‘ಒಂದು ಅಂಕ ಕಡಿಮೆ ಬಂದಿದ್ದಕ್ಕೆ ಮಂತ್ರಿಯಾದೆ’
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಓದುತ್ತಿದ್ದ ವೇಳೆ ಡಿ.ಎಂ. ನಂಜುಂಡಪ್ಪ ಅವರು ವಿಭಾಗ ಮುಖ್ಯಸ್ಥರಾಗಿದ್ದರು. ನನಗೆ ಶೇ 59 ಅಂಕ ಬಂದಿತ್ತು. 60 ಕೊಟ್ಟಿದ್ದರೆ ಫಸ್ಟ್ ಕ್ಲಾಸ್ನಲ್ಲಿ ಪಾಸಾಗಿ ಯಾವುದೋ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿರುತ್ತಿದ್ದೆ. ಆದರೆ ಶೇ 59 ಅಂಕ ಬಂದಿದ್ದರಿಂದ ಕಾರ್ಮಿಕ ಸಂಘಟನೆ ನಾಯಕನಾದೆ. ನಂತರ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವನೂ ಆದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂದಿನ ದಿನಗಳನ್ನು ಮೆಲುಕು ಹಾಕಿದರು. ‘ನಾನು ಶಿಕ್ಷಣ ಸಚಿವನಾಗಿದ್ದ ವೇಳೆ ನಂಜುಂಡಪ್ಪ ಅವರು ಯೋಜನಾ ವಿಭಾಗದ ಕಾರ್ಯದರ್ಶಿಯಾಗಿದ್ದರು. ಬ್ಯಾಕ್ಲಾಗ್ ಹುದ್ದೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವ ವೇಳೆ ಅವರನ್ನು ಕರೆಸಿಕೊಂಡು ನನ್ನ ಗುರುತಿದೆಯೇ ಎಂದು ಕೇಳಿ ನಾನು ನಿಮ್ಮ ವಿದ್ಯಾರ್ಥಿಯಾಗಿದ್ದೆ. ನೀವು ಒಂದು ಅಂಕ ಹೆಚ್ಚು ಕೊಡದೇ ಇರುವುದಕ್ಕೆ ನಾನು ಮಂತ್ರಿಯಾದೆ ಎಂದು ಅವರಿಗೆ ನೆನಪಿಸಿದೆ’ ಎಂದು ಖರ್ಗೆ ಚಟಾಕಿ ಹಾರಿಸಿದರು.