ಸೋಮವಾರ, 8 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಡೆಂಗಿ ಸೋಂಕು ಏರಿಕೆಯಿಂದ ಆತಂಕ: ರಕ್ತ ಮಾದರಿ ತಪಾಸಣೆ ಹೆಚ್ಚಳ

Published 5 ಜುಲೈ 2024, 5:03 IST
Last Updated 5 ಜುಲೈ 2024, 5:03 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಎಂಟು ವರ್ಷಗಳ ಬಳಿಕ ಡೆಂಗಿ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಗುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಆರೋಗ್ಯ ಇಲಾಖೆ ಶಂಕಿತ ರೋಗಿಗಳ ರಕ್ತ ಮಾದರಿಯ ಎಲಿಸಾ ತಪಾಸಣೆ ಪ್ರಮಾಣ ಹೆಚ್ಚಿಸಿದೆ.

ಪ್ರತಿವರ್ಷ ತೀರಾ ಅಗತ್ಯ ಬಿದ್ದರೆ ಮಾತ್ರ ರಕ್ತ ಮಾದರಿಯ ಎಲಿಸಾ ತಪಾಸಣೆ ನಡೆಸಲಾಗುತ್ತಿತ್ತು. ಈ ಬಾರಿ ಅರ್ಧ ವರ್ಷ ಕಳೆಯುವಷ್ಟರಲ್ಲಿಯೇ 1,653 ಜನರ ರಕ್ತದ ಮಾದರಿಯ ಎಲಿಸಾ ವಿಧಾನದ ತಪಾಸಣೆ ನಡೆಸಲಾಗಿದೆ. ಈ ಪೈಕಿ 113 ಜನರಲ್ಲಿ ಡೆಂಗಿ ಸೋಂಕು ದೃಢಪಟ್ಟಿದೆ.

2016ರಲ್ಲಿ ಒಂದೇ ವರ್ಷದಲ್ಲಿ ಜಿಲ್ಲೆಯಲ್ಲಿ 386 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಈವರೆಗಿನ ದಾಖಲೆ ಆಗಿತ್ತು. ಆ ಬಳಿಕ ಡೆಂಗಿ ಸೋಂಕು ಪ್ರಮಾಣ ತೀವ್ರ ಇಳಿಕೆಯಾಗಿತ್ತು. 2023ರಲ್ಲಿ 105 ಡೆಂಗಿ ಪ್ರಕರಣಗಳು ವರದಿಯಾಗಿದ್ದವು. ಈ ಬಾರಿ ಮಳೆಗಾಲ ಆರಂಭದ ಹೊತ್ತಲ್ಲಿ ಸೋಂಕಿತರ ಸಂಖ್ಯೆ ಏಕಾಏಕಿ ವೃದ್ಧಿಸಿದೆ.

‘ಡೆಂಗಿ ಸೋಂಕು ಉಲ್ಬಣಗೊಳ್ಳುತ್ತಿರುವ ಪರಿಣಾಮ ಆರೋಗ್ಯ ಇಲಾಖೆಯಿಂದ ಸಾಧ್ಯವಾದಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪ್ರತಿನಿತ್ಯ ಜಿಲ್ಲೆಯ ಎಲ್ಲ ಆಸ್ಪತ್ರೆ, ರಕ್ತ ತಪಾಸಣಾ ಪ್ರಯೋಗಾಲಯಗಳಿಂದ ಮಾಹಿತಿ ಸಂಗ್ರಹಿಸುವ ಜತೆಗೆ ಡೆಂಗಿ ಲಕ್ಷಣ ಹೊಂದಿದ್ದವರ ರಕ್ತದ ಮಾದರಿ ಸಂಗ್ರಹಿಸಲಾಗುತ್ತಿದೆ. ಅವುಗಳನ್ನು ಕಾರವಾರದಲ್ಲಿರುವ ಸರ್ವೇಕ್ಷಣಾ ಕಚೇರಿಯಲ್ಲಿನ ಪ್ರಯೋಗಾಲಯದಲ್ಲಿ ಎಲಿಸಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಡೆಂಗಿ ಸೋಂಕು ಹರಡಿರುವುದು ಖಚಿತವಾಗುತ್ತದೆ’ ಎಂದು ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ತಿಳಿಸಿದರು.

‘2023ರಲ್ಲಿ ಜನವರಿಯಿಂದ ಜುಲೈ ಮೊದಲ ವಾರದವರೆಗೆ ಕೇವಲ 230 ರಕ್ತ ಮಾದರಿಯನ್ನು ಎಲಿಸಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಬಾರಿ ಅದರ ಐದು ಪಟ್ಟು ಹೆಚ್ಚು ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕಿತರನ್ನು ಸಾಧ್ಯವಾದಷ್ಟು ಬೇಗ ಪತ್ತೆ ಹಚ್ಚಿ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.

ತೋಟ ಬಂದರಿನಲ್ಲಿ ಅಪಾಯ

ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಮೀನುಗಾರಿಕೆ ಚಟುವಟಿಕೆ ನಡೆಯುವ ಬಂದರು ಮತ್ತು ಮೀನುಗಾರರ ಕಾಲೊನಿಗಳಲ್ಲಿ ಅಡಿಕೆ ತೋಟಗಳಿರುವ ಪ್ರದೇಶಗಳಲ್ಲಿ ಹೆಚ್ಚು ವರದಿಯಾಗಿದೆ. ಅಂಕೋಲಾದಲ್ಲಿ 31 ಹೊನ್ನಾವರದಲ್ಲಿ 29 ಮತ್ತು ಕುಮಟಾದಲ್ಲಿ 12 ಪ್ರಕರಣಗಳು ವರದಿಯಾಗಿವೆ. 8 ಪ್ರಕರಣಗಳು ನಗರ ವ್ಯಾಪ್ತಿಯಲ್ಲಿ 105 ಪ್ರಕರಣಗಳು ಗ್ರಾಮೀಣ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ‘ಮೀನುಗಾರಿಕೆ ಚಟುವಟಿಕೆ ನಡೆಯುವ ಸ್ಥಳಗಳಲ್ಲಿ ದೋಣಿ ಟೈರ್ ಪ್ಲಾಸ್ಟಿಕ್ ಟಬ್‍ಗಳು ಸೇರಿದಂತೆ ಮಳೆನೀರು ನಿಲ್ಲಲು ಅವಕಾಶ ಮಾಡಿಕೊಡಲಾಗುತ್ತಿದೆ. ಅಡಿಕೆ ತೋಟದಲ್ಲಿ ಅಡಿಕೆಯ ಹಾಳೆಗಳಲ್ಲಿ ಮಳೆನೀರು ನಿಲ್ಲಲು ಅವಕಾಶವಾಗುತ್ತಿದೆ. ಹೀಗಾಗಿ ಇಂತಹ ಸ್ಥಳಗಳ ವ್ಯಾಪ್ತಿಯಲ್ಲಿ ಸೋಂಕು ಹೆಚ್ಚು ಹರಡುತ್ತಿದೆ. ಜನರಿಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದ್ದರೂ ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ವೈದ್ಯಾಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಹೆಚ್ಚು ನೀರು ಸೇವನೆ ವಿಶ್ರಾಂತಿ ಅಗತ್ಯ

‘ಡೆಂಗಿ ಸೋಂಕು ತಗುಲಿದರೆ ಜನರು ಆತಂಕಪಡುವ ಅಗತ್ಯವಿಲ್ಲ. ಹಾಗಂತ ನಿರ್ಲಕ್ಷಿಸಲೂ ಬಾರದು. ಜ್ವರ ಸುಸ್ತು ಮೈಕೈ ನೋವಿನ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅವುಗಳಿಗೆ ಚಿಕಿತ್ಸೆ ಪಡೆಯಬೇಕು. ನೀರು ಸೇವನೆ ಹೆಚ್ಚಿಸುವ ಜತೆಗೆ ಬಿಸಿ ಆಹಾರ ಸೇವನೆ ಹೆಚ್ಚು ವಿಶ್ರಾಂತಿ ಪಡೆದರೆ ಗುಣಮುಖಗೊಳ್ಳಬಹುದು’ ಎನ್ನುತ್ತಾರೆ ಡಾ.ಕ್ಯಾಪ್ಟನ್ ರಮೇಶ ರಾವ್.

ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಶಕ್ತಮೀರಿ ಕೆಲಸ ಮಾಡುತ್ತಿದೆ. ಸೊಳ್ಳೆಗಳ ನಿಯಂತ್ರಣ ಸ್ವಚ್ಛತೆ ವಿಚಾರದಲ್ಲಿ ಸಾರ್ವಜನಿಕರಿಂದ ಅಗತ್ಯ ಸಹಕಾರ ಬೇಕಿದೆ
-ಡಾ.ಕ್ಯಾಪ್ಟನ್ ರಮೇಶ ರಾವ್ ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT