ತುಮಕೂರಿನಲ್ಲಿ ಶನಿವಾರ ಕೃಷಿ ಇಲಾಖೆ ಆಯೋಜಿಸಿದ್ದ ಸಿರಿ ಧಾನ್ಯ ಹಬ್ಬಕ್ಕೆ ಸಚಿವ ಜಿ.ಪರಮೇಶ್ವರ ಎತ್ತಿನಗಾಡಿಯಲ್ಲಿ ಬಂದರು
ರೈತರ ಬೆನ್ನು ಮುರಿಯಬಾರದು
‘ರೈತರ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕೆಲವು ಸಲ ಉತ್ಪನ್ನಗಳನ್ನು ಮಾರಾಟ ಮಾಡಿ 6 ತಿಂಗಳು ಕಳೆದರೂ ಎಪಿಎಂಸಿ ಕೃಷಿ ಇಲಾಖೆಯಿಂದ ರೈತರಿಗೆ ದುಡ್ಡು ಬರಲ್ಲ. ಉತ್ಪನ್ನ ಮಾರಾಟ ಮಾಡಿದ ತಕ್ಷಣಕ್ಕೆ ಹಣ ನೀಡುವ ವ್ಯವಸ್ಥೆ ಬರಬೇಕು. ಸರ್ಕಾರ ಈ ಬಗ್ಗೆ ಗಮನ ಹರಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು. ಸಿರಿ ಧಾನ್ಯ ಹಬ್ಬ ಉದ್ಘಾಟಿಸಿ ಮಾತನಾಡಿ ರೈತರು ದೇಶದ ಬೆನ್ನೆಲುಬು ಎನ್ನುತ್ತೇವೆ. ಆದರೆ ಅವರ ಬೆನ್ನು ಮುರಿಯುವ ಕೆಲಸ ಮಾಡಬಾರದು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಕೈ ಸಾಲ ಬ್ಯಾಂಕ್ ಸಾಲ ಜಾಸ್ತಿ ಆಗಿದೆ ಎಂದು ಕೆಟ್ಟ ಆಲೋಚನೆ ಮಾಡಬಾರದು. ಕೈ ಸಾಲ ಕೊಡುವ ಪದ್ಧತಿ ನಿಲ್ಲಬೇಕು. ಶೋಷಣೆ ಮಾಡಬಾರದು ಎಂಬ ಕಾನೂನು ತಂದಿದ್ದೇವೆ ಎಂದು ಹೇಳಿದರು. ಸಿರಿ ಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಹಾಸ್ಟೆಲ್ಗಳಲ್ಲಿ ಸಿರಿ ಧಾನ್ಯಗಳ ಬಳಕೆ ಹೆಚ್ಚು ಮಾಡಬೇಕು ಎಂದು ತಿಳಿಸಿದ್ದೇವೆ. ಸಿರಿ ಧಾನ್ಯಗಳನ್ನು ಕ್ವಿಂಟಲ್ಗಟ್ಟಲೆ ಕೊಳ್ಳುವುದು ಕಡಿಮೆಯಾಗಿದೆ. ಹೀಗಾಗಿ ಹಾಸ್ಟೆಲ್ಗಳ ಮೂಲಕ ರೈತರಿಗೆ ಮಾರುಕಟ್ಟೆಯ ವ್ಯವಸ್ಥೆ ಮಾಡಲಾಗುವುದು ಎಂದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಜಿ.ಪಂ ಸಿಇಒ ಜಿ.ಪ್ರಭು ಜಂಟಿ ಕೃಷಿ ನಿರ್ದೇಶಕ ಎನ್.ರಮೇಶ್ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ಸಿ.ಪಾಪಣ್ಣ ರಾಜ್ಯ ಪ್ರತಿನಿಧಿ ಜಿ.ಕೆ.ಅನಸೂಯ ಕಳಸೇಗೌಡ ಇತರರು ಹಾಜರಿದ್ದರು.