‘ಪೊಲೀಸ್ ನೋಟಿಸ್ ಕೊಟ್ಟು ಬೆದರಿಕೆ’
‘371 (ಜೆ) ಕಲಂಗಾಗಿ ನಾಲ್ಕೂವರೆ ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮ್ಮ ಮೇಲೆ 15ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಯಾರೂ ಕೂಡ ಮೌನ ಸತ್ಯಾಗ್ರಹಕ್ಕೆ ನೋಟಿಸ್ ಕೊಟ್ಟಿಲ್ಲ. ಸತ್ಯಾಗ್ರಹದ ಬಗ್ಗೆ ಮಾಹಿತಿ ಕೊಟ್ಟಿದ್ದರೂ ಪೊಲೀಸರು ನೋಟಿಸ್ ಕೊಟ್ಟು ಬೆದರಿಕೆ ಹಾಕಿದ್ದಾರೆ’ ಎಂದು ಲಕ್ಷ್ಮಣ ದಸ್ತಿ ಆರೋಪಿಸಿದರು. ‘ಸತ್ಯಾಗ್ರಹದ ಹಿಂದಿನ ದಿನವೇ ಬ್ರಹ್ಮಪುರ ಠಾಣೆಯ ಅಧಿಕಾರಿಗೆ ಫೋನ್ ಕರೆ ಮಾಡಿ ತಿಳಿಸಿದ್ದೆ. ಲಿಖಿತ ಪತ್ರದ ಅಗತ್ಯವಿಲ್ಲ ಎಂದಿದ್ದರು. ಆದರೆ ಬೆಳಿಗ್ಗೆ ಏಕಾಏಕಿ ಷರತ್ತುಬದ್ಧ ನೋಟಿಸ್ ಕೊಟ್ಟು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ. ನಮ್ಮ ಹೋರಾಟದಲ್ಲಿ ಪೊಲೀಸ್ ನೇಮಕಾತಿ ಮುಂಬಡ್ತಿಯೂ ಸೇರಿದೆ. ಯಾವುದೇ ಸಮುದಾಯ ವರ್ಗಕ್ಕೆ ಸೀಮಿತವಾಗಿಲ್ಲ. ಪೊಲೀಸ್ ನೋಟಿಸ್ನಿಂದ ಜನಪರ ಹೋರಾಟಕ್ಕೆ ಹಿನ್ನಡೆಯಾಗಿದ್ದು ಕಲ್ಯಾಣ ಕರ್ನಾಟಕದ ಅಸ್ಮಿತೆಗೆ ಧಕ್ಕೆ ತಂದು ಅಪಮಾನ ಮಾಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.