ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಉದ್ಯಾನ: ಕಾಣದ ಹಸಿರು, ಸಿಗದ ಸೌಲಭ್ಯ

ಅವಳಿನಗರಲ್ಲಿವೆ ದಾಖಲೆ ಸಂಖ್ಯೆಯ ಉದ್ಯಾನ; ಅನುದಾನದ ಕೊರತೆ
Published : 2 ಸೆಪ್ಟೆಂಬರ್ 2024, 4:57 IST
Last Updated : 2 ಸೆಪ್ಟೆಂಬರ್ 2024, 4:57 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಕಾಲಿಟ್ಟಲೆಲ್ಲ ಕಸ, ಮುರಿದು ಬಿದ್ದಿರುವ ಬೆಂಚ್‌, ಕೊಂಡಿ ಕಳಚಿ ಬಿದ್ದ ಜೋಕಾಲಿ, ತುಂಡಾದ ಆಟಿಕೆಗಳು, ತುಕ್ಕು ಹಿಡಿದ ಗ್ರಿಲ್‌, ಕೆಸರುಮಯ–ಗಲೀಜಾದ ನಡಿಗೆ ಪಥ....

ಇದು ಹುಬ್ಬಳ್ಳಿ–ಧಾರವಾಡ ನಗರಗಳ ಉದ್ಯಾನದ ನೈಜ ಚಿತ್ರಣ. ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಉದ್ಯಾನಗಳೇ ಇಲ್ಲ. ಇನ್ನು ಕೆಲ ಕಡೆ ಉದ್ಯಾನದ ಫಲಕವೇ ಮುಳ್ಳು-ಕಂಟಿಗಳಲ್ಲಿ ಮುಚ್ಚಿವೆ. ಕೆಲ ಕಡೆ ಕನಿಷ್ಠ ಸೌಲಭ್ಯವಿದ್ದರೂ ನಿರ್ವಹಣೆ ಕೊರತೆ ಇದೆ. ಉದ್ಯಾನಗಳು ನಿಷ್ಪ್ರಯೋಜಕ ಆಗಿವೆ.

ನಗರ, ಕಾಲೊನಿ ಬಳಿಯಿರುವ ಉದ್ಯಾನಗಳಿಗೆ ಬೆಳಿಗ್ಗೆ, ಸಂಜೆ ವಾಯುವಿಹಾರ, ವ್ಯಾಯಾಮ, ಹಿರಿಯ ನಾಗರಿಕರು ವಿಶ್ರಾಂತಿ ಪಡೆಯಲು, ಮಕ್ಕಳು ಆಟವಾಡಲು ಹಾಗೂ ಪ್ರಯಾಣಿಕರು ತುಸು ದಣಿವಾರಿಸಿಕೊಳ್ಳಲು ಹೋಗುತ್ತಾರೆ. ಆದರೆ ಅನುದಾನದ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜನರು ಆಸಕ್ತಿ ತೋರದ ಕಾರಣ ಉದ್ಯಾನಗಳು ಸೊರಗಿವೆ.

ತ್ಯಾಜ್ಯ ತಾಣವಾದ ಉದ್ಯಾನ: 

ಹಳೇಹುಬ್ಬಳ್ಳಿಯ ಅರವಿಂದ ನಗರದ 1ನೇ ಮುಖ್ಯರಸ್ತೆ ಬಳಿಯಿರುವ ಶ್ರೀಜ್ಞಾನಿ ಚನ್ನಬಸವೇಶ್ವರ ನಗರ ಉದ್ಯಾನ, ಗೋಕುಲ ರಸ್ತೆಯ ಜವಳಿ ಉದ್ಯಾನ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಬಳಿ ಇರುವ ಚಿಟಗುಪ್ಪಿ ಉದ್ಯಾನ, ಗಾಂಧಿ ನಗರದ ಸಿಲ್ವರ್ ಟೌನ್ ಬಳಿ ಉದ್ಯಾನ ಸೇರಿ ಹಲವು ಉದ್ಯಾನಗಳು ತ್ಯಾಜ್ಯದ ತಾಣಗಳಾಗಿವೆ.

ಶ್ರೀಜ್ಞಾನಿ ಚನ್ನಬಸವೇಶ್ವರ ನಗರ ಉದ್ಯಾನದ ಸುತ್ತ ಹಾಕಿದ ಗ್ರಿಲ್‌ಗಳು ತುಕ್ಕು ಹಿಡಿದಿವೆ. ಮುರಿದು ಬಿದ್ದಿರುವ ಗೇಟ್ ಮೂಲಕವೇ ಒಳಗೆ ಹೋಗಬೇಕು, ಆಟಿಕೆಗಳು ಉಪಯೋಗಿಸುವಂತಿಲ್ಲ. ಉದ್ಯಾನದೊಳಗೆ ಕೊಠಡಿಯೊಂದು ಹಾಳು ಬಿದ್ದಿದ್ದು, ಉದ್ಯಾನದ ಮೂಲರೂಪವೇ ಬದಲಾಗಿದೆ. ಉದ್ಯಾನದ ಕಾಂಪೌಂಡ್ ಬಳಿಯೇ ಜನ ಕಸ ಎಸೆಯುತ್ತಾರೆ.

ಹೊಸೂರು ಬಳಿಯ ಹೊಸ ಕೋರ್ಟ್, ಕಲ್ಲೂರ್‌ ಲೇಔಟ್‌, ಮುಕ್ಕುಂದ ನಗರದ, ಡಾಲರ್ಸ್‌ ಕಾಲೊನಿ, ಗುಡಿಪ್ಲಾಟ್, ಶಿರೂರು ಪಾರ್ಕ್ ಬಳಿಯ ಉದ್ಯಾನಗಳು ತಕ್ಕಮಟ್ಟಿಗೆ ಚೆನ್ನಾಗಿವೆ. ಇಲ್ಲಿ ಜನ ವಾಯುವಿಹಾರ ಮಾಡುತ್ತಾರೆ. ಆದರೆ ಮಕ್ಕಳ ಆಟಿಕೆ ವಸ್ತುಗಳು ಇಲ್ಲ.

ವರ್ಷಗಳಿಂದ ದುರಸ್ತಿ ಕಾಣದ ಕಲಾಕೃತಿಗಳು:

ವಿದ್ಯಾನಗರದ ಪೊಲೀಸ್‌ ಠಾಣೆ ಬಳಿ ಇರುವ, ವಾರ್ಡ್‌ ಸಂ.47ರ ವ್ಯಾಪ್ತಿಯ ಉದ್ಯಾನದಲ್ಲಿ ಹಸಿರು ಕಂಗೊಳಿಸುತ್ತದೆ. ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಕೆಲವೊಮ್ಮೆ ಸಾಮೂಹಿಕ ಅಧ್ಯಯನ ಮಾಡುತ್ತಾರೆ. ಆದರೆ, ಇಲ್ಲಿರುವ ಕಲಾಕೃತಿಗಳು ಮುರಿದಿದ್ದು, ಉದ್ಯಾನದ ಅಂದಗೆಡಿಸಿವೆ. ಹಲವು ವರ್ಷಗಳಿಂದ ಇವು ದುರಸ್ತಿ ಕಂಡಿಲ್ಲ. ಕಲಾಕೃತಿಗಳನ್ನು ದುರಸ್ತಿಗೊಳಿಸಿದರೆ  ಉದ್ಯಾನ ಇನ್ನಷ್ಟು ಸುಂದರವಾಗುತ್ತದೆ.

ಗೋಕುಲ ರಸ್ತೆ ಬಳಿ ಇರುವ ಜವಳಿ ಉದ್ಯಾನದ ತುಂಬ ಮುಳ್ಳು-ಕಂಟಿಗಳು ಬೆಳೆದಿವೆ. ಫಲಕವೂ ಕಾಣದ ಸ್ಥಿತಿಯಲ್ಲಿದೆ. ಮಳೆಗಾಲ ಆಗಿರುವುದರಿಂದ ಕೀಟಗಳ ತಾಣವೂ ಆಗಿದೆ.

ವಿವಿಧ ತಾಲ್ಲೂಕುಗಳಲ್ಲಿ ಉದ್ಯಾನ:

ಕುಂದಗೋಳ ಹಳೇ ಪಟ್ಟಣದಲ್ಲಿ ಯಾವುದೇ ಉದ್ಯಾನ ಇಲ್ಲ. ಹೊಸ 20 ಲೇಔಟ್‌ಗಳಲ್ಲಿ ಉದ್ಯಾನಕ್ಕೆ ಜಾಗ ಮೀಸಲಿದ್ದು ಬಹುತೇಕ ಅಭಿವೃದ್ಧಿ ಹೊಂದಬೇಕಿವೆ. ತಾಲ್ಲೂಕಿನಲ್ಲಿ ಉದ್ಯಾನವಿಲ್ಲ. ಪಟ್ಟಣದಲ್ಲಿ ಜನತೆಗೆ ಉದ್ಯಾನ ಕಾಣದಾಗಿದೆ. ತಾಲ್ಲೂಕು ಹಾಗೂ ಸ್ಥಳೀಯ ಆಡಳಿತದ ಇಚ್ಛಾಶಕ್ತಿ ಕೊರತೆಯಿಂದ ಜನರು ಉದ್ಯಾನದಿಂದ ವಂಚಿತರಾಗಿದ್ದಾರೆ.

‘ಗುಡಗೇರಿ ಹಳೇ ಗ್ರಾಮದ ವ್ಯಾಪ್ತಿಯಲ್ಲಿ ಉದ್ಯಾನಗಳಿಗೆ ನಿವೇಶನ ಇಲ್ಲದಿರುವುದರಿಂದ ಉದ್ಯಾನವಿಲ್ಲ. ಈಗ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿದ್ದು ಅಲ್ಲಿ ನಿವೇಶನ ಮೀಸಲಿಡಲಾಗಿದೆ. ಉದ್ಯಾನ ನಿರ್ಮಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್‌.ಬಿ. ರಾಘವೇಂದ್ರ ತಿಳಿಸಿದರು.

ಅಳ್ನಾವರ ಪಟ್ಟಣದ ಹೊರವಲಯದ ಡೌಗಿ ನಾಲಾ ಹಳ್ಳದ ದಡದ ಮೇಲೆ ಪ್ರಕೃತಿ ಮಡಿಲಲ್ಲಿರುವ ಅರಣ್ಯ ಇಲಾಖೆಯ ಸಾಲು ಮರದ ತಿಮ್ಮಕ್ಕ ಸುಂದರ ಉದ್ಯಾನ ಸೌಲಭ್ಯ ಹೊಂದಿದ್ದು, ಇಲ್ಲಿಯ ಜನರ ನೆಮ್ಮದಿಯ ತಾಣವಾಗಿದೆ. ಇಲ್ಲಿ ಮಕ್ಕಳ ಆಟಿಕೆ ಜೊತೆಗೆ, ವಿಶಿಷ್ಟ ಚಿಟ್ಟೆ ಪಾರ್ಕ್‌ ಇದೆ. ಔಷಧೀಯ ಸಸ್ಯ ಸಂಕುಲದ, ಜೊತೆಗೆ ವಾಯು ವಿಹಾರ ಮಾಡಲು ಸೂಕ್ತ ಪರಿಸರ ಇದೆ.

ಇದು ಹೊರತುಪಡಿಸಿ ಪಟ್ಟಣ ಪಂಚಾಯಿತಿ ನಿರ್ವಹಿಸುವ ಎರಡು ಉದ್ಯಾನಗಗಳು, ಎಂ.ಸಿ.ಪ್ಲಾಟ್‌ ಹಾಗೂ ವಿದ್ಯಾ ನಗರ ಬಡಾವಣೆಯಲ್ಲಿವೆ. ಲಭ್ಯ ಅನುದಾನದಲ್ಲಿ ಉದ್ಯಾನ ನಿರ್ವಹಣೆ ನಡದಿದೆ. ಮಕ್ಕಳ ಆಟಿಕೆ ಇವೆ. ಪಟ್ಟಣದಲ್ಲಿ ಹಿರಿಯರು, ಮಹಿಳೆಯರು ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ಮಾಡಲು ವಾಕಿಂಗ್ ಪಾಥ್‌ ಬೇಕು ಎಂಬ ಬೇಡಿಕೆ ಇದೆ.

ನವಲಗುಂದ ವ್ಯಾಪ್ತಿಯಲ್ಲಿ ಲಾಲಾಗುಡಿ, ಜೋಶಿ ಪ್ಲಾಟ್, ಮುದಿಗೌಡ್ರ ಪ್ಲಾಟ್ ಸೇರಿ ವಿವಿಧಡೆ ಆರು ಉದ್ಯಾನಗಳಿವೆ. ಪುರಸಭೆಯ ನಿರ್ಲಕ್ಷ್ಯದಿಂದ ಅಂದ ಕಳೆದುಕೊಂಡಿವೆ. ಪಟ್ಟಣದ ಜೋಶಿ ಪ್ಲಾಟ್‌ನಲ್ಲಿರುವ ಉದ್ಯಾನದ ಆಟಿಕೆಗಳು ಬಳಸದ ದುಸ್ಥಿತಿಯಲ್ಲಿದ್ದು, ಕಸದೊಂದಿಗೆ ಮುಳ್ಳಿನ ಗಿಡ ಗಂಟಿಗಳು ಬೆಳೆದಿವೆ.

ಲಾಲಗುಡಿ ದೇವಸ್ಥಾನ ಆವರಣದಲ್ಲಿರುವ ಉದ್ಯಾನ ನಿರ್ಮಿಸಿ ಒಂದೂವರೆ ವರ್ಷವಾದರೂ ನಿರ್ವಹಣೆ ಇಲ್ಲದೆ ಸಂಪೂರ್ಣ ಕಸೆ ಬೆಳೆದಿದೆ. ಉದ್ಯಾನದ ಗೇಟ್ ಮುಂದೆ ಕಸ, ಮಣ್ಣು ಹಾಕಿದ್ದು ಒಳಗೆ ಹೋಗದ ಸ್ಥಿತಿ ಇದೆ. ಮುದಿಗೌಡ್ರ ಪ್ಲಾಟ್‌ನಲ್ಲಿರುವ ಉದ್ಯಾನ ತಕ್ಕಮಟ್ಟಿಗೆ ಉತ್ತಮವಾಗಿದ್ದು ಮಹಿಳೆಯರು, ಮಕ್ಕಳು, ವೃದ್ಧರು ಕಾಲ ಕಳೆಯುತ್ತಾರೆ.

ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಪೊಲೀಸ್‌ ಠಾಣೆ ಪಕ್ಕದ ಉದ್ಯಾನದಲ್ಲಿನ ಕಲಾಕೃತಿ ಹಾಳಾಗಿರುವುದು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಪೊಲೀಸ್‌ ಠಾಣೆ ಪಕ್ಕದ ಉದ್ಯಾನದಲ್ಲಿನ ಕಲಾಕೃತಿ ಹಾಳಾಗಿರುವುದು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಅರವಿಂದ ನಗರ ಮುಖ್ಯರಸ್ತೆ ಬಳಿಯ ಶ್ರೀಜ್ಞಾನ ಚನ್ನಬಸವೇಶ್ವರ ನಗರ ಉದ್ಯಾನದಲ್ಲಿನ ಆಟಿಕೆಗಳು ಹಾಳಾಗಿರುವುದು
ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಅರವಿಂದ ನಗರ ಮುಖ್ಯರಸ್ತೆ ಬಳಿಯ ಶ್ರೀಜ್ಞಾನ ಚನ್ನಬಸವೇಶ್ವರ ನಗರ ಉದ್ಯಾನದಲ್ಲಿನ ಆಟಿಕೆಗಳು ಹಾಳಾಗಿರುವುದು ಪ್ರಜಾವಾಣಿ ಚಿತ್ರ: ಗುರು ಹಬೀಬ
ಹಳೇ ಹುಬ್ಬಳ್ಳಿಯ ದಿಡ್ಡಿ ಓಣಿ ಉದ್ಯಾನದ ಜಾಗದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡ ಜನ ವಾಸವಾಗಿದ್ದಾರೆ

ಹಳೇ ಹುಬ್ಬಳ್ಳಿಯ ದಿಡ್ಡಿ ಓಣಿ ಉದ್ಯಾನದ ಜಾಗದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡ ಜನ ವಾಸವಾಗಿದ್ದಾರೆ

ಪ್ರಜಾವಾಣಿ ಚಿತ್ರ: ಗುರು ಹಬೀಬ

ಆಶ್ರಯ ಯೋಜನೆಯಡಿ ಸ್ಲಂ ನಿವಾಸಿಗಳಿಗೆ ಮನೆ ಕಟ್ಟಿಕೊಡಲಾಗುತ್ತಿದೆ. ದಿಡ್ಡಿ ಓಣಿಯ ಕೆಲವರು ಉದ್ಯಾನದ ಜಾಗದಲ್ಲಿ ಶೆಡ್‌ ನಿರ್ಮಿಸಿಕೊಂಡು ವಾಸವಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು

-ಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ವಿದ್ಯಾನಗರ ಉದ್ಯಾನದಲ್ಲಿನ ಕಲಾಕೃತಿಗಳ ದುರಸ್ತಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕೋರಲಾಗಿದೆ. ಅನುದಾನದ ಕೊರತೆಯಿಂದ ಉದ್ಯಾನ ಅಭಿವೃದ್ಧಿಗೆ ಅಡಚಣೆಯಾಗಿದೆ.

-ಶಿಲ್ಪಾ ಶೆಟ್ಟಿ ವಾರ್ಡ್‌ ಸದಸ್ಯೆ 47ನೇ ವಾರ್ಡ್‌ ವಿದ್ಯಾನಗರ

ಉದ್ಯಾನದಲ್ಲಿನ ಆಟಿಕೆಗಳು ಹಾಳಾಗಿವೆ. ನಡಿಗೆ ಪಥ ಇಲ್ಲ. ಉದ್ಯಾನದ ಬಳಿ ಕಸ ಎಸೆಯಲಾಗುತ್ತಿದ್ದು ಕಸದ ತಾಣವಾಗಿದೆ. ಇದರಿಂದ ಸಂಜೆ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ.

-ಮುಬಾರಕ್ ಕರಜಗಿ ಸ್ಥಳೀಯ ನಿವಾಸಿ ಅರವಿಂದ ನಗರ

ಮನೆ ಬಳಿಯ ಉದ್ಯಾನವನ್ನೇ ಅಭಿವೃದ್ಧಿಪಡಿಸಿದರೆ ಇಲ್ಲಿನ ಜನರಿಗೆ ಅನುಕೂಲವಾಗುತ್ತದೆ. ಮಕ್ಕಳ ಆಟವಾಡಲು ದೂರದ ಉದ್ಯಾನಗಳಿಗೆ ಹೋಗುತ್ತಾರೆ.

-ಪ್ರಿಯಾ ಎಂ. ಗೃಹಿಣಿ ಗುಡಿಪ್ಲಾಟ್‌

ಅವಳಿ ನಗರದಲ್ಲಿವೆ 579 ಉದ್ಯಾನ

‘ಹುಬ್ಬಳ್ಳಿ–ಧಾರವಾಡಲ್ಲಿ 327 ಎಕರೆ ಜಾಗದಲ್ಲಿ ಒಟ್ಟು 579 ಉದ್ಯಾನಗಳಿವೆ. ಅವುಗಳಲ್ಲಿ 111 ಅಭಿವೃದ್ಧಿಯಾಗಿವೆ. ಇನ್ನು 9 ಉದ್ಯಾನಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಉಳಿದ ಉದ್ಯಾನಗಳಲ್ಲಿ ಕಾಂಪೌಂಡ್ ನಿರ್ಮಾಣ ಫೇವರ್ಸ್ ಅಳವಡಿಕೆ ಗ್ರಿಲ್ ಅಳವಡಿಕೆ ಕೆಲಸ ನಡೆದಿದೆ’ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ತೋಟಗಾರಿಕೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮೊಹ್ಮದ್ ಫಿರೋಜ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಒಟ್ಟು 63 ಖುಲ್ಲಾ ಜಾಗಗಳಿವೆ. 249 ಉದ್ಯಾನಗಳಲ್ಲಿ ಫಲಕ ಬೆಂಚ್‌ಗಳಿವೆ. ಮಹಾನಗರ ಪಾಲಿಕೆ ಅನುದಾನ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಬಳಸಿಕೊಂಡು ಹಂತ ಹಂತವಾಗಿ ಉದ್ಯಾನಗಳನ್ನು ಅಭಿವೃದ್ಧಿ ಮಾಡಲಾಗುವುದು’ ಎಂದರು.

ಉದ್ಯಾನ ಜಾಗದಲ್ಲಿ ಶೆಡ್

ಹಳೇ ಹುಬ್ಬಳ್ಳಿಯ ವಾರ್ಡ್ ಸಂಖ್ಯೆ 55ರ ವ್ಯಾಪ್ತಿಯ ದಿಡ್ಡಿ ಓಣಿಯ ಉದ್ಯಾನ ಜನರ ವಾಸಸ್ಥಳ ಆಗಿದೆ. ಅಲ್ಲಿ ಉದ್ಯಾನವಿತ್ತು ಎಂಬುದಕ್ಕೆ ಕುರುಹು ಫಲಕ ಇಲ್ಲ! ಎರಡು ವರ್ಷದ ಹಿಂದೆ ಕೊಳೆಗೇರಿ ಪ್ರದೇಶದ ನಿವಾಸಿಗಳಿಗೆ ಸರ್ಕಾರದಿಂದ ಮನೆ ಕಟ್ಟಿಕೊಡಲು ಆರಂಭಿಸಲಾಯಿತು. ಅಲ್ಲಿನ ಜನ ಉದ್ಯಾನದ ಜಾಗದಲ್ಲಿ ಶೆಡ್ ಹಾಕಿಕೊಂಡು ವಾಸಿಸತೊಡಗಿದರು. ‘ಮನೆ ಕಟ್ಟಡ ಕಾಮಗಾರಿ ಪೂರ್ತಿಯಾದ ಬಳಿಕ ತಮ್ಮ ನಿವಾಸಗಳಿಗೆ ತೆರಳುವುದಾಗಿ ಹೇಳುತ್ತಾರೆ. ಆದರೆ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗಿದೆ. ವಾರ್ಡ್ ಸಂಖ್ಯೆ 55ರ ವ್ಯಾಪ್ತಿಯಲ್ಲಿ ಕೆಎಚ್‌ಬಿ ಕಾಲೊನಿ ದಿಡ್ಡಿ ಓಣಿ ಉದ್ಯಾನಗಳಿವೆ. ಇವುಗಳ ಅಭಿವೃದ್ಧಿಗೆ ₹30 ಲಕ್ಷ ಅನುದಾನವೂ ಲಭ್ಯವಿದೆ. ದಿಡ್ಡಿ ಓಣಿ ಉದ್ಯಾನದ ಕಾಂಪೌಂಡ್ ನಿರ್ಮಾಣಕ್ಕೂ ₹5 ಲಕ್ಷ ಅನುದಾನವಿದೆ. ಆದರೆ ಉದ್ಯಾನಗಳು ಒತ್ತುವರಿಯಾಗಿವೆ’ ಎಂದು ವಾರ್ಡ್ ಸದಸ್ಯ ಇಕ್ಬಾಲ್ ನವಲೂರು ತಿಳಿಸಿದರು.

‘ಎನ್‌ಸಿಎಪಿ ಯೋಜನೆಯಡಿ ಅಭಿವೃದ್ಧಿ’

‘ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಪಕ್ಕದಲ್ಲಿನ ಚಿಟಗುಪ್ಪಿ ಉದ್ಯಾನವನ್ನು ಎನ್‌ಸಿಎಪಿ(ನ್ಯಾಷನಲ್ ಕ್ಲಿಯರ್‌ ಏರ್‌ ಪ್ರೋಗ್ರಾಮ್‌) ಯೋಜನೆಯಡಿ ₹80ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದೆ’ ಎಂದು ಪಾಲಿಕೆಯ ಯೋಜನಾ ವಿಭಾಗದ ಕಾರ್ಯನಿರ್ವಾಹಕ‌ ಎಂಜಿನಿಯರ್ ವಿಜಯಕುಮಾರ್‌.ಆರ್ ತಿಳಿಸಿದರು. ‘ಈ ಯೋಜನೆಯಡಿ ಈಗಾಗಲೇ ಇರುವ ಶಿವಾಜಿ ಮೂರ್ತಿಯ ಜಾಗವನ್ನು ಸುಂದರಗೊಳಿಸುವುದು ಫೇವರ್ಸ್ ಅಳವಡಿಕೆ  ಬೆಂಚ್ ಅಳವಡಿಸಲಾಗುವುದು. ಪಕ್ಕದಲ್ಲಿಯೇ ಆಸ್ಪತ್ರೆ ಇರುವುದರಿಂದ ಮಹಿಳೆಯರು ಮಕ್ಕಳು ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯ ಬರುತ್ತಾರೆ. ಮಕ್ಕಳಿಗಾಗಿ ಆಟಿಕೆಗಳನ್ನು ಅಳವಡಿಸಲಾಗುವುದು. ಈಗಾಗಲೇ ಇರುವ ನೀರಿನ ಹೊಂಡ(ವಾಟರ್‌ ಫೌಂಟೆನ್‌) ಗಳನ್ನು ದುರಸ್ತಿಗೊಳಿಸಲಾಗುವುದು. 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದರು.

ಉದ್ಯಾನದ ಕಾಂಪೌಂಡ್‌ ಶಿಥಿಲ

ಧಾರವಾಡದಲ್ಲಿ 187 ಉದ್ಯಾನಗಳು ಇವೆ. ನಿರ್ವಹಣೆ ಕೊರತೆಯಿಂದ ಹಲವು ಉದ್ಯಾನಗಳು ಸೊರಗಿವೆ. ಪಿ.ಬಿ.ರಸ್ತೆಯ ಕಿತ್ತೂರು ರಾಣಿ ಚನ್ನಮ್ಮ (ಕೆ.ಸಿ.ಪಾರ್ಕ್‌) ಉದ್ಯಾನದ ಕಾರಂಜಿ ತೊಟ್ಟಿಗೆ ಅಳವಡಿಸಿರುವ ಟೈಲ್ಸ್‌ ಕಿತ್ತಿವೆ. ಕಾಂಪೌಂಡ್‌ ಕೆಲವು ಕಡೆ ಶಿಥಿಲಾವಸ್ಥೆಗೆ ತಲುಪಿದೆ. ಸಿಮೆಂಟ್‌ ಆಸನಗಳು ಮುರಿದಿವೆ. ಕೆಲವು ಉದ್ಯಾನಗಳಲ್ಲಿ ಮಕ್ಕಳ ಆಟಿಕೆಗಳು ಹಾಳಾಗಿದ್ದರೆ ಇನ್ನು ಕೆಲವು ಉದ್ಯಾನಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ವಿಹಾರ ಪಥ ಹಾಳಾಗಿದೆ. ಕೆಲವು ಉದ್ಯಾನಗಳಲ್ಲಿ ಪ್ರವೇಶ ದ್ವಾರಗಳ ಗೇಟುಗಳು ಹಾಳಾಗಿವೆ. ನಾಯಿಗಳು ಜಾನುವಾರುಗಳು ಪವಡಿಸಿರುತ್ತವೆ. ಪ್ಲಾಸ್ಟಿಕ್‌ ಪೊಟ್ಟಣಗಳು ಬಾಟಲಿಗಳು ಬಿದ್ದಿವೆ. ಕೆಲವು ಉದ್ಯಾನಗಳಲ್ಲಿ ನೆಟ್ಟಿದ್ದ ಗಿಡಗಳು ನಿರ್ವಹಣೆ ಕೊರತೆಯಿಂದ ಒಣಗಿವೆ. ‘ಮದ್ಯ ಸೇವಿಸಿ ಉದ್ಯಾನದ ಆಸನ ವಿಹಾರ ಪಥದಲ್ಲೇ ಕಲವರು ಪವಡಿಸಿರುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು. ಮಕ್ಕಳ ಆಟಿಕೆಗಳನ್ನು (ಜೋಕಾಲಿ ಜಾರುಬಂಡಿ...) ಸುಸ್ಥಿತಿಯಲ್ಲಿ ಇಡಲು ಕ್ರಮ ವಹಿಸಬೇಕು’ ಎನ್ನುತ್ತಾರೆ ಸಾಧನಕೇರಿ ನಿವಾಸಿ ಶಿಕ್ಷಕಿ ಮಂಜಳಾ ಕರಿಯಣ್ಣವರ. ‘ಪಾರ್ಕ್‌ಗಳ ನಿರ್ವಹಣೆಗೆ 49 ಸಿಬ್ಬಂದಿ ಅಗತ್ಯ ಇದೆ. ಈಗ ನಾಲ್ಕು ಮಂದಿ ಮಾತ್ರ ಇದ್ದಾರೆ. ಹೊರಗುತ್ತಿಗೆ‌ ವ್ಯವಸ್ಥೆಯಲ್ಲಿ ನಿರ್ವಹಣೆಗೆ ಕ್ರಮ ವಹಿಸಲಾಗಿದೆ. ಕೆ.ಸಿ.ಪಾರ್ಕ್‌ ಅಭಿವೃದ್ಧಿಗೆ ಕೆಲ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರೇತರ ಸಂಸ್ಥೆ ಕಂಪನಿಗಳಿಗೆ ನಿರ್ವಹಣೆ ನೀಡಲು ಅಧ್ಯಯನ ನಡೆಸಿ’

‘ನಿರ್ವಹಣೆ ಮಾಡದೆ ಎಷ್ಟೋ ಉದ್ಯಾನಗಳು ಹಾಳಾಗುತ್ತಿವೆ. ಸರ್ಕಾರೇತರ ಸಂಸ್ಥೆಗಳಿಗೆ ಕಂಪನಿಗಳಿಗೆ ನಿರ್ವಹಣೆ ನೀಡಲು ಅಧ್ಯಯನ ನಡೆಸಬೇಕು. ಕಾರ್ಪೊರೇಟ್ ಕಂಪನಿಗಳ ಸಿಎಸ್‌ಆರ್ ನಿಧಿಯಲ್ಲಿ ಉದ್ಯಾನ ನಿರ್ವಹಣೆ ಮಾಡಬೇಕು. ಕೆಲವು ಉದ್ಯಾನಗಳನ್ನು ಉದ್ಯಮಿಗಳಿಗೆ ರೋಟರಿ ಕ್ಲಬ್ ಎನ್‌ಜಿಒ ಕಂಪನಿಗಳಿಗೆ ಷರತ್ತಿನನ್ವಯ ನಿರ್ವಹಣೆಗೆ ನೀಡಿದರೆ ಪಾಲಿಕೆಗೂ ಹೊರೆ ತಪ್ಪುತ್ತದೆ. ಸೋಲಾರ್ ಪ್ಯಾನಲ್ ಕಾಂಪೌಂಡ್‌ ತಂತ್ರಜ್ಞಾನ ಬಂದಿದ್ದು ಅದನ್ನು ಅಳವಡಿಸಿಕೊಳ್ಳಬಹುದೇ ಎಂದು ಚಿಂತನೆ ನಡೆಸಿ ಯೋಜನೆ ರೂಪಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರು ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದರು. ಉದ್ಯಾನ ದತ್ತು: ಆಯಾ ಕಾಲೊನಿ ಅಥವಾ ನಗರದ ಜನ ತಾವೇ ಉದ್ಯಾನ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಳ್ಳಬಹುದು. ಒಂದು ವರ್ಷದ ಅವಧಿಗೆ ಪಾಲಿಕೆಯ ಷರತ್ತು ಹಾಗೂ ನಿಯಮಗಳಿಗನುಗುಣವಾಗಿ ಅವರಿಗೆ ಜವಾಬ್ದಾರಿ ನೀಡಲಾಗುತ್ತದೆ. ವಾರ್ಡ್ ಸಂ.52  ಹಾಗೂ ವಾರ್ಡ್ ಸಂ.46ರಲ್ಲಿ ಅಲ್ಲಿಯ ನಿವಾಸಿಗಳು ತಾವೇ ಉದ್ಯಾನ ನಿರ್ವಹಣೆಗೆ ಮುಂದಾಗಿದ್ದಾರೆ’ ಎಂದು ಹು-ಧಾ ಮಹಾನಗರ ಪಾಲಿಕೆಯ ತೋಟಗಾರಿಕೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮೊಹ್ಮದ್ ಫಿರೋಜ್ ತಿಳಿಸಿದರು.  

ಪೂರಕ ಮಾಹಿತಿ: ಬಿ.ಜೆ.ಧನ್ಯಪ್ರಸಾದ,  ಬಸವರಾಜ ಗುಡ್ಡದಕೇರಿ, ವಾಸುದೇವ ಎಸ್‌.ಮುರಗಿ, ಅಬ್ದುಲರಝಾಕ್‌ ನದಾಫ್‌, ರಾಜಶೇಖರ ಸುಣಗಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT