ಗುಡ್ಡಗಳನ್ನು ಕೊರೆಯುವುದು ಅವ್ಯಾಹತವಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲು ಹೊರಟ ಪಕ್ಷಿಕೆರೆಯ ತಂಡವೊಂದು ಗೂಗಲ್ ಅರ್ಥ್ನಲ್ಲಿ ಪರಿಶೀಲಿಸಿದಾಗ ನಕಾಶೆಯ ತುಂಬ ‘ಪ್ಯಾಚ್’ಗಳೇ ಕಾಣಿಸಿಕೊಂಡಿವೆ. ಸುರತ್ಕಲ್ ಸುತ್ತಮುತ್ತ ನೂರಾರು ಎಕರೆ ಭೂಮಿಯಲ್ಲಿ ಇಂಥ ಕಪ್ಪುಬೊಟ್ಟುಗಳು ಕಂಡುಬಂದಿವೆ ಎಂದು ತಂಡದ ಪ್ರಮುಖ ನಿತಿನ್ ವಾಜ್ ಹೇಳುತ್ತಾರೆ. ‘ಗುಡ್ಡ ಉರುಳಿಸುವುದರಿಂದ ಹಸಿರು ನಾಶವಾಗುತ್ತದೆ. ಮಣ್ಣು ಕೂಡ ಇಲ್ಲದಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಶವಾದ ಭಾಗವನ್ನು ಸರಿಪಡಿಸಲು ಪ್ರಯತ್ನ ನಡೆಯುತ್ತಿದೆ. ಚೇಳಾಯ್ರು ಸಮೀಪ ಇಂಥ ಪ್ರದೇಶವೊಂದನ್ನು ಗುರುತಿಸಿ ಜೈವಿಕ ವೈವಿಧ್ಯ ಉದ್ಯಾನ ನಿರ್ಮಿಸಲಾಗುತ್ತಿದೆ. ನೀರು ಹರಿಯುವ ಈ ಪ್ರದೇಶದಲ್ಲಿ ಚಿಕ್ಕದಾದ ಅಣೆಕಟ್ಟೆಯೊಂದನ್ನು ನಿರ್ಮಿಸಿ ನೀರು ನಿಲ್ಲಿಸುವ ಯೋಜನೆಯೂ ಇದೆ. ಇದರಿಂದ ಬೇಸಿಗೆಯಲ್ಲಿ ಒಂದಷ್ಟು ನೀರು ಸಿಗಲಿದೆ. ಈ ಪ್ರದೇಶದಲ್ಲಿ ಅಂತರ್ಜಲವೂ ಹೆಚ್ಚಲಿದೆ’ ಎಂದು ನಿತಿನ್ ತಿಳಿಸಿದರು.
ಭೂ ಪ್ರದೇಶದಕ್ಕೆ ಧಕ್ಕೆ
ಪ್ರಕ್ರತಿದತ್ತ ಗುಡ್ಡಗಳನ್ನು ಅಗೆದು ಸಮತಟ್ಟು ಮಾಡುವುದರಿಂದ ಭೂಪ್ರದೇಶದ ಅಂದಕ್ಕೆ ಧಕ್ಕೆಯಾಗುತ್ತದೆ. ನೈಸರ್ಗಿಕ ಪರಿಸರಕ್ಕೂ ತೊಂದರೆಯಾಗುತ್ತದೆ. ಇದರೊಂದಿಗೆ ಮಣ್ಣು ಕೊಚ್ಚಿಕೊಂಡು ಹೋಗಿ ಅನಾಹುತಗಳಾಗುತ್ತವೆ. ಮಣ್ಣಿನ ಫಲವತ್ತತೆ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ. ಈ ಎಲ್ಲ ಕಾರಣಗಳಿಂದ ಗುಡ್ಡ ಅಗೆಯುವುದರ ಮೇಲೆ ನಿರ್ಬಂಧ ಹೇರಬೇಕು. ಗುಡ್ಡಗಳಿಂದ ಮಣ್ಣು ತೆಗೆಯಬೇಕಾದರೆ ಸಂಬಂಧಪಟ್ಟವರ ಅನುಮತಿ ಬೇಕೇಬೇಕು. ಆದರೆ ನಮ್ಮ ಜಿಲ್ಲೆಯಲ್ಲಿ ಗುಡ್ಡ ಖಾಲಿ ಮಾಡುವ ಚಟುವಟಿಕೆ ಲಂಗು ಲಗಾಮು ಇಲ್ಲದೆ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಇನ್ನಷ್ಟು ಅಪಾಯಗಳು ಆಗಬಹುದು. ಎಚ್. ಶಶಿಧರ ಶೆಟ್ಟಿ ಎನ್ಇಸಿಎಫ್ ಪ್ರಧಾನ ಕಾರ್ಯದರ್ಶಿ