ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಬೀದಿನಾಯಿಗಳ ಹಾವಳಿ ಇದೆ, ಎಚ್ಚರ!

ನಗರದ ಹಲವೆಡೆ ಉಪಟಳ ನೀಡುತ್ತಿರುವ ಶ್ವಾನಗಳು, ನಿಯಂತ್ರಣಕ್ಕಿಲ್ಲ ಕ್ರಮ; ಸಾರ್ವಜನಿಕರ ಅಸಮಾಧಾನ
Published : 20 ಸೆಪ್ಟೆಂಬರ್ 2024, 4:57 IST
Last Updated : 20 ಸೆಪ್ಟೆಂಬರ್ 2024, 4:57 IST
ಫಾಲೋ ಮಾಡಿ
Comments

ಮೈಸೂರು: ನಗರದಾದ್ಯಂತ ಕಂಡುಬರುತ್ತಿರುವ ಬೀದಿನಾಯಿಗಳ ಹಾವಳಿ ತಪ್ಪಿಸಲು ನಗರಪಾಲಿಕೆಯು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದೇಶದ ವಿವಿಧೆಡೆಯಿಂದ ಸೇರಿದಂತೆ ಜಗತ್ತಿನ ಹಲವು ದೇಶಗಳ ಪ್ರವಾಸಿಗರು ಬರುತ್ತಾರೆ. ಶಾಲಾ–ಕಾಲೇಜುಗಳಿಗೆ ‘ದಸರಾ ರಜೆ’ಯನ್ನೂ ಕೊಡುವುದರಿಂದ ಪೋಷಕರು ಮಕ್ಕಳೊಂದಿಗೆ ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಾರೆ. ನಗರದ ಹಲವು ಸ್ಥಳಗಳಲ್ಲಿ ಹಾಗೂ ವೇದಿಕೆಗಳಲ್ಲಿ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾವಿರಾರು ಮಂದಿ ಬರುತ್ತಾರೆ. ಹೀಗೆ ಬಂದವರ ಸುರಕ್ಷತೆ ದೃಷ್ಟಿಯಿಂದ ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಹಿಂದಿನಿಂದಲೂ ಇರುವ ಬೇಡಿಕೆ. ಇದಕ್ಕೆ ಆದ್ಯತೆಯೇ ದೊರೆತಿಲ್ಲ.

ನಗರದಲ್ಲಿ ಬೀದಿನಾಯಿಗಳ ಹಾವಳಿ ತಪ್ಪಿಸಲು, ಪ್ರತಿ ವರ್ಷ ಲಕ್ಷಾಂತರ ರೂಪಾಯಿಯನ್ನು ನಗರಪಾಲಿಕೆಯಿಂದ ವೆಚ್ಚ  ಮಾಡಲಾಗುತ್ತಿದೆ. ಆದರೆ, ಉಪಟಳ ನಿವಾರಣೆಯಾಗಿಲ್ಲ. ನಗರದ ಬಹುತೇಕ ಕಡೆಗಳಲ್ಲಿ ಬೀದಿನಾಯಿಗಳ ಗುಂಪು ಕಂಡುಬರುತ್ತಿದೆ. ಝಾನ್ಸಿರಾಣಿ ಲಕ್ಷ್ಮೀಬಾಯಿ (ಜೆಎಲ್‌ಬಿ) ರಸ್ತೆಯಂತಹ ಪ್ರಮುಖ ರಸ್ತೆಗಳಲ್ಲೂ ಅವು ಓಡಾಡುತ್ತಿರುತ್ತವೆ. ಅವುಗಳಲ್ಲೂ ಬಡಾವಣೆಗಳ ಒಳರಸ್ತೆಗಳಲ್ಲಿ, ಹೊರವಲಯದಲ್ಲಿ ಅವುಗಳ ಸಂಖ್ಯೆ ಜಾಸ್ತಿ ಇದೆ. ಅಲ್ಲಲ್ಲಿ ಸ್ಥಳೀಯರಿಗೆ ಕಚ್ಚಿ ಗಾಯಗೊಳಿಸಿದ ಘಟನೆಗಳು ವರದಿಯಾಗುತ್ತಲೇ ಇವೆ. ಅಪಘಾತಕ್ಕೂ ಕಾರಣವಾಗುತ್ತಿವೆ. ಅವೂ ಪ್ರಾಣಾಪಾಯ ತಂದುಕೊಳ್ಳುವುದು ಕಂಡುಬರುತ್ತಿದೆ.

ಅಟ್ಟಿಸಿಕೊಂಡು ಬರುತ್ತವೆ:

‘ನಾನು ನಿತ್ಯವೂ ಓಡಾಡುವ ಗಾಯತ್ರಿಪುರಂ ಮುಖ್ಯ ರಸ್ತೆಯಲ್ಲಿ, ಜ್ಯೋತಿ ನಗರದ ವಿವಿಧೆಡೆ, ನಜರ್‌ಬಾದ್‌, ಇಟ್ಟಿಗೆಗೂಡು ಪ್ರದೇಶದಲ್ಲಿ, ರಾಘವೇಂದ್ರ ನಗರ, ಯರಗನಹಳ್ಳಿ, ರಾಜ್‌ಕುಮಾರ್‌ ರಸ್ತೆಯುದ್ದಕ್ಕೂ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಬೀದಿನಾಯಿಗಳ ಹಾವಳಿ ಸಾಕಷ್ಟಿದೆ. ದ್ವಿಚಕ್ರವಾಹನಗಳಲ್ಲಿ ಹೋಗುವವರನ್ನು ಅವು ಅಟ್ಟಿಸಿಕೊಂಡು ಬರುತ್ತವೆ. ಕಾರುಗಳನ್ನೂ ಬೆನ್ನಟ್ಟುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕೆಲವರು ಬಿದ್ದ ಉದಾಹರಣೆಯನ್ನೂ ನೋಡಿದ್ದೇನೆ’ಎಂದು ರಾಘವೇಂದ್ರ ನಗರದ ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೀದಿನಾಯಿ ಓಡಿಸಿಕೊಂಡು ಬಂದಾಗ, ಸ್ಕೂಟರ್‌ ನಿಲ್ಲಿಸಿದರೆ ಹೆದರಿ ಓಡುತ್ತವೆ. ಮತ್ತೆ ನಾವು ಮುಂದೆ ಹೋದರೆ ಹಿಂದೆಯೇ ಓಡಿಸಿಕೊಂಡು ಬರುತ್ತವೆ. ಬೊಗಳುತ್ತಾ ಹೆದರಿಸುತ್ತವೆ. ಕೆಲವು ರಸ್ತೆಗಳಲ್ಲಿ ಬೀದಿನಾಯಿಗಳ ಹಾವಳಿಯ ಆತಂಕದಲ್ಲೇ ಸಂಚರಿಸಬೇಕಾದ ಸ್ಥಿತಿ ಇದೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಆತಂಕ ನಿವಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

ಕಾಳಜಿ ವಹಿಸಬೇಕು:

‘ನಗರದಲ್ಲಿ ಬೀದಿನಾಯಿಗಳ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನುವಂತಹ ಸ್ಥಿತಿ ಇದೆ. ಅವು ಬಹಳ ರೋಷಾವೇಷದಿಂದ ಓಡಾಡುವುದನ್ನೂ ಕಂಡಿದ್ದೇನೆ. ಜನರಿಗೆ ಬಹಳ ತೊಂದರೆ ಕೊಡುತ್ತಿವೆ. ದಸರಾ ಸಂದರ್ಭದಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದರೆ ದೊಡ್ಡ ಸುದ್ದಿಯಾಗಿ, ಮೈಸೂರಿಗೆ ಕಳಂಕ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ, ನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಅಧಿಕಾರಿಗಳು ಇನ್ನಷ್ಟು ಕಾಳಜಿಯಿಂದ ಕೆಲಸ ಮಾಡಬೇಕಾಗಿದೆ’ ಎನ್ನುತ್ತಾರೆ ಮಾಜಿ ಮೇಯರ್‌ ಶಿವಕುಮಾರ್‌.

‘ನಗರದಲ್ಲಿ ಬೀದಿನಾಯಿಗಳು ಎಷ್ಟಿವೆ ಎಂಬ ನಿಖರ ಮಾಹಿತಿ ಲಭ್ಯವಿಲ್ಲ. 2011ರ ನಂತರ ಸಮೀಕ್ಷೆ ನಡೆದಿಲ್ಲ’ ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ಪ್ರತಿಕ್ರಿಯಿಸಿದರು. ‘ಸಾರ್ವಜನಿಕರ ದೂರುಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ರೇಬಿಸ್ ಲಸಿಕೆಯನ್ನೂ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಡಾ.ವೆಂಕಟೇಶ್‌
ಡಾ.ವೆಂಕಟೇಶ್‌
ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ. ದಿನವೊಂದಕ್ಕೆ ನಿಗದಿತ ಸಂಖ್ಯೆಯಲ್ಲಷ್ಟೆ ಆಪರೇಷನ್‌ ಮಾಡಬಹುದಾಗಿದೆ
ಡಾ.ವೆಂಕಟೇಶ್‌ ಆರೋಗ್ಯಾಧಿಕಾರಿ ಮಹಾನಗರಪಾಲಿಕೆ
ಎಸ್‌ಬಿಎಂ ಮಂಜು
ಎಸ್‌ಬಿಎಂ ಮಂಜು
ನಾಯಿಗಳ ಉಪಟಳ ನಿಯಂತ್ರಿಸಲು ಪಾಲಿಕೆಗೆ ಮನವಿ ಸಲ್ಲಿಸಿದ್ದೆವು. ಆದರೆ ಸಮಾಧಾನಕರ ಸ್ಪಂದನೆ ದೊರೆತಿಲ್ಲ. ಈಚೆಗೆ ಒಂಟಿಕೊಪ್ಪಲಿನಲ್ಲಿ ಏಳು ಮಂದಿಗೆ ಕಚ್ಚಿವೆ
ಎಸ್‌ಬಿಎಂ ಮಂಜು ನಗರಪಾಲಿಕೆ ಮಾಜಿ ಸದಸ್ಯ
ಶಿವಕುಮಾರ್
ಶಿವಕುಮಾರ್
ಈಚೆಗೆ ಅನಿಕೇತನ ರಸ್ತೆಯಲ್ಲಿ ಮಗುವೊಂದನ್ನು ಕೆಲವು ನಾಯಿಗಳು ಎಳೆದುಕೊಂಡು ಹೋಗಿದ್ದವು. ಸ್ಥಳೀಯರು ಗಮನಿಸಿದ್ದರಿಂದ ಆ ಮಗು ಪ್ರಾಣಾಪಾಯದಿಂದ ಪಾರಾಯಿತು
ಶಿವಕುಮಾರ್‌ ಮಾಜಿ ಮೇಯರ್‌

ಕೇಂದ್ರ ನಿರ್ಮಿಸಿದರೂ ಪ್ರಯೋಜನವಿಲ್ಲ!

ಹೊರವಲಯದ ಎಚ್‌.ಡಿ.ಕೋಟೆ ರಸ್ತೆಯ ರಾಯನಕೆರೆ ತ್ಯಾಜ್ಯ ನೀರು ಸಂಸ್ಕರಣ ಘಟಕದ ಸಮೀಪ ಪಾಲಿಕೆಯಿಂದ ಹೋದ ವರ್ಷ ನಿರ್ಮಿಸಿದ್ದ ‘ಬೀದಿನಾಯಿಗಳ ಆರೈಕೆ ಕೇಂದ್ರ’ ಬಳಕೆಯೇ ಆಗುತ್ತಿಲ್ಲ! ‘ನಗರದಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳು ಹಂದಿಗಳ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನೂ ನಡೆಸಬೇಕಾಗಿದೆ. ಇದಕ್ಕಾಗಿ ಬೀದಿ ಹಾಗೂ ಸಾಕು ನಾಯಿಗಳ ಆರೈಕೆ ಕೇಂದ್ರ ನಿರ್ಮಿಸಲಾಗಿದೆ. ಜನರಿಗೆ ಆಗುತ್ತಿರುವ ತೊಂದರೆ ನಿವಾರಣೆಗೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಆಗಿನ ಮೇಯರ್‌ ಶಿವಕುಮಾರ್‌ ತಿಳಿಸಿದ್ದರು.

ಕೇಂದ್ರವನ್ನು ₹2.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಗರದಾದ್ಯಂತ ಕಾರ್ಯಾಚರಣೆ ನಡೆಸಿ ಬೀದಿನಾಯಿಗಳನ್ನು ಹಿಡಿದು ತಂದು ಆರೈಕೆ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. 2 ಎಕರೆ 37 ಗುಂಟೆ ಜಾಗದಲ್ಲಿ ನಿರ್ಮಿಸಿರುವ ಈ ಕೇಂದ್ರವು ಆಸ್ಪತ್ರೆಯಂತೆ ಕಾರ್ಯನಿರ್ವಹಿಸಲಿದೆ. ಒಪಿಡಿ ಪ್ರಯೋಗಾಲಯ ಶಸ್ತ್ರಚಿಕಿತ್ಸಾ ಕೊಠಡಿ ಔಷಧಿ ವಿಭಾಗ ಮರಿಗಳ ಆರೈಕೆ ಕೊಠಡಿ ರೋಗ ಬಂದ ನಾಯಿಗಳನ್ನು ಪ್ರತ್ಯೇಕವಾಗಿ ಇರಿಸಿ ಆರೈಕೆ ಮಾಡುವ ಕೇಂದ್ರ ವೈದ್ಯರ ಕೊಠಡಿ ವಿಶ್ರಾಂತಿ ಕೊಠಡಿ ಸಿಬ್ಬಂದಿ ಕೊಠಡಿ ಸಾಕು ಮರಿಗಳ ಆರೈಕೆಗೆ ಕೊಠಡಿ ಅಡುಗೆ ಕೋಣೆ ನಿರ್ಮಿಸಲಾಗಿದೆ ಎಂದು ಪಾಲಿಕೆ ತಿಳಿಸಿತ್ತು. ಆದರೆ ಈ ಕೇಂದ್ರ ಉದ್ಘಾಟನೆಯನ್ನೇ ಕಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT