ಕೊಂಡಾ ಸುರೇಖಾ ಅವರು ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳಿದರೂ ಈ ವಿಚಾರ ಸದ್ಯ ಟಾಲಿವುಡ್ ಹಾಗೂ ಆಂಧ್ರ, ತೆಲಂಗಾಣದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ.
ಏತನ್ಮಧ್ಯೆ ನಾಗಾರ್ಜುನ ಅವರು ಕೊಂಡಾ ಸುರೇಖಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೇಸ್ ದಾಖಲಿಸಿದ್ದಾರೆ.
ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಮಾತನಾಡಿರುವ ಸಮಂತಾ ಅವರು, ‘ನಮ್ಮ ವಿಚ್ಛೇದನವು ವೈಯಕ್ತಿಕ ವಿಷಯವಾಗಿದೆ. ಅದರ ಬಗ್ಗೆ ಇಂತಹ ಊಹಾಪೋಹದಿಂದ ದೂರವಿರುವಂತೆ ನಾನು ವಿನಂತಿಸುತ್ತೇನೆ. ನಮ್ಮ ನಿರ್ಧಾರ ಪರಸ್ಪರ ಒಪ್ಪಿಗೆಯಿಂದ ಮತ್ತು ಸೌಹಾರ್ದತೆಯಿಂದ ಕೂಡಿತ್ತು. ಯಾವುದೇ ರಾಜಕೀಯ ಪಿತೂರಿಗಳನ್ನು ಒಳಗೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಸುರೇಖಾ ಅವರೇ, ಮಹಿಳೆಯಾಗಿದ್ದುಕೊಂಡು, ಮಹಿಳೆಯರನ್ನು ಹೆಚ್ಚಾಗಿ ಪರಿಗಣಿಸದ ಈ ಸಿನಿ ಉದ್ಯಮದಲ್ಲಿ ಮನೆಯಿಂದ ಹೊರಬಂದು ಕೆಲಸ ಮಾಡಲು ಸಾಕಷ್ಟು ಧೈರ್ಯ ಮತ್ತು ಶಕ್ತಿ ಬೇಕು. ನನ್ನನ್ನು ರೂಪಿಸಿದ ಪಯಣದ ಬಗ್ಗೆ ನನಗೆ ಹೆಮ್ಮೆ ಇದೆ. ದಯವಿಟ್ಟು ಅದನ್ನು ಕ್ಷುಲ್ಲಕವಾಗಿ ನೋಡಬೇಡಿ. ಸಚಿವರಾಗಿ ನಿಮ್ಮ ಮಾತುಗಳಿಗೆ ಒಂದು ತೂಕವಿದೆ ಎನ್ನುವುದನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ಖಾಸಗಿ ವಿಚಾರಗಳನ್ನು ಗೌರವಿಸಿ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಿ’ ಎಂದು ಹೇಳಿದ್ದಾರೆ.
ಮಾಧ್ಯಮಗಳ ಗಮನ ಸೆಳೆಯುವುದಕ್ಕಾಗಿ ಸೆಲೆಬ್ರಿಟಿಗಳ ಜೀವನದ ವೈಯಕ್ತಿಕ ನಿರ್ಧಾರಗಳನ್ನು ಅವಮಾನಿಸುವುದು ನಾಚಿಕೆಗೇಡು ಎಂದು ನಟ ಅಕ್ಕಿನೇನಿ ನಾಗ ಚೈತನ್ಯ ಹೇಳಿದ್ದಾರೆ. ಆ ಮೂಲಕ, ತಮ್ಮ ಬಗ್ಗೆ ಮಾತನಾಡಿದ್ದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರಿಗೆ ತಿರುಗೇಟು ನೀಡಿದ್ದಾರೆ.