ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಹೈಟೆಕ್‌ ಸ್ಪರ್ಶದಿಂದ ದೂರ ಉಳಿದ ಜಿಲ್ಲಾ ಗ್ರಂಥಾಲಯ

ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ, ಸರ್ಕಾರ
Published : 29 ಜುಲೈ 2024, 4:11 IST
Last Updated : 29 ಜುಲೈ 2024, 4:11 IST
ಫಾಲೋ ಮಾಡಿ
Comments
ರಾಯಚೂರಿನ ಕೇಂದ್ರ ಗ್ರಂಥಾಲಯದಲ್ಲಿ ಜಾಗದ ಕೊರತೆಯಿಂದ ನೆಲದ ಮೇಲೆ ಕುಳಿತು ಓದುತ್ತಿರುವ ಯುವಕರು
ರಾಯಚೂರಿನ ಕೇಂದ್ರ ಗ್ರಂಥಾಲಯದಲ್ಲಿ ಜಾಗದ ಕೊರತೆಯಿಂದ ನೆಲದ ಮೇಲೆ ಕುಳಿತು ಓದುತ್ತಿರುವ ಯುವಕರು
ಹೆಚ್ಚಿನ ಅನುಕೂಲಕ್ಕೆ ವಿದ್ಯಾರ್ಥಿಗಳ ಒತ್ತಾಯ
ರಾಯಚೂರು ನಗರದಲ್ಲಿರುವ ಗ್ರಂಥಾಲಯ ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ. ಅಧ್ಯಯನಪರ ವಾತಾವರಣವಿರುವ ಕಾರಣ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಇಲ್ಲಿಯೇ ಬಂದು ಓದುತ್ತಾರೆ. ‘ರಾಯಚೂರಲ್ಲಿ ಬಿಸಿಲು ಹಾಗೂ ಸೆಖೆ ಹೆಚ್ಚು ತಗಡಿನ ಶೆಡ್‌ಗಳಿರುವ ಮನೆಗಳು ಹಾಗೂ ಚಿಕ್ಕದಾದ ಮನೆಗಳಲ್ಲಿ ವಾಸವಾಗಿರುವ ಸಣ್ಣಕುಟುಂಬಗಳ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಿದೆ. ಜಿಲ್ಲಾಡಳಿತವು ಗ್ರಂಥಾಲಯದ ಉದ್ಯಾನದ ಆವರಣದಲ್ಲಿ ದೊಡ್ಡದಾದ ರೀಡಿಂಗ್‌ ರೂಮ್‌ ನಿರ್ಮಾಣ ಮಾಡಬೇಕು. ಮತ್ತಷ್ಟು ಅನುಕೂಲ ಕಲ್ಪಿಸಬೇಕು’ ಎಂದು ವಿದ್ಯಾರ್ಥಿಗಳಾದ ವೀರೇಶ ಮಲ್ಲೇಶ ಹಾಗೂ ಸುಪ್ರಿಯಾ ಮನವಿ ಮಾಡುತ್ತಾರೆ. ‘ಗ್ರಂಥಾಲಯಕ್ಕೆ ನಿತ್ಯ 900ರಿಂದ ಒಂದು ಸಾವಿರ ವಿದ್ಯಾರ್ಥಿಗಳು ಬಂದು ಹೋಗುತ್ತಾರೆ. ಗ್ರಂಥಾಲಯ ಅಧಿಕಾರಿಗಳು ಬೇಡಿಕೆ ಇಲ್ಲ ಎಂದು ಹೇಳುತ್ತ ಕುಳಿತರೆ ಸಾಲದು. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಇಲ್ಲಿ ಸೌಲಭ್ಯ ವಿಸ್ತರಿಸಲು ಪ್ರಸ್ತಾವ ಸಲ್ಲಿಸಬೇಕು’ ಎಂದು ಹೇಳುತ್ತಾರೆ. ‘ಸರ್ಕಾರ ಸಿಬ್ಬಂದಿಯನ್ನೇ ನೇಮಕ ಮಾಡಿಲ್ಲ ಎಂದು ಗ್ರಂಥಾಲಯ ಅಧಿಕಾರಿಗಳು ನೆಪ ಹೇಳುತ್ತ ಕುಳಿತುಕೊಳ್ಳುತ್ತಾರೆ. ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿ ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಕೆಕೆಆರ್‌ಡಿಬಿ ಹಾಗೂ ಜಿಲ್ಲಾಡಳಿತವು ಶೈಕ್ಷಣಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಗೆ ಸೌಲಭ್ಯ ವಿಸ್ತರಿಸಲು ಕ್ರಮಕೈಗೊಳ್ಳಬೇಕು‘ ಎಂದು ಮನವಿ ಮಾಡುತ್ತಾರೆ.
‘ಗ್ರಂಥಾಲಯದಲ್ಲಿ ಏಸಿ ಅಳವಡಿಸಿ’
ಫೆಬ್ರುವರಿಯಿಂದ ಜೂನ್ ಅಂತ್ಯದವರೆಗೂ ರಾಯಚೂರು ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ನಿಂದ 46 ಸೆಲ್ಸಿಯಸ್‌ ವರೆಗೆ ಗರಿಷ್ಠ ತಾಪಮಾನವಿರುತ್ತದೆ. ಕೊಠಡಿಯಲ್ಲಿ ಕುಳಿತುಕೊಂಡು ಓದಲು ಸಾಧ್ಯವಾಗದಷ್ಟು ಸೆಕೆ ಇರುತ್ತದೆ. ಹೀಗಾಗಿ ಜಿಲ್ಲಾ ಗ್ರಂಥಾಲಯದಲ್ಲಿ ಏಸಿ ಅಳವಡಿಸಬೇಕು ಎನ್ನುವುದು ಓದುಗರ ಆಗ್ರಹವಾಗಿದೆ. ನಗರದ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಈಗಾಗಲೇ ಏಸಿ ಅಳವಡಿಸಲಾಗಿದೆ. ರಾಯಚೂರು ಜಿಲ್ಲೆ ಮಹತ್ವಾಕಾಂಕ್ಷಿ ಜಿಲ್ಲೆಯ ಪಟ್ಟಿಯಲ್ಲಿ ಸೇರಿರುವ ಕಾರಣ ಬಿಸಿಲೂರಿನ ಸಮಸ್ಯೆ ಅರ್ಥ ಮಾಡಿಕೊಂಡು ಸರ್ಕಾರ ಗ್ರಂಥಾಲಯದಲ್ಲಿ ಏಸಿ ಅಳವಡಿಸಲು ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿ ಸಂಘಟನೆಗಳ ಪ್ರಮುಖರಾದ ರಮೇಶ ವೀರಾಪುರ ಮಲ್ಲನಗೌಡ ಅಂಚೆಸಗೂರು ಕಾರ್ತಿಕ ಶಿಂಧೆ ಮನವಿ ಮಾಡುತ್ತಾರೆ. ‘ವಿದ್ಯುತ್‌ ಬಿಲ್‌ ಸಮಸ್ಯೆಯಾಗದಂತೆ ಓದುಗರಿಂದಲೇ ಕನಿಷ್ಠ ಶುಲ್ಕ ಪಡೆಯಬಹುದು. ಈ ಕೊಠಡಿ ನಿರ್ವಹಣೆಗಾಗಿಯೇ ಪ್ರತ್ಯೇಕ ಸಿಬ್ಬಂದಿ ನಿಯೋಜನೆ ಮಾಡಬಹುದು. ಓದುಗರು ಸಾಹಿತಿಗಳು ಹಾಗೂ ಗ್ರಂಥಾಲಯ ಅಧಿಕಾರಿಗಳನ್ನು ಒಳಗೊಂಡು ವಿಶೇಷ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದು ಸೂಕ್ತ’ ಎಂದು ಸಲಹೆ ನೀಡಿದ್ದಾರೆ.
ಡಿಜಿಟಲ್‌ ಗ್ರಂಥಾಲಯ ನಿರ್ಮಾಣ ಅಗತ್ಯ
ಜಿಲ್ಲಾ ಗ್ರಂಥಾಲಯದ ಆವರಣದಲ್ಲಿ ಪ್ರತ್ಯೇಕ ಡಿಜಿಟಲ್‌ ಗ್ರಂಥಾಲಯ ನಿರ್ಮಿಸಬೇಕು. ಕಂಪ್ಯೂಟರ್‌ ಮೂಲಕವೇ ಅಲ್ಲಿ ಎಲ್ಲ ಬಗೆಯ ಅಧ್ಯಯನ ಸಾಹಿತ್ಯ ದೊರಕುವಂತಾಗಬೇಕು. ಈಗಿರುವ ಕಂಪ್ಯೂಟರ್ ವಿಭಾಗದಲ್ಲಿ ಕುಳಿತ ವಿದ್ಯಾರ್ಥಿನಿಯರು ಟೇಬಲ್‌ ಮೇಲೆ ಇಟ್ಟು ನಿದ್ರೆ ಮಾಡುತ್ತಿದ್ದಾರೆ. ಇಂತಹದ್ದಕ್ಕೆ ಅವಕಾಶ ಕಲ್ಪಿಸಬಾರದು. ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾದರೆ ಜಿಲ್ಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಸಾಹಿತ್ಯವನ್ನು ಇಲ್ಲಿಂದಲೇ ಪಡೆಯಲು ಸಾಧ್ಯವಾಗಲಿದೆ. ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಬಜೆಟ್ ಪೂರ್ವದಲ್ಲಿ ಸಾರ್ವಜನಿಕರ ಸಭೆ ಕರೆದು ಜನರ ಬೇಕು ಬೇಡಿಕೆಗಳನ್ನು ಅರಿತುಕೊಳ್ಳಬೇಕು. ಬೇಡಿಕೆಯೇ ಬಂದಿಲ್ಲ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಕೆಲಸವಾಗಬಾರದು ಎಂದು ಸಾಹಿತಿಗಳು ಹೇಳುತ್ತಾರೆ. ರಾಯಚೂರು ಸಂಸದ ಜಿ.ಕುಮಾರ ನಾಯಕ ಅವರು ಸಂಸದರ ಪ್ರದೇಶ ಅಭಿವೃದ್ಧಿ ನಿಧಿ ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ವಿಧಾನ ಪರಿಷತ್ ಸದಸ್ಯರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅನುದಾನದ ಒದಗಿಸಿದರೂ ಒಂದು ವರ್ಷದಲ್ಲಿ ಹೊಸ ಹೈಟೆಕ್‌ ಕಟ್ಟಡ ಹಾಗೂ ಸೌಲಭ್ಯ ಒದಗಿಸಲು ಸಾಧ್ಯವಿದೆ. ಇವರು ಅಭಿವೃದ್ಧಿಗೆ ಮನಸ್ಸು ಮಾಡಬೇಕು ಅಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT