ತುಮಕೂರು: ಸಮಸ್ತರು ರಂಗ ಸಂಸ್ಥೆಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಂಗೊಳ್ಳಿ ರಾಯಣ್ಣ’ ಐತಿಹಾಸಿಕ ನಾಟಕ ಯಶಸ್ವಿಯಾಗಿ ಮೂಡಿ ಬಂತು.
ಬಸವೇಗೌಡ ನಿರ್ದೇಶನದಲ್ಲಿ ಕಲಾವಿದರು ತಮ್ಮ ಅಚ್ಚುಕಟ್ಟಾದ ಅಭಿನಯದ ಮೂಲಕ ವೀಕ್ಷಕರ ಗಮನ ಸೆಳೆದರು. ರಾಹುಲ್, ದರ್ಶನ್ ಇತರರು ಉತ್ತಮವಾಗಿ ಅಭಿನಯಿಸಿದರು. ಸಂಗೊಳ್ಳಿ ರಾಯಣ್ಣನ ಜೀವನ, ದೇಶಭಕ್ತಿ, ತ್ಯಾಗ-ಬಲಿದಾನಗಳನ್ನು ನಾಟಕದ ಮೂಲಕ ಕಟ್ಟಿ ಕೊಡಲಾಯಿತು.
ರಂಗ ನಿರ್ದೇಶಕ ಮೆಳೇಹಳ್ಳಿ ದೇವರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಎಲ್ಲವೂ ಸ್ವಕೇಂದ್ರಿತಗೊಂಡು ನಾನು, ನನ್ನದು ಎಂಬ ಭಾವ ಅತಿಯಾಗಿದೆ. ಮನಸ್ಸು-ಮನಸ್ಸಿನ ಮಧ್ಯೆ ಕಂದಕ ಸೃಷ್ಟಿಯಾಗುತ್ತಿದೆ. ಸಾಂಸ್ಕೃತಿಕ ಮನಸ್ಥಿತಿಯಿಂದ ದೂರವಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕ ನಾಗರಾಜರಾವ್, ‘ಮಕ್ಕಳನ್ನು ರಂಗಭೂಮಿಯ ಕಡೆಗೆ ಹೇಗೆ ತೊಡಗಿಸಬೇಕು. ಅದರ ಪ್ರಯೋಜನೆ ಏನು? ಮುಂದಿನ ದಿನಮಾನಗಳಲ್ಲಿ ಯಾವ ರೀತಿ ಕೆಲಸ ಮಾಡಬಹುದು’ ಎಂಬುದರ ಕುರಿತು ತಿಳಿಸಿದರು.
ನವೋದಯ ಐಎಎಸ್ ಅಕಾಡೆಮಿಯ ನಿರ್ದೇಶಕ ಉದಯ್ ಸಾಗರ್ ಉಪಸ್ಥಿತರಿದ್ದರು.