ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಡಿಎಸ್: ಭಿನ್ನಮತದಲ್ಲೇ ಆಯ್ಕೆ

ಕೃಷಿ ಪತ್ತಿನ ಸಹಕಾರ ಸಂಘ; ಅಧ್ಯಕ್ಷ ಸ್ಥಾನಕ್ಕೆ ನಾಲ್ವರ ನಾಮಪತ್ರ ಪೈಪೋಟಿ
Published 8 ಜೂನ್ 2024, 6:45 IST
Last Updated 8 ಜೂನ್ 2024, 6:45 IST
ಅಕ್ಷರ ಗಾತ್ರ

ಹಿರೀಸಾವೆ: ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ನಾಲ್ವರು ಸದಸ್ಯರು ನಾಮಪತ್ರ ಸಲ್ಲಿಸುವ ಮೂಲಕ ಜೆಡಿಎಸ್‌ ಹೋಬಳಿಯ ಘಟಕದಲ್ಲಿನ ಭಿನ್ನಮತ ಮತ್ತೊಮ್ಮೆ ಸ್ಫೋಟಗೊಂಡಿದೆ.

ಜೆಡಿಎಸ್ ಬೆಂಬಲಿತ ನಿರ್ದೇಶಕರು, ಸ್ಥಳೀಯ ನಾಯಕರ ಅಸಮಾಧಾನದ ನಡುವೆ ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶುಕ್ರವಾರ ಸೋಮಶೇಖರ ಅಧ್ಯಕ್ಷರಾಗಿ ಆಯ್ಕೆಯಾದರು.

ಕೆಂಪೇಗೌಡ ಅವರು ರಾಜೀನಾಮೆ ನೀಡಿದ್ದರಿಂದ ಚುನಾವಣೆ ನಡೆಯಿತು. ಸಂಘದಲ್ಲಿ 12 ನಿರ್ದೇಶಕರು, ಸರ್ಕಾರದ ನಾಮನಿರ್ದೇಶಿತ ಒಬ್ಬ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನವರೇ ಆದ ಸೋಮಶೇಖರ್, ಜಯಂತ್, ಗೀತಾಕುಮಾರ್, ರೇಣುಕಾ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು.

ಜೆಡಿಎಸ್ ಪಕ್ಷದ ಸ್ಥಳೀಯ ನಾಯಕರು ಎರಡು ಗಂಟೆ ಕಾಲ ಸಭೆ ನಡೆಸಿ, ನಾಮಪತ್ರ ಸಲ್ಲಿಸಿದ್ದ ನಿರ್ದೇಶಕರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. ಯಾರೂ ಒಪ್ಪದೇ ಇದ್ದಾಗ, ಎಲ್ಲರೂ ನಾಮಪತ್ರವನ್ನು ಹಿಂದಕ್ಕೆ ಪಡೆಯುವಂತೆ ಸೂಚಿಸಿದರು. ಎಲ್ಲರೂ ಸೂಚನೆ ಪಾಲಿಸಿದರು.

ಸೋಮಶೇಖರ್ ಅವರನ್ನು ಅಭ್ಯರ್ಥಿ ಯನ್ನಾಗಿಸಲು ನಿರ್ಧಾರ ಕೈಗೊಳ್ಳಲಾ ಯಿತು. ಆಯ್ಕೆ ಸಭೆಯಲ್ಲಿ ಸೋಮ ಶೇಖರ್ ಹೆಸರು ಸೂಚಿಸುತ್ತಿದಂತೆಯೇ, ನಿರ್ದೇಶಕರಾದ ಜಯಂತ್, ವೆಂಕಟೇಶ್ ಹೊರ ನಡೆದರು. ನಂತರ ನಿರ್ದೇಶಕ ಹೊನ್ನೇನಹಳ್ಳಿ ಬಾಬು ರಾಜೀನಾಮೆ ನೀಡಲು ಮಂದಾದರು. ಆದರೆ ನಾಯಕರು ರಾಜೀನಾಮೆ ಪತ್ರ ಹರಿದು ಹಾಕಿದರು.

ಕೋರಂ ಇದ್ದ ಹಿನ್ನೆಲೆಯಲ್ಲಿ, ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ವಾಸಿಂ, ನೂತನ ಅಧ್ಯಕ್ಷರ ಆಯ್ಕೆ ಘೋಷಿಸಿದರು. ಸಂಘದ ಮೇಲ್ವಿಚಾರಕ ಮಧು, ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಸಹಕರಿಸಿದರು. ನೂತನ ಅಧ್ಯಕ್ಷರನ್ನು ಸಂಘದ ಉಪಾಧ್ಯಕ್ಷ ಮಂಜುನಾಥ ಮತ್ತು ನಿರ್ದೇಶಕರು ಅಭಿನಂದಿಸಿದರು.

ಭಿನ್ನಮತ ಸ್ಫೋಟ:

ಎರಡು ವರ್ಷದ ಹಿಂದೆ ನಡೆದ ವಿಧಾನ ಪರಿಷತ್‌ ಚುನಾವಣಾ ಸಮಯದಲ್ಲಿ ಪಕ್ಷದ ಎರಡು ಗುಂಪುಗಳ ನಡುವೆ ಅಸಮಾಧಾನ ಭುಗಿಲೆದ್ದಿತ್ತು. ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ಹೊರಹಾಕಿದ್ದರು. ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗೆ ಗೈರಾಗಿ, ಪ್ರತ್ಯೇಕ ಸಭೆ ನಡೆಸಿದ್ದರು. ಅಂದಿನಿಂದ ಪಕ್ಷದ ಎರಡನೇ ಹಂತ ನಾಯಕರ ಮಧ್ಯೆ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ.

ಇದರಿಂದಾಗಿ ಹಿರೀಸಾವೆ ಪಂಚಾಯಿತಿ ಸೇರಿದಂತೆ ಬಹುತೇಕ ಪಂಚಾಯಿತಿಗಳು, ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರದಲ್ಲಿದ್ದರೂ,  ವಿಧಾನಸಭೆ ಮತ್ತು ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಹೋಬಳಿಯಲ್ಲಿ ಹೆಚ್ಚಿನ ಮತಗಳು ಬಂದಿವೆ. ಕೆಲವು ಗ್ರಾಮ ಪಂಚಾಯಿತಿ ಸದಸ್ಯರು ಬಹಿರಂಗವಾಗಿ ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ನಾಯಕರು ಒಗ್ಗಟಿನಿಂದ ಕೆಲಸ ಮಾಡುತ್ತೇವೆ.

-ಎಚ್.ಜಿ. ಮಂಜುನಾಥ್,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಿರೀಸಾವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT