ರಾಣೆಬೆನ್ನೂರು: ವಾಕ್ಚಾತುರ್ಯದಿಂದ ಯುವಜನರನ್ನು ಸೆಳೆದಿದ್ದ ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಬೆಳಕು ಚೆಲ್ಲಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದಜಿ ಮಹಾರಾಜ್ ಹೇಳಿದರು.
ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ಶನಿವಾರ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ ರಾಣೆಬೆನ್ನೂರು ಕಾ ರಾಜಾ 16ನೇ ವರ್ಷದ ಗಣೇಶ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆ ಹಾಗೂ ಮಹಿಳಾ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ಜೀವನ ಮೌಲ್ಯ ಸಾರ್ವಕಾಲಿಕವಾದುದು. ವಿವೇಕಾನಂದರ ಚಿಂತನೆ, ವಿಚಾರ ಧಾರೆಯನ್ನು ಯುವಕರು ತಿಳಿದುಕೊಳ್ಳಬೇಕು ಎಂದರು.
ರಾಯಚೂರಿನ ಕೃಷಿ ಮಹಿಳೆ ಕವಿತಾ ಮಿಶ್ರಾ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಅಯೋಧ್ಯೆ ರಾಮ ಮಂದಿರದ ನಿರ್ಮಾಣದ ಉಸ್ತುವಾರಿ ಗೋಪಾಲಜಿ ನಾಗರಕಟ್ಟೆ ಮಾತನಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ವಿಶ್ವನಾಥ ಪಿ. ಹಿರೇಮಠ, ಒಂದೇ ಮಾತರಂ ಸ್ವಯಂ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡೀಕಟ್ಟಿ, ಪ್ರಾಧ್ಯಾಪಕ ಪ್ರಮೋದ ನಲವಾಗಲ, ಗುಡ್ಡಪ್ಪ ಮಾಳಗುಡ್ಡಪ್ಪನವರ ಹಾಗೂ ಕಾರ್ಯಕರ್ತರು ಇದ್ದರು.
ಇದೇ ಸಂದರ್ಭದಲ್ಲಿ ವಿವೇಕ ಧಾರೆ ಪುಸ್ತಕ ಬಿಡುಗಡೆ ಮಾಡಲಾಯಿತು. ನಂತರ ಸಾಧಕರು, ವಿಶೇಷ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಸಂಗೀತ ನಿರ್ದೇಶಕ ಪ್ರವೀಣ ನಿಕೇತನ ಮತ್ತು ತಂಡದವರಿಂದ ರಾಣೆಬೆನ್ನೂರು ಕಾ ರಾಜಾ ಕೊಬ್ಬರಿ ಹೋರಿಯ ಕುರಿತು ರಚಿಸಿದ ಆಲ್ಬಮ್ ಗೀತೆಯನ್ನು ಬಿಡುಗಡೆ ಮಾಡಿದರು.
ನಂತರ ಬೆಂಗಳೂರಿನ ಚಂದನ ಶೆಟ್ಟಿ ಮತ್ತು ತಂಡದ ಐಶ್ವರ್ಯ ರಂಗರಾಜನ್, ರಮೇಶ ಲಮಾಣಿ, ಶಿವಾನಿ ನವೀನ್, ಭೂಮಿಕಾ ಮಧುಸೂದನ್, ಸಂದೇಶ ನೀರ್ಮಾರ್ಗ ಅವರು ಹಾಸ್ಯ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ನಂದಿ ಡ್ಯಾನ್ಸ್ ಸ್ಟುಡಿಯೋ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.