ಶಿಗ್ಗಾವಿ: ಹಬ್ಬಹರಿದಿನಗಳು ಪರಂಪರೆಯಿಂದ ವಿಶೇಷ ಸ್ಥಾನಮಾನ ಹೊಂದುವ ಮೂಲಕ ತನ್ನದೆಯಾದ ಹಿನ್ನೆಲೆ ಹೊಂದಿವೆ. ಅದರಲ್ಲಿ ದಸರಾ ಹಬ್ಬ ಬಹುದೊಡ್ಡ ಸಂಭ್ರಮವಾಗಿದೆ. ಈ ಹಬ್ಬದಲ್ಲಿ ದಸರಾ ಗೊಂಬೆಗಳನ್ನು ಕೊರಿಸೋದು ಆರಂಭಿಸುವ ಮೂಲಕ ಉತ್ತರ ಕರ್ನಾಟದಲ್ಲಿಯೂ ಆಚರಿಸುತ್ತಿರುವುದು ಸಂತಸ ತಂದಿದೆ.
ತಾಲ್ಲೂಕಿನ ಬಂಕಾಪುರ ಪಟ್ಟಣದ ಶಿಕ್ಷಕಿ ಪದ್ಮಾ ಹಿರೇಮಠ ಅವರ ಮನೆಯಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚಿನ ದಸರಾ ಗೊಂಬೆ ಇಟ್ಟು ವಿಶೇಷ ಪೂಜೆ ಸಲ್ಲಿಸುವುದನ್ನು ಕಾಣುತ್ತೇವೆ. ಅಲ್ಲದೆ ಅಂದು ಮಹಿಳೆಯೆರಿಗೆ, ಮಕ್ಕಳಿಗೆ ಉಡಿ ತುಂಬುವ ಕಾರ್ಯ ನೆರವೇರಿಸಲಾಗುತ್ತಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗ ನೆರವೇರಿಸಿಕೊಂಡು ಬರುವ ವಾಡಿಕೆ ಇಲ್ಲಿನ ಜನರಲ್ಲಿ ಶ್ರದ್ಧಾಭಕ್ತಿ ಮೂಡಿಸಲು ಕಾರಣವಾಗಿದೆ.
ಹಾಸನ ಜಿಲ್ಲೆಯ ಮೂಲದ ಶಿಕ್ಷಕಿ ಪದ್ಮಾ ಹಿರೇಮಠ ಮಾತನಾಡಿ, ನವರಾತ್ರಿ ಹಬ್ಬದ ಅಂಗವಾಗಿ ದಸರಾ ಗೊಂಬೆಗಳನ್ನು ಒಂಬತ್ತು ದಿನಗಳ ವರೆಗೆ ಕೂರಿಸುವ ವಾಡಿಕೆ ಪರಂಪರಾಗತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ಪೌರಾಣಿಕ ಎಲ್ಲ ದೇವರನ್ನು ಪ್ರತಿಷ್ಠಾಪನೆ ಮಾಡಿ ಮಹಿಳೆಯರಿಗೆ ಬಾಗಿನ ನೀಡಿ ಗೌರವಿಸಲಾಗುತ್ತದೆ ಎಂದರು.
ಕುಂಕುಮಾರ್ಚನೆ, ಪಾಯಸ, ಸಿಹಿ ಪೊಂಗಲ್, ಕೋಸಂಬರಿ, ಕಡಲೆ ಉಸುಲಿ ಸೇರಿದಂತೆ ವಿವಿಧ ಪದಾರ್ಥಗಳ ನೈವೇದ್ಯಗಳೊಂದಿಗೆ ಗೊಂಬೆಗಳ ರೂಪದಲ್ಲಿರುವ ನವದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ನಂತರ ಪ್ರಸಾದ ವಿತರಣೆ ಮಾಡಲಾಗುತ್ತಿದೆ ಎಂದರು.