ಹೈದರಾಬಾದ್: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇಕಡ 55ರಷ್ಟು ಪಿತ್ರಾರ್ಜಿತ ತೆರಿಗೆ ಹೇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಇಡೀ ಜಗತ್ತೇ ಆರ್ಥಿಕತೆಯಲ್ಲಿ ಪ್ರಗತಿ ಕಾಣುತ್ತಿದ್ದಾಗ ಯುಪಿಎ ಅವಧಿಯಲ್ಲಿ ಭಾರತದಲ್ಲಿ ಅಭಿವೃದ್ಧಿಗೆ ಗ್ರಹಣ ಹಿಡಿದಿತ್ತು ಎಂದು ಮೋದಿ ಟೀಕಿಸಿದ್ದಾರೆ.
ತೆಲಂಗಾಣದ ಮೇದಕ್ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರದ ಹಣ ಸಂಗ್ರಹಿಸಿ ದೆಹಲಿಗೆ ಕಳುಹಿಸುವ ಕೆಲಸದಲ್ಲಿ ಕಾಂಗ್ರೆಸ್ ಪಕ್ಷ ತೊಡಗಿಸಿಕೊಂಡಿತ್ತು ಎಂದು ಅವರು ದೂರಿದ್ದಾರೆ.
‘ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಜಾರಿಗೆ ತರುತ್ತದೆ. ಆ ಮೂಲಕ ನೀವು ಪೋಷಕರಿಂದ ಪಡೆಯುವ ಆಸ್ತಿ ಮೇಲೆ ಅರ್ಧಕ್ಕಿಂತ ಹೆಚ್ಚು ಅಂದರೆ ಶೇಕಡ 55ರಷ್ಟು ತೆರಿಗೆ ವಿಧಿಸುತ್ತದೆ’ಎಂದು ಪ್ರಧಾನಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಎಲ್ಲೇ ಅಧಿಕಾರದಲ್ಲಿದ್ದರೂ ಸುಳ್ಳು ಭರವಸೆ, ವೋಟ್ ಬ್ಯಾಂಕ್ ರಾಜಕಾರಣ, ಮಾಫಿಯಾ ಮತ್ತು ಕ್ರಿಮಿನಲ್ಗಳಿಗೆ ಬೆಂಬಲ, ವಂಶಪಾರಂಪರ್ಯ ರಾಜಕಾರಣ ಮತ್ತು ಭ್ರಷ್ಟಾಚಾರ ಎಂಬ ಐದು ರಾಜಕೀಯ ಚಿಹ್ನೆಗಳನ್ನು ಹೊಂದಿರುತ್ತದೆ ಎಂದು ದೂಷಿಸಿದ್ದಾರೆ.
ಈ ಮೊದಲು ಬಿಆರ್ಎಸ್ ತೆಲಂಗಾಣವನ್ನು ಲೂಟಿ ಮಾಡಿತ್ತು. ಈಗ ಕಾಂಗ್ರೆಸ್ ಸರದಿ ಎಂದು ಮೋದಿ ಟೀಕಿಸಿದ್ದಾರೆ.