ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ; ತುಕ್ಕು ಹಿಡಿದ ಪೊಲೀಸ್ ಆಡಳಿತ ವ್ಯವಸ್ಥೆಗೆ ಬೇಕು ಚಿಕಿತ್ಸೆ

ಜಿಲ್ಲೆಯಲ್ಲಿ ಅಕ್ರಮ ಮರಳು ಗಾಡಿಗಳಿಗೆ ಹಿಡಿತವಿಲ್ಲ, ಮಟ್ಕಾ, ಗಾಂಜಾ ಮಾರಾಟವೂ ವ್ಯಾಪಕ
Published 15 ಜುಲೈ 2024, 6:07 IST
Last Updated 15 ಜುಲೈ 2024, 6:07 IST
ಅಕ್ಷರ ಗಾತ್ರ

ಯಾದಗಿರಿ: ‘ಪೊಲೀಸರು ಎಂದರೆ ಶಿಸ್ತು, ಸಂಯಮ ಹಾಗೂ ಕಾನೂನು ಪಾಲನೆ ಮತ್ತು ಅನುಷ್ಠಾನ ಮಾಡುವ ಗುರುತರ ಜವಾಬ್ದಾರಿ ಅವರ ಹೆಗಲ ಮೇಲಿದೆ. ಆದರೆ, ಜಿಲ್ಲೆಯಲ್ಲಿ ಪೊಲೀಸ್‌ ಆಡಳಿತ ವ್ಯವಸ್ಥೆ ತುಕ್ಕು ಹಿಡಿದಿದೆ. ಸಾಣೆ ಹಿಡಿಯುವ ಕೆಲಸವಾಗಬೇಕಾಗಿದೆ’ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಲಿದೆ.

ಈಚೆಗೆ ಗುರುಮಠಕಲ್ ಪಟ್ಟಣದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅಲ್ಲಿನ ಶಾಸಕ ಶರಣಗೌಡ ಕಂದಕೂರ ಅವರು ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ಅಸಮಾಧಾನದ ಜತೆಗೆ ರಾಜೀನಾಮೆಯ ಮಾತನಾಡಿದ್ದರು. ಜತೆಗೆ ಯಾದಗಿರಿಯಲ್ಲಿ ಮರಳು ಮಾಫಿಯಾಕ್ಕೆ ಸಂಬಂಧಿಸಿದ ಶಾಸಕರ ಕುಟುಂಬದ ವಿರುದ್ಧವೂ ಮಾತುಗಳು ಕೇಳಿಬಂದವು. ಒಟ್ಟಾರೆ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ಮಾತುಗಳು ಕೇಳಿಬರುತ್ತಿವೆ.

ಗುರುಮಠಕಲ್ ಸೇರಿದಂತೆ ಯಾದಗಿರಿ ಜಿಲ್ಲೆಯಲ್ಲಿ  ಮರಳು ಅಕ್ರಮ ಗಾಡಿಗಳಿಗೆ ಹಿಡಿತವಿಲ್ಲ. ಮಟ್ಕಾ ಮತ್ತು ಗಾಂಜಾ ಮಾರಾಟವೂ ವ್ಯಾಪಕವಾಗಿದೆ. ‘ಜೂಜಾಟವನ್ನೂ ಪೊಲೀಸ್‌ ಇಲಾಖೆ ನಿಯಂತ್ರಿಸಲಾಗುತ್ತಿಲ್ಲ’ ಎನ್ನುವ ಆರೋಪವನ್ನು ಜುಲೈ 4 ರಂದು ಜರುಗಿದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರು ಗಮನಕ್ಕೆ ತಂದಿದ್ದರು.

ಅದಕ್ಕೆ ಗುರುಮಠಕಲ್ ಶಾಸಕರೂ ಕೂಡ ವೇದಿಕೆಯ ಮೇಲೆಯೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರ ಎದುರುಗಡೆ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಾ ‘ಎಲ್ಲೇರಿಯಿಂದ ನನಗೆ ಸಾಕಷ್ಟು ಕರೆಗಳು ಬರುತ್ತಿವೆ. ಮರಳು ಅಕ್ರಮ ಸಾಗಾಟದ ಕುರಿತು ಬರುವ ದೂರುಗಳನ್ನು ನಾನು ಹಲವುಬಾರಿ ತಿಳಿಸಿದರೂ ಕ್ರಮವಾಗಿಲ್ಲ. ನನ್ನ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಮ್ಮ ಇಲಾಖೆ ಕ್ರಮವಹಿಸದಾಗಿದೆ’ ಎನ್ನುವ ಅರ್ಥದ ಮಾತುಗಳನ್ನಾಡಿದ್ದರು.

‘ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮರಳುಗಾರಿಕೆ ಅಕ್ರಮ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳ ವಿರುದ್ಧ ಸಂಘಟನೆಗಳ ನಾಯಕರು, ಸಾಮಾಜಿಕ ಕಾರ್ಯಕರ್ತರು ಧ್ವನಿಯೆತ್ತಿದ್ದಾರೆ. ಕೂಡಲೇ ಮರಳು ಅಕ್ರಮ ಸಾಗಾಟ ನಿಲ್ಲಿಸಬೇಕು. ಇದರಲ್ಲಿ ದೊಡ್ಡವರು ಶಾಮೀಲಾಗಿದ್ದಾರೆ ಎಂದು ದೂರುಗಳೂ ಸುತ್ತಿತ್ತಿವೆ. ಇಷ್ಟಾದರೂ ಸಂಬಂಧಿತ ಅಧಿಕಾರಿಗಳು ಏನೇನು ಕ್ರಮ ವಹಿಸಿದ್ದಾರೆ ಎನ್ನುವುದು ಮಾತ್ರ ಜನತೆಗೆ ಹೇಳುತ್ತಿಲ್ಲವಲ್ಲ’ ಎಂದು ಹಿರಿಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಶಹಾಪುರ ಠಾಣೆಯು ಹಸಿರು ಹುಲ್ಲಿನಂತೆ ಆಗಿದೆ. ರಾಜಕೀಯ ಪ್ರಭಾವ ಬಳಸಿಕೊಂಡು ಬರುವ ಇಲ್ಲಿನ ಅಧಿಕಾರಿಗಳು ಮುಖಂಡರ ಮರ್ಜಿಯಲ್ಲಿಯೇ ಕೆಲಸ ನಿರ್ವಹಿಸಬೇಕು. ಕೃಷ್ಣಾ ನದಿಯಿಂದ ಮರಳು ಸಾಗಣೆಯ ಮಾಫಿಯಾ ಇವರಿಗೆ ಹೆಚ್ಚು ಆದಾಯ ತರುವ ವಾಮ ಮಾರ್ಗವಾಗಿದೆ. ಸ್ವತಃ ಕೆಲ ಪೊಲೀಸರು ಸ್ವಂತ ಟಿಪ್ಪರ್‌ ಇಟ್ಟು ಮರಳು ಅಕ್ರಮವಾಗಿ ಸಾಗಣೆ ಮಾಡುವುದು ಗುಟ್ಟಾಗಿ ಉಳಿದಿಲ್ಲ. ತಾಲ್ಲೂಕಿನಲ್ಲಿ ಒಂದೊಂದು ಠಾಣೆ ಒಬ್ಬ ಪ್ರಭಾವಿ ವ್ಯಕ್ತಿಯ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗತ್ತಲಿವೆ’ ಎನ್ನುತ್ತಾರೆ ಬಿಜೆಪಿಯ ಹಿರಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.

ಗುರುಮಠಕಲ್ ತಾಲ್ಲೂಕಿನಲ್ಲಿ ಎಲ್ಲೇರಿ ಮೂಲಕ ಮರಳು ಸಾಗಾಟ ನಡೆಸಲಾಗುತ್ತಿತ್ತು. ಈಗ ಶಾಸಕರು ಗರಂ ಆದ ನಂತರ ಸದ್ಯ ಕೊಂಕಲ್ ಮಾರ್ಗದಲ್ಲಿ ಸಾಗಾಟವಾಗುತ್ತಿದೆ. ತಾಲ್ಲೂಕಿನ ವಿವಿಧ ರಸ್ತೆಗಳಲ್ಲಿ ರಾತ್ರಿ ವೇಳೆ ಮರಳು ಹೊತ್ತ ಟ್ರ್ಯಾಕ್ಟರ್‌ಗಳ ಸಾಲು ಮೆರವಣಿಗೆಯಂತೆ ಸಾಗುತ್ತಿವೆ. ಜತೆಗೆ ಅತಿ ವೇಗದಲ್ಲಿ ಟ್ರ್ಯಾಕ್ಟರ್ ಚಲಾಯಿಸುವುದರಿಂದ ರಾತ್ರಿ ಸಮಯ ವಾಹನಗಳು ಚಲಾಯಿಸಲೂ ಭಯವಾಗುತ್ತಿದೆ ಎನ್ನುವುದು ವಾಹನ ಸವಾರರ ಗೋಳು.

‘ಆಯಾ ಠಾಣೆಯ ವ್ಯಾಪ್ತಿಯ ಅಧಿಕಾರಿ ನೊಂದ ಜನತೆ ಠಾಣೆಗೆ ತೆರಳಿ ದೂರು ನೀಡಲು ಮುಂದಾದರೆ ಸೌಜನ್ಯವಾಗಿ ವರ್ತಿಸದ ಅಧಿಕಾರಿ ವಿರುದ್ಧ ಮೇಲಧಿಕಾರಿ ಡಿವೈಎಸ್ಪಿ ಹಾಗೂ ಎಸ್ಪಿ ಅವರಿಗೆ ಮೊಬೈಲ್ ಮೂಲಕ ಮಾಹಿತಿ ನೀಡಿದರೆ ಕನಿಷ್ಠ ಸೌಜನ್ಯದಿಂದ ವರ್ತಿಸುವುದಿಲ್ಲ. ಸಮಸ್ಯೆಯನ್ನು ಆಲಿಸುವುದಿಲ್ಲ. ಮತ್ತೆ ಯಾರ ಮುಂದೆ ಗೋಳು ಹೇಳಬೇಕು’ ಎಂಬ ಪ್ರಶ್ನೆ ಜನತೆಯದ್ದಾಗಿದೆ.

ಜಿಲ್ಲೆಯಲ್ಲಿ ಪೊಲೀಸ್‌ ಆಡಳಿತ ಹದಗೆಟ್ಟಿದೆ. ಇದಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ಯಾವುದೇ ವ್ಯಕ್ತಿ ತನಗೆ ಆದ ಅನ್ಯಾಯ ಹಾಗೂ ನೊಂದ ವ್ಯಕ್ತಿ ಠಾಣೆಗೆ ತೆರಳಿದರೆ ಮುಕ್ತವಾಗಿ ದೂರು ನೀಡುವ ವಾತಾವರಣ ನಿರ್ಮಿಸಬೇಕು. ಆಯಾ ತಾಲ್ಲೂಕಿನ ಠಾಣೆಯ ವ್ಯಾಪ್ತಿಯ ಗ್ರಾಮದ ನಿವಾಸಿಗಳೂ ಆಗಿರುವ ಪೊಲೀಸರನ್ನು ನೆರೆ ತಾಲ್ಲೂಕಿಗೆ ವರ್ಗಾವಣೆ ಮಾಡಿ ಎಂಬ ಸಲಹೆ ಸಾರ್ವಜನಿಕರದ್ದಾಗಿದೆ.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್‌

ವಡಗೇರಾ ತಾಲ್ಲೂಕಿನ ಭೀಮಾ ನದಿ ವ್ಯಾಪ್ತಿಯಲ್ಲಿ ಸಂಗ್ರಹಿಸಿರುವ ಮರಳು
ವಡಗೇರಾ ತಾಲ್ಲೂಕಿನ ಭೀಮಾ ನದಿ ವ್ಯಾಪ್ತಿಯಲ್ಲಿ ಸಂಗ್ರಹಿಸಿರುವ ಮರಳು
ಗುರುಮಠಕಲ್‌ ತಾಲ್ಲೂಕು ವ್ಯಾಪ್ತಿಯಲ್ಲಿ ಮರಳು ಅಕ್ರಮ ಗಾಂಜಾ ಮಾರಾಟ ಮಟ್ಕಾ ಬುಕಿಂಗ್‌ ಇಸ್ಪೀಟ್‌ನಂತ ಅಕ್ರಮ ಚಟುವಟಿಕೆಗಳು ಮಿತಿ ಮೀರಿವೆ. ಅಧಿಕಾರಿಗಳಿಗೆ ಗೊತ್ತಿದ್ದೂ ಸುಮ್ಮನಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ
- ಶರಣಬಸಪ್ಪ ಎಲ್ಹೇರಿ ಕರವೇ ಅಧ್ಯಕ್ಷ
ಗಾಂಜಾ ಸೇವಿಸಿದ ಮಕ್ಕಳು ಈಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿಲ್ಲ. ತಂದೆ ತಾಯಿಗಳ ಗೋಳು ಹೇಳತೀರಾಗಿದೆ. ಕಾನೂನು ಅರಿವು ಮೂಡಿಸಿ ದಂಡ ವಿಧಿಸಿ. ಸರ್ಕಾರದ ಬೊಕ್ಕಸಕ್ಕೆ ಹಾನಿ ತಡೆಗಟ್ಟಿ
ಸಂಜು ಅಳೆಗಾರ ಸಾಮಾಜಿಕ ಕಾರ್ಯಕರ್ತ
ಜಿಲ್ಲೆಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವವರು ಇಲ್ಲದಂತೆ ಆಗಿದೆ. ಇದೇ ರೀತಿ ಮುಂದುವರಿದರೆ ಪೊಲೀಸ್‌ ಸ್ಟೇಷನ್‌ ಮುತ್ತಿಗೆ ಹಾಕುತ್ತೇವೆ
ನಾಗೇಶ ಗದ್ದಿಗೆ ಸಾಮಾಜಿಕ ಕಾರ್ಯಕರ್ತ
ಪೊಲೀಸ್‌ ಇಲಾಖೆಯ ನಿರ್ಲಕ್ಷ್ಯದಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ದಂಧೆಗಳು ನಡೆಯುತ್ತಿವೆ. ಮರಳು ಅಕ್ರಮ ಸಾಗಾಟದ ಬಗ್ಗೆ ಮಟ್ಕಾ ಜೂಜಾಟದ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಪೊಲೀಸ್‌ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಅಕ್ರಮ ಚಟುವಟಿಕೆಯಲ್ಲಿ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ
ಮಲ್ಲು ಪೊಲೀಸ್‌ ಪಾಟೀಲ ವಡಗೇರಾ
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಬಂದಂತೆಲ್ಲಾ ದಾಳಿ ಮಾಡಿ ಕ್ರಮ ವಹಿಸಲಾಗುತ್ತಿದೆ. ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ
ಜಿ.ಸಂಗೀತಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಪ್ರತ್ಯೇಕ ಸಂಚಾರ ಠಾಣೆ ಬೇಕು
ಶಹಾಪುರ: ನಗರ ಪ್ರದೇಶ ಬೆಳೆದು ನಿಂತಿದೆ. ಜನದಟ್ಟಣೆ ಹೆಚ್ಚಾಗಿದೆ. ನಗರದಲ್ಲಿ ದೊಡ್ಡ ಸಮಸ್ಯೆ ಎಂದರೆ ಮುಖ್ಯ ರಸ್ತೆಗೆ ಹೊಂದಿಕೊಂಡು ಅನ್ಯ ಮಾರ್ಗದ ಮೂಲಕ ಬೇರೆ ಕಡೆ ತೆರಳುವ ರಸ್ತೆ ಸಂಪರ್ಕದ ಬರವಿದೆ. ಎಲ್ಲರೂ ಹೆದ್ದಾರಿ ಮೇಲೆ ಬರುತ್ತಾರೆ. ಇದರಿಂದ ವಾಹನ ದಟ್ಟಣೆ ಅಧಿಕವಾಗಿದೆ. ನಗರದ ಹಳೆ ಬಸ್ ನಿಲ್ದಾಣ ಹೊಸ ಬಸ್ ನಿಲ್ದಾಣ ಬಸವೇಶ್ವರ ವೃತ್ತ ಸಿ.ಬಿ ಕಮಾನ ಬಳಿ ಹೆಚ್ಚಿನ ವಾಹನ ದಟ್ಟಣೆ ಇದೆ ಎನ್ನುತ್ತಾರೆ ಪೊಲೀಸರು. ನಗರದಲ್ಲಿ ಗ್ರಾಮೀಣ ಹಾಗೂ ನಗರ ಎರಡು ಪ್ರತ್ಯೇಕ ಠಾಣೆಯ ಅಗತ್ಯವಿದೆ. ಅಲ್ಲದೆ ಸಂಚಾರಿ ಠಾಣೆಯ ಕೂಗು ಹೆಚ್ಚುತ್ತಲಿದೆ. ಯಾರೂ ಗಮನಿಸುತ್ತಿಲ್ಲ. ಪ್ರತಿ ವರ್ಷ ಅಂಕಿ ಅಂಶಗಳನ್ನು ಸಲ್ಲಿಸುವುದು ನಮಗೆ ಸಾಕಾಗಿದೆ ಎಂಬ ಹತಾಶೆಯ ಮಾತುಗಳು ಪೊಲೀಸರಿಂದ ಕೇಳಿ ಬರುತ್ತಲಿವೆ. *** ಕಣ್ಣು ಮುಚ್ಚಿದ ಸಿಗ್ನಲ್ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಐದು ವರ್ಷದ ಹಿಂದೆ ಸಂಚಾರ ನಿಯಂತ್ರಣಕ್ಕೆ ಸಿಗ್ನಲ್ ಅಳವಡಿಸಿತ್ತು. ಕೆಲಸ ನಿರ್ವಹಿಸಿರುವುದಕ್ಕಿಂತ ಹೆಚ್ಚು ಕಣ್ಣು ಮುಚ್ಚಿದ್ದೆ ಜಾಸ್ತಿಯಾಗಿದೆ. ಸುಮಾರು ₹7ಲಕ್ಷ ವೆಚ್ಚದಲ್ಲಿ ಸಿಗ್ನಲ್ ಅಳವಡಿಸಿದ್ದಾರೆ. ಸದಾ ದುರಸ್ತಿಗಾಗಿ ಕಾಯ್ದು ಕುಳಿತಿವೆ. ವಿಚಿತ್ರವೆಂದರೆ ಇಂದಿಗೂ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವ  ಪೊಲೀಸ್‌ ಸಿಬ್ಬಂದಿಗೆ ನೆರಳಿನ ಆಸರೆ ಇಲ್ಲ. ರೈಟರ್‌ಗಳ ಕೈ ಚಳಕ ಶಹಾಪುರ: ತಾಲ್ಲೂಕಿನ ವಿವಿಧ ಠಾಣೆಯಲ್ಲಿ ಹಲವು ವರ್ಷದಿಂದ ಠಿಕಾಣಿ ಹೂಡಿರುವ ರೈಟರ್‌ಗಳ ತಮ್ಮ ಕೈ ಚಳಕವನ್ನು ಪ್ರದರ್ಶಿಸಿ ಮೇಲಧಿಕಾರಿಗಳ ದಾರಿ ತಪ್ಪಿಸುತ್ತಾರೆ. ವರ್ಗಾವಣೆಗೊಂಡು ಬರುವ ಅಧಿಕಾರಿಗಳು ಮೊದಲು ರೈಟರ್ ಅವರ ಮೇಲೆ ಅವಲಂಬನೆಯಾಗಿರುತ್ತಾರೆ. ಇದನ್ನು ಬಂಡವಾಳ ಮಾಡಿಕೊಂಡ ಕೆಲ ರೈಟರ್ ತನಿಖೆ ವಿಚಾರಣೆ ದಾರಿ ತಪ್ಪಿಸುತ್ತಾರೆ ಎಂಬ ಆರೋಪವು ಪೊಲೀಸ್‌ ಸಿಬ್ಬಂದಿಯಿಂದಲೇ ಕೇಳಿ ಬರುತ್ತಲಿದೆ. ಅಂತಹ ರೈಟರ್ ವರ್ಗಾವಣೆ ಮಾಡಿದರೆ ತುಸು ಠಾಣೆಯಲ್ಲಿ ಬದಲಾವಣೆ ತರಲು ಸಾಧ್ಯ ಎನ್ನುತ್ತಾರೆ ವಕೀಲರೊಬ್ಬರು.
ಸುರಪುರ: ಮರಳು ಅಕ್ರಮ ಅವ್ಯಾಹತ
ಸುರಪುರ: ‘ತಾಲ್ಲೂಕಿನಾದ್ಯಂತ ಮರಳು ಅಕ್ರಮ ಸಾಗಣೆ ಅವ್ಯಾಹತವಾಗಿ ನಡೆದಿದೆ. ಶೇ 10ರಷ್ಟು ರಾಜಧನ ಕಟ್ಟುತ್ತಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ‘ರಾಜಕೀಯ ಮುಖಂಡರ ಮರಳು ಟಿಪ್ಪರ್‌ಗಳನ್ನು ಪೊಲೀಸರು ಹಿಡಿಯುವುದಿಲ್ಲ. ನದಿ ಹತ್ತಿರದ ಪ್ರದೇಶಗಳಲ್ಲಿ ಕೋಟ್ಯಂತರ ಮೌಲ್ಯದ ಮರಳನ್ನು ಸಂಗ್ರಹಣೆ ಮಾಡಿದರೂ ಕೇಳುವವರಿಲ್ಲ’ ಎಂದು ದೂರಿದ್ದಾರೆ. ‘ಗ್ರಾಮಾಂತರ ಪ್ರದೇಶದಲ್ಲಿ ಇಸ್ಪೀಟು ರಾಜಾರೋಷವಾಗಿ ನಡೆಯುತ್ತಿದೆ. ಗ್ರಾಮದ ದೇವಸ್ಥಾನಗಳು ಇಸ್ಪೀಟು ಅಡ್ಡೆಗಳಾಗಿವೆ. ಪೊಲೀಸರು ಆಗಾಗ ದಾಳಿ ಮಾಡಿದರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮೀಣ ಭಾಗದ ಗೃಹಿಣಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ತಾಲ್ಲೂಕಿನಲ್ಲಿ ಕಲಹ ಜಗಳ ಕಳ್ಳತನ ಡಕಾಯಿತಿ ಕೊಲೆ ಪ್ರಕರಣಗಳು ವರದಿಯಾಗುತ್ತಿಲ್ಲ. ಇದು ಸಮಾಧಾನಕಾರ ಅಂಶ’ ಎಂದು ಜನರು ಪೊಲೀಸ್ ಇಲಾಖೆಯನ್ನು ಶ್ಲಾಘಿಸಿದ್ದಾರೆ. ‘ಅಲ್ಲಲ್ಲಿ ಮಟ್ಕಾ ಹಾವಳಿ ಇದೆ. ವಾಹನಗಳ ಅಪಘಾತಗಳು ನಡೆಯುತ್ತಿವೆ. ಮಟ್ಕಾ ಸಂಪೂರ್ಣ ತೊಲಗಿಸಬೇಕು. ಅಪಘಾತಕ್ಕೆ ಕಾರಣಗಳನ್ನು ಪತ್ತೆ ಹಚ್ಚಿ ಈ ಬಗ್ಗೆ ನಿಗಾ ವಹಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜೂಜಾಟ ಬಲು ಜೋರು
ವಡಗೇರಾ: ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮರಳು ಸಾಗಾಟ ಮಟ್ಕಾ ಹಾಗೂ ಜೂಜಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ ಪೋಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ವಡಗೇರಾ ತಾಲ್ಲೂಕಿನಲ್ಲಿ ಕೃಷ್ಣಾ ಹಾಗೂ ಭೀಮಾ ನದಿಗಳು ಹರಿಯುತ್ತಿವೆ. ಈ ನದಿ ದಡಗಳಲ್ಲಿ ರಸ್ತೆಗಳನ್ನು ನಿರ್ಮಿಸಿ ಮರಳನ್ನು ವಡಗೇರಾ ಪೊಲೀಸ್ ಠಾಣೆಯ ಎದುರುಗಡೆಯಿಂದ ಟಿಪ್ಪರ್‌ಗಳ ಮುಖಾಂತರ ಸಾಗಿಸುತ್ತಾರೆ. ಹೀಗೆ ಟಿಪ್ಪರ್‌ಗಳು ಸಂಚರಿಸುವಾಗ ಪೊಲೀಸರು ಕುರುಡರಂತೆ ವರ್ತಿಸುತ್ತಾರೆ ಎಂದು ವಡಗೇರಾ ಪಟ್ಟಣದ ನಿವಾಸಿಗಳು ಹೇಳುತ್ತಾರೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ದಿನಾಲೂ ಲಕ್ಷಾಂತರ ರೂಪಾಯಿಗಳ ಮಟ್ಕಾ ದಂದೆ ನಡೆಯುತ್ತಿದೆ. ಕೂಲಿ ನಾಲಿ ಮಾಡಿಕೊಂಡು ಬದುಕುವ ಅನೇಕ ಕುಟುಂಬಗಳ ಯಜಮಾನರು ಮಟ್ಕಾ ಚಟಕ್ಕೆ ಬಿದ್ದು ದುಡಿದ ಹಣವನ್ನು ಮಟ್ಕಾ ಆಟದಲ್ಲಿ ಸೋಲುತ್ತಿರುವದರಿಂದ ಕುಟುಂಬಗಳು ಬಿದಿಪಾಲಾಗುತ್ತಿವೆ. ಮಟ್ಕಾ ಆಡುವವರು ಮಟ್ಕಾದ ಓಪನ್ ನಂಬರ್‌ ಬರುವವರೆಗೂ ಊಟ ಮಾಡುವುದಿಲ್ಲ. ಕ್ಲೋಜ್ ನಂಬರ್‌ ಬರುವವರೆಗೂ ನಿದ್ದೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ಹಾಗೂ ತಾಂಡಾಗಳಲ್ಲಿ ಬರುವ ಗುಡಿ ಗುಂಡಾರಗಳ ಆವರಣಗಳಲ್ಲಿ ಬಯಲು ಜಮೀನುಗಳಲ್ಲಿ ಜಾಲಿಗಿಡದ ಆಶ್ರಯದಲ್ಲಿ ರಾಜಾರೋಷವಾಗಿ ಲಕ್ಷಾಂತರ ರೂಪಾಯಿಗಳ ಜೂಜಾಟ ನಡೆಯುತ್ತದೆ. ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪೊಲೀಸ್‌ ಇಲಾಖೆಯ ಅಧಿಕಾರಿಗಳು ನಿಷ್ಕ್ರೀಯರಾಗಿದ್ದಾರೆ. ಅಕ್ರಮ ದಂಧೆಕೋರರ ಜತೆ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಅರೋಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT