ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿ | ಅವೈಜ್ಞಾನಿಕ ಕಾಲುವೆ ಕಾಮಗಾರಿ: ಕೋಟ್ಯಾಂತರ ಅನುದಾನ ವ್ಯಯ

Published : 12 ಸೆಪ್ಟೆಂಬರ್ 2024, 6:33 IST
Last Updated : 12 ಸೆಪ್ಟೆಂಬರ್ 2024, 6:33 IST
ಫಾಲೋ ಮಾಡಿ
Comments

ಇಂಡಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಕಾಲುವೆ ನೀರಾವರಿ ಕೆಲಸಗಳಲ್ಲಿ ಒಂದಾದ ಗೋಗಿಹಾಳ ಗ್ರಾಮದಿಂದ ಗೋಳಸಾರ-ಶಿವಪೂರ ಗ್ರಾಮಗಳವರೆಗೆ ನಿರ್ಮಾಣವಾಗಿರುವ ಕಾಲುವೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕಳೆದ 22 ವರ್ಷಗಳಿಂದ ಈ ಕಾಲುವೆಗೆ ನೀರು ಹರಿದಿಲ್ಲ.

ಇಂಡಿ ಮುಖ್ಯ ಕಾಲುವೆಯಿಂದ ಗೋಗಿಹಾಳ-ಸಂಗೋಗಿ ಗ್ರಾಮಗಳ ಹತ್ತಿರ ಒಡೆದು ಡಿಸ್ಟ್ರೀಬ್ಯೂಟರ್ 19ನೇ ಕಾಲುವೆಯ ಕೆಲಸ ಸುಮಾರು 1984 ರಲ್ಲಿಯೇ ಪೂರ್ಣಗೊಂಡಿದೆ.

ಇಲ್ಲಿಯವರೆ ಈ ಕಾಲುವೆಗೆ ನೀರು ಹರಿದಿಲ್ಲ. ಸುಮಾರು 32 ಕಿಲೋ ಮೀಟರ್ ಉದ್ದದ ಈ ಕಾಲುವೆಗೆ ಕೋಟ್ಯಾಂತರ ಹಣ ಖರ್ಚಾಗಿದೆ. ಇದರಿಂದ ಸುಮಾರು 2500 ಹೆಕ್ಟೆರ್‌ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಈ ಕಾಮಗಾರಿ ಸಂಪೂರ್ಣ ವ್ಯರ್ಥವಾಗಿದೆ ಎಂದು ರೈತರು ದೂರುತ್ತಾರೆ.

ಸಂಗೋಗಿ ಗ್ರಾಮದಿಂದ 12 ರಿಂದ 15 ಕಿಲೋ ಮೀಟರ್ ವರೆಗೆ ಕಾಂಕ್ರಿಟ್‌ನಿಂದ ಬ್ಯಾಂಕ್ ವರ್ಕ ಮಾಡಬೇಕಾಗಿತ್ತು. ಈ ಬ್ಯಾಂಕ್ ವರ್ಕ ಎಲ್ಲಾ ಕಡೆ ಕಾಂಕ್ರೀಟ್‌ದಿಂದಲೇ ಮಾಡುತ್ತಾರೆ.

ಆದರೆ, ಇಲ್ಲಿ ಮಣ್ಣಿನ ಏರಿಯಿಂದ ಬ್ಯಾಕ್ ವರ್ಕ ಮಾಡಿದ್ದರಿಂದ ಮುಖ್ಯ ಕಾಲುವೆಯಿಂದ ನೀರು ಹರಿಸಿದರೆ ಮಣ್ಣಿನಿಂದ ಮಾಡಿದ ಬ್ಯಾಂಕ್ ವರ್ಕ್ ಕುಸಿಯುತ್ತದೆ. ಮುಂದೆ 32 ಕಿಲೋ ಮೀಟರ್ ವರೆಗೆ ನೀರು ತಲುಪಲು ಎಷ್ಟು ಪ್ರಮಾಣದಲ್ಲಿ ನೀರು ಬಿಡಬೇಕೋ ಅಷ್ಟು ಬಿಟ್ಟರೆ 12 ಕಿಲೋ ಮೀಟರ್‌ದಲ್ಲಿ ಮಾಡಿರುವ ಮಣ್ಣಿನ ಬ್ಯಾಂಕ್ ವರ್ಕ ಕಾಲುವೆಯ ಮೇಲೆ ನೀರು ಹರಿಯುತ್ತವೆ. ಇದರಿಂದ ಕಾಲುವೆ ಒಡೆದುಹೋಗುತ್ತದೆ. ಈ ಕಾರಣದಿಂದ ಅಧಿಕಾರಿಗಳು ಈ ಕಾಲುವೆಗೆ ನೀರು ಹರಿಸುವುದನ್ನೇ ಬಿಟ್ಟಿದ್ದಾರೆ.

ಇದರಲ್ಲಿ ಕೆಲವು ಸಲ ಮಾತ್ರ ಚಿಕ್ಕ ಪ್ರಮಣದ ನೀರು ಹರಿಸುತ್ತಾರೆ. ಅದು ಕೇವಲ 10 ರಿಂದ 12 ಕಿಲೋ ಮೀಟರ್‌ವರೆಗೆ ಮಾತ್ರ ನೀರು ಹರಿಯುತ್ತದೆ. ಮುಂದಿನ ಗ್ರಾಮಗಳಿಗೆ ನೀರು ಹರಿಯುವುದಿಲ್ಲ. ಇದರಿಂದ ಶಿರಶ್ಯಾಡ, ನಾದ, ಗೋಳಸಾರ, ಶಿವಪೂರ ಗ್ರಾಮಗಳ ರೈತರಿಗೆ ನೀರು ತಲುಪುತ್ತಿಲ್ಲ.

ಕಳೆದ ಸರ್ಕಾರದಲ್ಲಿ ವಿಜಯಪೂರ ಜಿಲ್ಲೆಯ ಪ್ರಮುಖ ಎಂ.ಬಿ.ಪಾಟೀಲರೇ ನೀರಾವರಿ ಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಈ ಕಾಲುವೆಯ ಬಗ್ಗೆ ಈ ಭಾಗದ ರೈತರು ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಈ ಭಾಗದಲ್ಲಿ ಬರಗಾಲವಿದೆ. ಕಾಲುವೆ ನಿರ್ಮಾಣಕ್ಕೆ ರೈತರು ಜಮೀನು ನೀಡಿದ್ದಾರೆ. ಇನ್ನೂಳಿದ ಜಮೀನುಗಳಿಗೆ ನೀರು ಬರುತ್ತದೆ ಎಂದು ಆಸೆ ಗಣ್ಣಿನಿಂದ ಕಾಯುತ್ತಿದ್ದಾರೆ. ಸರ್ಕಾರ ಕಾಲುವೆ ಸರಿಪಡಿಸಿ, ನೀರು ಹರಿಸುವ ಮೂಲಕ 2500 ಹೆಕ್ಟೇರ್‌ ಪ್ರದೇಶವನ್ನು ನೀರಾವರಿಗೆ ಒಳಪಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಡಿಸ್ಟ್ರೀಬ್ಯೂಟರ್ 19ನೇ ಕಾಲುವೆಯ ಯೋಜನೆ ಅವೈಜ್ಞಾನಿಕವಾಗಿದೆ. ಕಾಲುವೆಗೆ ನೀರು ಬರುತ್ತಿಲ್ಲ. ಸರ್ಕಾರ ಸರಿಪಡಿಸಿ ನೀರು ಹರಿಸಬೇಕು.
ಎಸ್.ಟಿ.ಪಾಟೀಲ ನಾದ ಗ್ರಾಮದ ನೀರು ಬಳಕೆದಾರರ ಸಹಕಾರಿ ಸಂಘದ ಅಧ್ಯಕ್ಷ
ನಮ್ಮ ಗ್ರಾಮಗಳಿಗೆ ನೀರು ಬರುತ್ತದೆ ಎಂದು ರೈತರು ಕಾಲುವೆ ಕೆಲಸಕ್ಕೆ ಭೂಮಿ ನೀಡಿದ್ದಾರೆ. ಈಗ ಬರೀ ಕಾಲುವೆ ಬಂದಿದೆ. ನೀರು ಬಂದಿಲ್ಲ. ನೀರು ಹರಿಸಬೇಕು
ಎಂ.ಆರ್.ಪಾಟೀಲ ಗೋಳಸಾರ ಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT