ಫಲ್ಗುಣಿ ನದಿ ಉಕ್ಕಿ ಹರಿದು ಗುರುಪುರ ಪಡುಶೆಡ್ಡೆ ಮೂಡುಶೆಡ್ಡೆ ಹಾಗೂ ಉಳಾಯಿಬೆಟ್ಟು ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಗುರುಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಕಾಮಗಾರಿ ಸಲುವಾಗಿ ಫಲ್ಗುಣಿ ನದಿಗೆ ಹೊಸತಾಗಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿನ ತಗ್ಗು ಪ್ರದೇಶದಲ್ಲಿ ಮಣ್ಣು ತುಂಬಿಸಿ ರಸ್ತೆ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಪ್ರವಾಹದ ತೀವ್ರತೆ ಹೆಚ್ಚುವುದಕ್ಕೆ ಇದು ಕೂಡ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಪಡುಶೆಡ್ಡೆಯಲ್ಲಿ 20ಕ್ಕೂ ಹೆಚ್ಚು ಮನೆಗಳಲ್ಲಿ ವಾಸವಿದ್ದ ಕುಟುಂಬಗಳನ್ನು ದೋಣಿಯ ಸಹಾಯದಿಂದ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸದಸ್ಯರು ಬುಧವಾರ ರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗುರುಪುರದ ವಜ್ರದೇಹಿ ಮಠದ ಪ್ರದೇಶದಲ್ಲೂ ಪ್ರವಾಹ ಕಾಣಿಸಿಕೊಂಡಿದೆ. ಮಠದಲ್ಲಿದ್ದ ಜಾನುವಾರುಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಇಲ್ಲೂ ಕೆಲವು ಮನೆಗಳು ಹಾಗೂ ಕಲ್ಯಾಣ ಮಂಟಪ ಜಲಾವೃತವಾಗಿತ್ತು. ವಾಮಂಜೂರಿನ ಅಮೃತೇಶ್ವರ ದೇವಸ್ಥಾನದ ಪ್ರದೇಶದಲ್ಲೂ ಪ್ರವಾಹ ಕಾಣಿಸಿಕೊಂಡಿದೆ. ‘30 ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ರವಾಹ ಉಂಟಾಗಿರುವುದು ಇದೇ ಮೊದಲು’ ಎಂದು ಸ್ಥಳೀಯರು ತಿಳಿಸಿದರು. ಉಳಾಯಿಬೆಟ್ಟು ರಸ್ತೆ ಜಲಾವೃತವಾಗಿದ್ದರಿಂದ ಆಸುಪಾಸಿನ ನಾಲ್ಕೈದು ಗ್ರಾಮಗಳು ಸಂಪರ್ಕ ಕಡಿದುಕೊಂಡವು. ಇಲ್ಲಿ ರಸ್ತೆಯಲ್ಲಿ ನಾಲ್ಕು ಅಡಿಗೂ ಹೆಚ್ಚು ಎತ್ತರದ ವರೆಗೆ ನೀರು ಇತ್ತು. ಬ್ಯಾರಿಕೇಡ್ ಅಳವಡಿಸಿ ಈ ರಸ್ತೆಯಲ್ಲಿ ವಾಹನಗಳು ಸಂಚರಿಸದಂತೆ ನಿರ್ಬಂಧಿಸಲಾಯಿತು.