ಹೊಸಪೇಟೆ (ವಿಜಯನಗರ): ರೈತರಿಗೆ ಕತ್ತೆ ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರ ನಡೆಸುತ್ತಿದ್ದ ಜೆನ್ನಿಮಿಲ್ಕ್ ಕಂಪನಿಯಿಂದ 318ಕ್ಕೂ ಅಧಿಕ ರೈತರಿಗೆ ಮೋಸ ಹೋಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಸೋಮವಾರ ಇಲ್ಲಿ ಬಂಧಿಸಿದ್ದಾರೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೇದಯಪಾಳ್ಯಂ ಗ್ರಾಮದ ನೂತಲಪಾಟಿ ಮುರುಳಿ (43), ಕಂಪನಿಯ ವ್ಯವಸ್ಥಾಪಕ ಕಡಪ ಜಿಲ್ಲೆಯ ಗಾಲೀವೀಡು ಗ್ರಾಮದ ಕಾವಲಪಲ್ಲಿ ಉಮಾಶಂಕರ್ ರೆಡ್ಡಿ (33) ಹಾಗೂ ಕಂಪನಿಯ ಸೂಪರ್ವೈಸರ್ ಆಗಿದ್ದ ಕಡಪ ಜಿಲ್ಲೆಯ ಪೋರ್ ಮಾಮಿಲ್ಲ ಮಂಡಲಂ ಗ್ರಾಮದ ಸೈಯದ್ ಮಹಮ್ಮದ್ ಗೌಸ್ (27) ಬಂಧಿತ ಆರೋಪಿಗಳು.
‘ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗುತ್ತದೆ, ರೈತರು ತಾಳ್ಮೆಯಿಂದ ಇರಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್. ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಂಪನಿಯ ಐದು ಬ್ಯಾಂಕ್ ಖಾತೆಗಳನ್ನು (ಹೊಸಪೇಟೆಯಲ್ಲಿ ಮೂರು, ಅಂಧ್ರದಲ್ಲಿ ಎರಡು) ಮುಟ್ಟುಗೋಲು ಹಾಕಿಕೊಳ್ಳಲಾಗಿದೆ, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ ಇನ್ನಷ್ಟು ಮಾಹಿತಿ ಲಭಿಸಬಹುದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಶ್ರೀಹರಿಬಾಬು ತಿಳಿಸಿದರು.