ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನರ್ಥ ಸಿನಿಮಾ ವಿಮರ್ಶೆ: ಹುಡುಗಾಟಿಕೆಯ ಅನರ್ಥ!

ರಮೇಶ್‌ ಕೃಷ್ಣ ನಿರ್ದೇಶನದ ಸಿನಿಮಾ
Published 7 ಜೂನ್ 2024, 11:13 IST
Last Updated 7 ಜೂನ್ 2024, 11:13 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ಚಿತ್ರ: ಅನರ್ಥ
ನಿರ್ದೇಶಕ:ನಿರ್ದೇಶನ: ರಮೇಶ್‌ ಕೃಷ್ಣ, ನಿರ್ಮಾಣ: ಎನ್‌.ಸಿ.ಶ್ರೀಧರ್‌ ಹೊಸಮನೆ
ಪಾತ್ರವರ್ಗ:ತಾರಾಗಣ: ವಿಶಾಲ್‌ ಮಣ್ಣೂರು, ವಿಹಾನಿ ಗೌಡ ಮತ್ತಿತರರು

ಅವಕಾಶ್‌ ಮತ್ತು ಆಕೃತಿ ಪರಸ್ಪರ ಪ್ರೀತಿಸುತ್ತಾರೆ. ಪ್ರೀತಿಯ ಗಾಢತೆ ಅರ್ಥಮಾಡಿಕೊಳ್ಳಲು ತಮ್ಮೊಳಗೆ ಒಂದು ಸವಾಲು ಹಾಕಿಕೊಳ್ಳುತ್ತಾರೆ. ಆ ಸವಾಲಿನಂತೆ ಇಬ್ಬರು ಒಂದು ಅಪರಿಚಿತ ಜಾಗಕ್ಕೆ ಹೋಗುತ್ತಾರೆ. ಅಲ್ಲಿಂದ ಚಿತ್ರದ ಕಥೆ ತೆರೆದುಕೊಳ್ಳುತ್ತದೆ.

ಧಾರಾವಾಹಿ ಜಗತ್ತಿನಿಂದ ಬಂದಿರುವ ನಿರ್ದೇಶಕ ರಮೇಶ್‌ ಕೃಷ್ಣ ಒಂದಷ್ಟು ಟ್ವಿಸ್ಟ್‌ಗಳೊಂದಿಗೆ ಅಚ್ಚುಕಟ್ಟಾದ ಕಥೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚು ಪಾತ್ರಗಳಿಲ್ಲ, ಬಹಳಷ್ಟು ಜಾಗಗಳಿಲ್ಲ. ಕಥೆ ಅದನ್ನು ಬೇಡುವುದೂ ಇಲ್ಲ. ಅಷ್ಟರಮಟ್ಟಿಗೆ ಚೌಕಟ್ಟಿನೊಳಗೆ ಕಥೆಯನ್ನು ಹೆಣೆದಿದ್ದಾರೆ. ಆದರೆ ಈ ಇತಿಮಿತಿಗಳೇ ಕೆಲವು ಕಡೆ ಸಿನಿಮೀಯ ಅನುಭವವನ್ನು ತಗ್ಗಿಸುತ್ತದೆ.

ಇವತ್ತಿನ ಯುವಜನತೆಯಲ್ಲಿ ಮೊಬೈಲ್‌ ಆಡಿಕ್ಷನ್ ಕೂಡ ಒಂದು ರೀತಿ ಡ್ರಗ್‌ ಇದ್ದಂತೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದಾರೆ. ಜೊತೆಗೆ ಡ್ರಗ್ಸ್‌ನ ಅಪಾಯವನ್ನು ಕೆಲವಷ್ಟು ದೃಶ್ಯಗಳಲ್ಲಿ ಹೇಳಿದ್ದಾರೆ. ನಾಯಕ, ನಾಯಕಿ ಹೋದ ಜಾಗದಲ್ಲಿ ಸರಣಿ ಆತ್ಮಹತ್ಯೆಗಳು ಆಗುತ್ತವೆ. ಅದಕ್ಕೆ ಕಾರಣವೇನು? ಅದರ ಹಿಂದೆ ಯಾರಿದ್ದಾರೆ ಎಂಬುದೇ ಚಿತ್ರಕಥೆಯಲ್ಲಿನ ಕುತೂಹಲ ಮತ್ತು ಟ್ವಿಸ್ಟ್‌. ಆದರೆ ಕಥೆ ಸಾಗುತ್ತ ಕ್ಲೈಮ್ಯಾಕ್ಸ್‌ ಊಹೆಗೆ ನಿಲುಕಿಬಿಡುತ್ತದೆ. 

ನಾಯಕ ವಿಶಾಲ್‌ ಮಣ್ಣೂರು ಹಾಗೂ ನಾಯಕಿ ವಿಹಾನಿ ನಟನೆಯಿಂದ ಇಷ್ಟವಾಗುತ್ತಾರೆ. ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಸಿ.ವಿಜಯ್‌ಕುಮಾರ್‌ ಗಮನಸೆಳೆಯುತ್ತಾರೆ. ನಾಗೇಂದ್ರ ಪ್ರಸಾದ್‌ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಸೂಕ್ತವಾಗಿದೆ. ಕುಮಾರ್‌ ಗೌಡ ಛಾಯಾಚಿತ್ರಗ್ರಹಣ ಅಲ್ಲಲ್ಲಿ ಕಣ್ಣು ತಂಪಾಗಿಸುತ್ತದೆ. ಕಥೆಯ ನಿರೂಪಣೆಯಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ಒಂದೊಳ್ಳೆ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗುತ್ತಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT