ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad Landslide | ಕಸ್ತೂರಿ ರಂಗನ್ ವರದಿ ವಿರೋಧಿಸಿದ್ದ ಕೇರಳ

ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರುವ 123 ಹಳ್ಳಿಗಳಲ್ಲಿ 60 ಹಳ್ಳಿಗಳು ಇಡುಕ್ಕಿ, ವಯನಾಡ್‌ ಜಿಲ್ಲೆಗಳಿಗೆ ಸೇರಿವೆ l ಮರುಕಳಿಸುತ್ತಲೇ ಇವೆ ಅವಘಡಗಳು
Published : 31 ಜುಲೈ 2024, 0:30 IST
Last Updated : 31 ಜುಲೈ 2024, 0:30 IST
ಫಾಲೋ ಮಾಡಿ
Comments

ಬೆಂಗಳೂರು: ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹರಡಿರುವ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಕಾಪಾಡುವ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ನೇಮಿಸಿದ್ದ ಪ್ರೊ.ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿ 2011ರಲ್ಲಿ ಮತ್ತು ಪ್ರೊ.ಕಸ್ತೂರಿ ರಂಗನ್ ನೇತೃತ್ವದ ಮತ್ತೊಂದು ಸಮಿತಿ 2013ರಲ್ಲಿ ಸಲ್ಲಿಸಿ‌‌‌ದ್ದ ವರದಿಗಳನ್ನು ಕೇರಳ ಸರ್ಕಾರ ವಿರೋಧಿಸಿತ್ತು.   

ಕೇರಳದ 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿರುವ 123 ಹಳ್ಳಿಗಳ ವ್ಯಾಪ್ತಿಯ 13,108 ಚದರ ಕಿ.ಮೀ ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ಭೂಪ್ರದೇಶ ಎಂದು ಪರಿಗಣಿಸಬೇಕು ಎಂಬುದಾಗಿ ಕಸ್ತೂರಿ ರಂಗನ್ ವರದಿ ಶಿಫಾರಸು ಮಾಡಿತ್ತು. 123 ಹಳ್ಳಿಗಳ ಪೈಕಿ 60 ಹಳ್ಳಿಗಳು ಇಡುಕ್ಕಿ ಮತ್ತು ವಯನಾಡ್ ಜಿಲ್ಲೆಗಳಿಗೆ ಸೇರಿವೆ. ಈ ಹಳ್ಳಿಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಕ್ವಾರಿ, ಮರ ಕಡಿಯುವುದು, ಕೈಗಾರಿಕೆ ಸ್ಥಾಪನೆ ಮತ್ತು ಕಟ್ಟಡ ನಿರ್ಮಾಣದಂಥ ಚಟುವಟಿಕೆಗಳ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿ ಕೇಂದ್ರ ಸರ್ಕಾರವು ನವೆಂಬರ್ 2013ರಲ್ಲಿ ಎರಡು ಆದೇಶಗಳನ್ನು ಜಾರಿ ಮಾಡಿತ್ತು. ಅದನ್ನು ವಿರೋಧಿಸಿ ‘ಪಶ್ಚಿಮ ಘಟ್ಟ ಜನ ಸಂರಕ್ಷಣಾ ಸಮಿತಿ’ಯ ಅಡಿ ಕೇರಳದಲ್ಲಿ ಪ್ರತಿಭಟನೆಗಳು ಆರಂಭವಾದವು. ‌

ವ್ಯಾಪಕ ಪ್ರತಿಭಟನೆಗಳ ಕಾರಣ, ರಾಜ್ಯದ ಪರಿಸರ ಸೂಕ್ಷ್ಮ ಪ್ರದೇಶವನ್ನು ಕಡಿಮೆ ಮಾಡಬೇಕು ಎಂದು ಕೇರಳ, ಕೇಂದ್ರ ಸರ್ಕಾರವನ್ನು ಕೋರಿತು. ಅದರ ಮನವಿಗೆ ಸ್ಪಂದಿಸಿದ ಕೇಂದ್ರವು, ಮೊದಲಿನ 13,108 ಚದರ ಕಿ.ಮೀ ವ್ಯಾಪ್ತಿಯಲ್ಲಿ 3100 ಚ.ಕಿ.ಮೀ ಪ್ರದೇಶವನ್ನು ಕೈಬಿಟ್ಟು, 9,994 ಚ.ಕಿ.ಮೀ ಭೂಭಾಗವನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿತು. ಅದರಲ್ಲಿ, 9,107 ಚ.ಕಿ.ಮೀ ಅರಣ್ಯ ಪ್ರದೇಶವಾಗಿದ್ದರೆ, 887 ಚ.ಕಿ.ಮೀ ಅರಣ್ಯೇತರ ಪ್ರದೇಶವಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಇದುವರೆಗೆ ಐದು ಬಾರಿ (2014, 2015, 2017, 2018 ಮತ್ತು 2022) ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪಗಳನ್ನು ಆಹ್ವಾನಿಸಿದೆ. ಪ್ರತಿ ಬಾರಿಯೂ ಪ್ರತಿಭಟನೆ, ವಿರೋಧ ರಾಜಕೀಯ ಮೇಲಾಟಗಳು ನಡೆದು ವರದಿ ಜಾರಿ ವಿಚಾರ ಹಾಗೆಯೇ ಉಳಿಯುತ್ತಿದೆ.

ವರದಿ ಕುರಿತು ಕೇರಳದ ವಾದವೇನು?  

*ಪರಿಸರ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಿರುವ ಭೂಭಾಗಗಳಲ್ಲಿ ದಟ್ಟ ಜನವಸತಿ ಇದೆ

*ವರದಿ ಜಾರಿಯಾದರೆ, 123 ಹಳ್ಳಿಗಳ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡಿ, ಪುನರ್ವಸತಿ ಕಲ್ಪಿಸಬೇಕಾಗುತ್ತದೆ

*ವರದಿಯು ರೈತ ವಿರೋಧಿಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ

*ಹೈನುಗಾರಿಕೆ, ಮೀನು ಸಾಕಾಣಿಕೆ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ

*ವರದಿ ಜಾರಿಯಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ತೊಡಕು ಉಂಟಾಗಲಿದೆ

*ಪಶ್ಚಿಮ ಘಟ್ಟಗಳಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ

ಪೂತ್ತುಮಲ ಭೂಕುಸಿತ ಮರೆಯುವ ಮುನ್ನವೇ..

ಪೂತ್ತುಮಲ ಎನ್ನುವುದು ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಒಂದು ಹಳ್ಳಿ. 2019ರ ಆಗಸ್ಟ್ 8ರಂದು ಮುಂಗಾರು ಸಂದರ್ಭದಲ್ಲಿ ಪೂತ್ತುಮಲ ಗ್ರಾಮದ ಸುತ್ತಮತ್ತ 24 ಗಂಟೆಗಳಲ್ಲಿ 50 ಸೆಂ.ಮೀ. ಮಳೆ ಸುರಿದಿತ್ತು. ಅದರ ಪರಿಣಾಮವಾಗಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಅದು ಎಷ್ಟು ತೀವ್ರವಾಗಿತ್ತು ಎಂದರೆ, 20 ಹೆಕ್ಟೇರ್‌ನಷ್ಟು ಭೂಮಿಯು 2 ಕಿಮೀನಷ್ಟು ದೂರಕ್ಕೆ ಸರಿದಿತ್ತು. 100 ಎಕರೆಯಷ್ಟು ಟೀ ತೋಟ ಕೊಚ್ಚಿಹೋಗಿತ್ತು. ವಯನಾಡ್ ಜಿಲ್ಲೆಯ ಸುಮಾರು 25,000 ಹೆಕ್ಟೇರ್ ಪ್ರದೇಶದಲ್ಲಿ ಫಲವತ್ತಾದ ಭೂಮಿಯ ಎರಡು ಸೆಂಟಿಮೀಟರ್‌ನಷ್ಟು ಮೇಲ್ಮೈ ಕೊಚ್ಚಿಕೊಂಡು ಹೋಗಿತ್ತು. 17 ಜನರು ಮೃತಪಟ್ಟಿದ್ದರು.

ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರವನ್ನು ಒಳಗೊಂಡಿರುವ ವಯನಾಡ್‌ನ 102.6 ಚದರ ಕಿ.ಮೀ. ಪ್ರದೇಶವು ತೀವ್ರ ಭೂಕುಸಿತದ ಅಪಾಯದ ಭೂಭಾಗವಾಗಿದ್ದರೆ, 196.6 ಚದರ ಕಿ.ಮೀ. ಪ್ರದೇಶವು ಮಧ್ಯಮ ಶ್ರೇಣಿಯ ಭೂಕುಸಿತದ ಅಪಾಯದ ಭೂಭಾಗವಾಗಿದೆ. ಹವಾಮಾನ ಬದಲಾವಣೆಯಿಂದ ಭೂಕುಸಿತದ ಅಪಾಯ ಹೆಚ್ಚಾಗಿರುವ ಇರುವ ಭೂಪ್ರದೇಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದರು.

ವಯನಾಡಿನಲ್ಲಿ ಭೂಕುಸಿತ

ವಯನಾಡಿನಲ್ಲಿ ಭೂಕುಸಿತ

(ಪಿಟಿಐ ಚಿತ್ರ)

ಎಲ್ಲ ಜಿಲ್ಲೆಗಳಲ್ಲಿ ಭೂಕುಸಿತದ ಅಪಾಯ 

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಂಗಸಂಸ್ಥೆ ರಾಷ್ಟ್ರೀಯ ದೂರ ಸಂವೇದಿ ಕೇಂದ್ರವು (ಎನ್‌ಆರ್‌ಎಸ್‌ಸಿ) ದೂರ ಸಂವೇದಿ ದತ್ತಾಂಶ ಆಧರಿಸಿ, ಕಳೆದ ವರ್ಷದ ಫೆಬ್ರುವರಿಯಲ್ಲಿ ದೇಶದ ಭೂಕುಸಿತದ ನಕ್ಷೆಯನ್ನು (Landslide Atlas of India) ಸಿದ್ಧಪಡಿಸಿದೆ. 

ಹಿಮಾಲಯ, ಪಶ್ಚಿಮ ಘಟ್ಟಗಳು ಸೇರಿದಂತೆ ದೇಶದ 17 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿರುವ ಮತ್ತು ಭೂಕುಸಿತದ ಸಾಧ್ಯತೆ ಇರುವ ನಿರ್ದಿಷ್ಟ ಜಿಲ್ಲೆ, ಸ್ಥಳಗಳನ್ನು ಈ ನಕ್ಷೆಯಲ್ಲಿ ಗುರುತಿಸಲಾಗಿದೆ. 

ಭೂಕುಸಿತದ ಅಪಾಯ ಎದುರಿಸುತ್ತಿರುವ 147 ಜಿಲ್ಲೆಗಳನ್ನು ಪಟ್ಟಿ ಮಾಡಲಾಗಿದ್ದು, ಸಾಮಾಜಿಕ–ಆರ್ಥಿಕ ಮಾನದಂಡದ ಆಧಾರದಲ್ಲಿ ರ‍್ಯಾಂಕಿಂಗ್‌ ಕೂಡ ನೀಡಲಾಗಿದೆ. 

ಈ ಪಟ್ಟಿಯಲ್ಲಿ ಕೇರಳದ ಎಲ್ಲ ಜಿಲ್ಲೆಗಳೂ ಸ್ಥಾನ ಪಡೆದಿವೆ. ರಾಜ್ಯದ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳು ಮೊದಲ 50 ರ‍್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿವೆ. 20ರ ಒಳಗಡೆ ಏಳು ಜಿಲ್ಲೆಗಳಿವೆ. ಈಗ ಮಹಾ ದುರಂತಕ್ಕೆ ಸಾಕ್ಷಿಯಾಗಿರುವ ವಯನಾಡ್‌ 13ನೇ ಸ್ಥಾನದಲ್ಲಿದೆ. ಉತ್ತರಾಖಂಡದ ರುದ್ರಪ್ರಯಾಗ್‌ ಮೊದಲ ಸ್ಥಾನದಲ್ಲಿದೆ. ಅದೇ ರಾಜ್ಯದ ಟಿಹರಿ ಗಢವಾಲ್‌ ಎರಡನೇ ಸ್ಥಾನದಲ್ಲಿದೆ. 

ಕರ್ನಾಟಕದ ಕೊಡಗು ಜಿಲ್ಲೆ 12ನೇ ಸ್ಥಾನದಲ್ಲಿದೆ. ಹಾಸನ ಮತ್ತು ದಕ್ಷಿಣ ಕನ್ನಡ ಕ್ರಮವಾಗಿ 53 ಮತ್ತು 54ನೇ ಸ್ಥಾನದಲ್ಲಿವೆ. 

ಪ್ರವಾಹದ ದುಃಸ್ವಪ್ನ

2018ರ ಆಗಸ್ಟ್‌ 14ರಿಂದ 19ರ ನಡುವೆ ಕೇರಳದಲ್ಲಿ ಸುರಿದ ಭಾರಿ ಮಳೆಗೆ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಪ್ರವಾ‌‌ಹ ಉಂಟಾಗಿ ಅಪಾರ ಸಾವು ನೋವು ಉಂಟಾಗಿತ್ತು. 480ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. ಆಸ್ತಿಗೆ ಭಾರಿ ಹಾನಿಯಾಗಿತ್ತು. 1924ರಲ್ಲಿ ಉಂಟಾಗಿದ್ದ ನೆರೆಯ ನಂತರ ಆ ಮಟ್ಟಿಗಿನ ಭೀಕರ ಪ್ರವಾಹ ಸ್ಥಿತಿಯನ್ನು ಕೇರಳ ಕಂಡಿರಲಿಲ್ಲ.  

ಆಗಸ್ಟ್‌ ಮೊದಲ ಆರಂಭದಲ್ಲಿ ಶುರುವಾದ ಮಳೆ ಎರಡನೇ ವಾರದಲ್ಲಿ ತೀವ್ರಗೊಂಡಿತ್ತು. ಆಗಸ್ಟ್‌ 1ರಿಂದ 19ರ ನಡುವೆ ರಾಜ್ಯದಲ್ಲಿ 75.86 ಸೆಂ.ಮೀ ಮಳೆಯಾಗಿತ್ತು.

ಇಡುಕ್ಕಿ ಜಲಾಶಯ ಸೇರಿದಂತೆ ರಾಜ್ಯದ ಎಲ್ಲ ಜಲಾಶಯಗಳಿಂದ ಅನಿವಾರ್ಯವಾಗಿ ಹೆಚ್ಚು ನೀರು ಹೊರಗೆ ಬಿಡಬೇಕಾಯಿತು. ಇದರೊಂದಿಗೆ ಮಳೆಯೂ ತೀವ್ರವಾಗಿದ್ದರಿಂದ ನೆರೆ ಸೃಷ್ಟಿಯಾಗಿ, ಭೂಕುಸಿತ ಸಂಭವಿಸಿ ಸಾವಿರಾರು ಜನ ಮನೆಗಳನ್ನು ಕಳೆದುಕೊಳ್ಳಬೇಕಾಯಿತು. ಕೇರಳದ ಜನರನ್ನು ಈ ಪ್ರವಾಹ ದುಃಸ್ವಪ್ನವಾಗಿ ಇನ್ನೂ ಕಾಡುತ್ತಿದೆ. 

ವಯನಾಡ್‌ಗೆ ಮೈಸೂರು ತಂಡ

ಮೈಸೂರು: ವಯನಾಡ್‌ನಲ್ಲಿ ಭೂಕುಸಿತ ಸಂಭವಿಸಿರುವುದರಿಂದ ಜಿಲ್ಲೆಯವರೂ ಸೇರಿದಂತೆ ರಾಜ್ಯದ ಯಾರಾದರೂ ಇದ್ದರೆ, ಅವರನ್ನು ರಕ್ಷಿಸಲು ಜಿಲ್ಲಾಡಳಿತವು ಇಬ್ಬರು ಅಧಿಕಾರಿಗಳ ತಂಡವನ್ನು ಕೇರಳಕ್ಕೆ ಮಂಗಳವಾರ ಕಳುಹಿಸಿಕೊಟ್ಟಿದೆ.

‘ಭೂಕುಸಿತದಲ್ಲಿ ಸಿಲುಕಿದವರ ಮಾಹಿತಿ ನೀಡಲು ಜಿಲ್ಲಾಡಳಿತ ಕಂಟ್ರೋಲ್‌ ರೂಂ ತೆರೆದಿದೆ. ಇದುವರೆಗೂ ಯಾವುದೇ ದೂರು ದಾಖಲಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ತಂಡವನ್ನು ಕಳುಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.

ಸ್ಥಳಾಂತರಗೊಂಡಿದ್ದ ಕೆಲ ಕುಟುಂಬಗಳು

ವಯನಾಡ್‌ನ ಮೇಪ್ಪಾಡಿ ವಲಯದಲ್ಲಿ ಕಳೆದ ಎರಡು ದಿನಗಳಿಂದ 20 ಸೆಂ.ಮೀಗೂ ಹೆಚ್ಚು ಮಳೆಯಾಗಿದೆ. ಜಿಲ್ಲಾಡಳಿತವು ಎಚ್ಚರದಿಂದ ಇರುವಂತೆ ಜನರಿಗೆ ಸೂಚಿಸಿತ್ತು. ಇದರಿಂದ ಕೆಲವು ಕುಟುಂಬಗಳು ಸೋಮವಾರವೇ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದವು. ಆದರೆ ಚೂರಲ್‌ಮಲ ಗ್ರಾಮದ ಕೆಲವು ಕುಟುಂಬಗಳು ಅಲ್ಲೇ ಉಳಿದುಕೊಂಡಿದ್ದವು. ಏಕೆಂದರೆ ಇದುವರೆಗೆ ಯಾವುದೇ ಅನಾಹುತ ಸಂಭವಿಸದೇ ಇದ್ದ ಈ ಗ್ರಾಮ ‘ಸುರಕ್ಷಿತ ಪ್ರದೇಶ’ ಎಂದೇ ಸ್ಥಳೀಯರು ಭಾವಿಸಿದ್ದರು.

*ಮುಂಡಕ್ಕೈ ಗ್ರಾಮದಲ್ಲಿ ಸುಮಾರು 250 ಮನೆಗಳಿದ್ದು, ಅದರಲ್ಲಿ 150 ಮನೆಗಳು ನಾಶವಾಗಿವೆ

*ಚೂರಲ್‌ಮಲ ಗ್ರಾಮದಲ್ಲಿ ಅಂದಾಜು 300 ಮನೆಗಳಿದ್ದು, 100ಕ್ಕೂ ಅಧಿಕ ಮನೆಗಳು ಕುಸಿದಿವೆ

ರಕ್ಷಣಾ ಕಾರ್ಯ; ಸೇನೆ ಭಾಗಿ

ವಯನಾಡ್‌: ಭೂಕುಸಿತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಎನ್‌ಡಿಆರ್‌ಎಫ್‌ ಮತ್ತು ಎಲ್ಲ ತುರ್ತು ಸೇವೆಗಳ ಸಿಬ್ಬಂದಿಯ ಜೊತೆ ಭಾರತೀಯ ಸೇನಾ ಸಿಬ್ಬಂದಿ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದು, ಮಣ್ಣಿನ ಅಡಿಯಲ್ಲಿ ಸಿಲುಕಿರುವವರು, ನಾಪತ್ತೆಯಾಗಿರುವವರ ಪತ್ತೆಗೆ ಮತ್ತು ಗಾಯಾಳುಗಳ ರಕ್ಷಣೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಭಾರಿ ಇಂಜಿನಿಯರಿಂಗ್ ಸಲಕರಣಿಗಳನ್ನು ಹಾಗೂ ಶ್ವಾನ ದಳವನ್ನು ಏರ್‌ಲಿಫ್ಟ್ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯವು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಆಧಾರ: ಇಸ್ರೊದ ಎನ್‌ಆರ್‌ಎಸ್‌ಸಿ ಭೂಕುಸಿತ ನಕ್ಷೆ ವರದಿ, 2018ರ ಕೇರಳ ಪ್ರವಾಹ ಕುರಿತ ಕೇಂದ್ರ ಜಲ ಆಯೋಗದ ವರದಿ ಮತ್ತು ರಾಜೀವ್‌ ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್‌ ಡೆವೆಲಪ್‌ಮೆಂಟ್‌ ಸ್ಟಡೀಸ್‌, ಕೇರಳ ಸರ್ಕಾರದ ಜೀವ ವೈವಿಧ್ಯ ಮಂಡಳಿಯ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT