ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ದೇವೇಂದ್ರ ಅವರು ದಸರಾ ಸಿಎಂ ಕಪ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯ 57 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ದೇವೇಂದ್ರ ರಜತ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ನಲ್ಲಿ ಬೆಳಗಾವಿ ವಿಭಾಗದ ಕುಸ್ತಿಪಟು ವಿರುದ್ಧ ದೇವೇಂದ್ರ 2–5 ಅಂಕಗಳಿಂದ ಪರಾಭವಗೊಂಡರು. ಈ ಹಣಾಹಣಿ ಸುಮಾರು 4 ನಿಮಿಷ ನಡೆಯಿತು.
ಕಳೆದ ಐದಾರು ವರ್ಷಗಳಿಂದ ಕುಸ್ತಿ ಅಭ್ಯಾಸ ನಡೆಸುತ್ತಿರುವ ದೇವೇಂದ್ರ ಅವರು ಮುಂಬೈಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಸಮಯ ಸಿಕ್ಕಾಗ ಅಖಾಡದಲ್ಲಿ ಕುಸ್ತಿ ಅಭ್ಯಾಸ ನಡೆಸುತ್ತಾರೆ.
ದೇವೇಂದ್ರ ಅವರು ಭೀಮಣ್ಣ ಹಾಗೂ ಯಲ್ಲಮ್ಮ ದಂಪತಿಯ ಕಿರಿಯ ಪುತ್ರ.