯಿಬಿನ ಜಪ ನಡಿಸಿ, ಪ್ರತಿವರ್ಷದಂತೆ ಹರಕೆಯ ರೀತಿಯಲ್ಲಿ ಝಿಕ್ರ್ ಎ ಕಲಿಮ ಎ ಫಾತೀಹ ನಡೆಸಿದರು. ಈ ವೇಳೆ ತಮ್ಮ ಪೂರ್ವಜರ ಇತಿಹಾಸ ಹಂಚಿಕೊಂಡ ಅವರು, ದರ್ಗಾದ ವ್ಯವಸ್ಥಾಪನಾ ಸಮಿತಿ ರಚನೆ ಆದ ಬಳಿಕ ಅಲ್ಲಿರುವ ಪವಿತ್ರ ಕಲಿಮ ತಯ್ಯಿಬವನ್ನು ಮರೆಮಾಚಿಸಿ ಆ ಶ್ಲೋಕದ ಮೇಲೆ ಮುಜಾವರ್ ಹಾಗೂ ಅರ್ಚಕರಿಗೆ ಮಾತ್ರ ಅವಕಾಶವೆಂದು ಬರೆದು ಶ್ಲೋಕವನ್ನು ರಟ್ಟಿನ ತುಂಡಿನಿಂದ ಮರೆಮಾಚಲಾಗಿತ್ತು.
ಐತಿಹಾಸಿಕ ಶ್ಲೋಕದ ಪ್ರಕಾರ ದರ್ಗಾಕ್ಕೆ ಸಂಬಂಧಪಟ್ಟ ಗುರುಗಳಾದ ಸಜ್ಜಾದ್ ಎ ನಶೀನ್ ಹಾಗೂ ಶಾ ಖಾದ್ರಿ ಮತ್ತು ನಂತರ ಮುಜಾವರ್ ಅವರಿಗೆ ಪ್ರವೇಶಕ್ಕೆ ಅವಕಾಶವಿತ್ತು. ಈಚೆಗೆ ಹಲವಾರು ವಿರೋಧದ ನಡುವೆ ನೇಮಕವಾದ ಅರ್ಚಕರು ಪವಿತ್ರವಾದ ಕಲಿಮ ತಯ್ಯಿಬವನ್ನೂ ಒಪ್ಪಿ ಒಳಗಡೆ ಪ್ರವೇಶ ಮಾಡಿದ್ದಾರೆಂದು ನಾವು ನಂಬಿದ್ದೇವೆ ಎಂದರು.
ದರ್ಗಾದ ಸಜ್ಜಾದ್ ಎ ನಶೀನ್(ಪೀಠಾಧಿಪತಿ) ಎಂದರೇನು? ಶಾ ಖಾದ್ರಿ (ಪೀಠಾಧೀಶರು) ಎಂದರೇನು? ಎಂಬುದನ್ನು ಮುಜರಾಯಿ ಇಲಾಖೆ ಗೆಜೆಟ್ನಲ್ಲಿ ಸ್ಪಷ್ಟವಾಗಿ ವಿವರಿಸಿದೆ. ಅದರಂತೆ ಸಜ್ಜಾದ್ ಎ ನಶೀನ್ ಹಜರತ್ ಸಯ್ಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಅವರಿಗೂ ಇಲಾಖೆ ಗೌರವ ನೀಡಬೇಕು. ಜಿಕರ್ ಫಾತೀಹಾ ನಡೆಸಲು ಅವಕಾಶ ಮಾಡಿ ಕೊಟ್ಟ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.
ಸೂಫಿ ಗುರು ಮಹಮ್ಮದ್ ಶರೀಫ್ ಶಾಖಾದ್ರಿ ಹಾಗೂ ಮುಖಂಡರಾದ ಮಹಮ್ಮದ್ ಅತೀಕ್, ಜಮೀಲ್ ಖಾನ್, ಮುಬಾರಕ್, ಆರಿಫ್, ಮುಜಮ್ಮಲ್, ಮಸೂದ್ ರಜ್ವಿ ಭಾಗವಹಿಸಿದ್ದರು.
ರಾಜ್ಯ ಸರ್ಕಾರದ ಕ್ರಮ ಸ್ವಾಗತ
ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ವಿವಾದ ಪ್ರಕರಣ ಸಂಬಂಧ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಅವರು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಎಸ್ಎಲ್ಪಿಗೆ ಆಕ್ಷೇಪಣಾ ಹೇಳಿಕೆ ತಯಾರಿಸುವ ಕುರಿತು ಶಿಫಾರಸ್ಸಿಗಾಗಿ ಐವರು ಸಚಿವರ ಸಂಪುಟ ಉಪಸಮಿತಿ ರಚನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತ ಎಂದು ಬಾಬಾ ಬುಡನ್ ವಂಶಸ್ಥ ಸಯ್ಯದ್ ಫಕ್ರುದ್ದೀನ್ ಶಾ ಖಾದ್ರಿ ಹೇಳಿದರು.