ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಆಳ– ಅಗಲ | ಪಿಂಚಣಿ ಯೋಜನೆ: ಬದಲಾಗಿದ್ದೇಕೆ?
ಆಳ– ಅಗಲ | ಪಿಂಚಣಿ ಯೋಜನೆ: ಬದಲಾಗಿದ್ದೇಕೆ?
ಫಾಲೋ ಮಾಡಿ
Published 28 ಆಗಸ್ಟ್ 2024, 1:04 IST
Last Updated 28 ಆಗಸ್ಟ್ 2024, 1:04 IST
Comments
ಪಿಂಚಣಿ ಎನ್ನುವುದು ಸರ್ಕಾರಿ ನೌಕರಿಯ ಪ್ರಮುಖ ಆಕರ್ಷಣೆಯಾಗಿದ್ದ ಕಾಲವೊಂದಿತ್ತು. 2004ರಲ್ಲಿ ಹೊಸ ಪಿಂಚಣಿ ಯೋಜನೆ ಜಾರಿ ಮೂಲಕ ದಶಕಗಳಿಂದ ಅಸ್ತಿತ್ವದಲ್ಲಿದ್ದ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಯಿತು. ಅದರಲ್ಲಿ ಹಲವು ಗೊಂದಲಗಳು ಇದ್ದು, ನಿಶ್ಚಿತ ಆದಾಯದ ಬಗ್ಗೆ ಅನುಮಾನಗಳಿವೆ ಎಂದು ನೌಕರರು ವಿರೋಧ ವ್ಯಕ್ತಪಡಿಸಿದರು. ಅದು ರಾಜಕೀಯ ಪರ–ವಿರೋಧದ ವಿಚಾರವೂ ಆಗಿ, ಚುನಾವಣಾ ವಿಷಯವಾಯಿತು. ಕೇಂದ್ರ ಸರ್ಕಾರ ಈಗ ಮತ್ತೆ ಪಿಂಚಣಿ ಯೋಜನೆಗೆ ಬದಲಾವಣೆ ತಂದಿದೆ. ಸರ್ಕಾರದ ಮೇಲೆ ಹೊರೆ ಹೆಚ್ಚಾದರೂ ನೌಕರರ ಅನುಕೂಲಕ್ಕಾಗಿ ಏಕೀಕೃತ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಅದರ ಬಗ್ಗೆಯೂ ವಿರೋಧದ ಧ್ವನಿಗಳು ಕೇಳಿಬಂದಿವೆ.

2004ಕ್ಕಿಂತ ಮೊದಲು ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಅಡಿ ಪಿಂಚಣಿ ನೀಡಲಾಗುತ್ತಿತ್ತು. ನೌಕರರ ಕೊನೆಯ ತಿಂಗಳ ಸಂಬಳದ ಮೂಲವೇತನದಲ್ಲಿ ಶೇ 50ರಷ್ಟು ಭಾಗ ಅವರಿಗೆ ‍ಪಿಂಚಣಿಯಾಗಿ ಸಿಗುತ್ತಿತ್ತು. ಅದರ ಮತ್ತೊಂದು ಮುಖ್ಯ ಅಂಶ ಎಂದರೆ, ನೌಕರರ ಸಂಬಳದಿಂದ ಪಿಂಚಣಿಗಾಗಿ ಹಣ ಕಡಿತ ಮಾಡುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಕಾಲದಿಂದ ಕಾಲಕ್ಕೆ ಹಣದುಬ್ಬರದ ಏರಿಳಿತಕ್ಕೆ ತಕ್ಕಂತೆ ತುಟ್ಟಿಭತ್ಯೆ (ಡಿಎ) ಪರಿಷ್ಕರಣೆ ಮಾಡಿ, ಪಿಂಚಣಿ ಹೆಚ್ಚಿಸಲಾಗುತ್ತಿತ್ತು. ಆದರೆ, ಹಳೆಯ ಪಿಂಚಣಿ ಯೋಜನೆಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆಯೆಂದು, ಸಾಲದ ಸುಳಿಯಲ್ಲಿ ಸಿಲುಕಿರುವ ಸರ್ಕಾರಕ್ಕೆ ಪಿಂಚಣಿ ಭರಿಸುವುದು ಭವಿಷ್ಯದಲ್ಲಿ ಇನ್ನೂ ಕಷ್ಟವಾಗಲಿದೆ ಎನ್ನುವ ಅಭಿಪ್ರಾಯ ಸರ್ಕಾರದ ಮಟ್ಟದಲ್ಲಿ ವ್ಯಕ್ತವಾಗತೊಡಗಿತ್ತು. ಹೀಗಾಗಿ ಅದನ್ನು ಬದಲಾಯಿಸುವ ಪ್ರಯತ್ನಗಳು ಆರಂಭವಾದವು.

2004ರ ಜನವರಿ 1ರಿಂದ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ಜಾರಿಗೊಳಿಸಲಾಯಿತು. ಅದರ ಅಡಿಯಲ್ಲಿ ಪಿಂಚಣಿಗಾಗಿ ನೌಕರರ ಮೂಲವೇತನದಲ್ಲಿ ಶೇ 10ರಷ್ಟು ಕಡಿತ ಮಾಡಲು ಆರಂಭಿಸಲಾಯಿತು. ಜತೆಗೆ ಕೇಂದ್ರ ಸರ್ಕಾರವು ಶೇ 14ರಷ್ಟು ಪಾಲು ನೀಡುತ್ತಿತ್ತು. ಪಿಂಚಣಿಯ ಮೊತ್ತವನ್ನು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ತೊಡಗಿಸುವುದು ಮತ್ತು ನಿವೃತ್ತಿಯ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೂಡಿದ ಮೊತ್ತದ ಏರಿಳಿತ ಪರಿಗಣಿಸಿ ಅವರಿಗೆ ಪಿಂಚಣಿ ಮೊತ್ತ ನಿರ್ಧರಿಸಲಾಗುವುದು ಎಂದು ಕೇಂದ್ರವು ಹೇಳಿತ್ತು.

ಒಪಿಎಸ್‌ ಬಿಟ್ಟು ಎನ್‌ಪಿಎಸ್ ಜಾರಿಗೊಳಿಸಿದಾಗಿನಿಂದಲೂ ಅದಕ್ಕೆ ಸರ್ಕಾರಿ ನೌಕರರ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಲೇ ಇತ್ತು. ನೌಕರರ ಸಂಬಳದಲ್ಲಿ ಪಿಂಚಣಿಗಾಗಿ ಕಡಿತ ಮಾಡುವುದು ಹಾಗೂ ಅದನ್ನು ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡುವುದನ್ನು ಸರ್ಕಾರಿ ನೌಕರರು ವಿರೋಧಿಸಿದ್ದರು. ನಿವೃತ್ತಿ ನಂತರ ಎಷ್ಟು ಪಿಂಚಣಿ ಬರುತ್ತದೆ ಎನ್ನುವುದೇ ಅನಿಶ್ಚಿತವಾಗಿ ಮಾರ್ಪಟ್ಟಿತ್ತು. ಹೂಡಿಕೆಯ ಸ್ವರೂಪದ ಬಗ್ಗೆ ಹಲವು ಗೊಂದಲಗಳಿದ್ದವು. ಸರ್ಕಾರಿ ನೌಕರಿಯ ಅವಿಭಾಜ್ಯ ಅಂಗವಾಗಿದ್ದ ಮತ್ತು ಪ್ರಮುಖ ಆಕರ್ಷಣೆಯಾಗಿದ್ದ ಪಿಂಚಣಿ ಯೋಜನೆಯ ಬದಲಾದ ಸ್ವರೂಪದ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾದವು. ಬಿಜೆಪಿಯೇತರ ಸರ್ಕಾರಗಳು ಆಡಳಿತ ನಡೆಸುತ್ತಿದ್ದ ಕೆಲವು ರಾಜ್ಯಗಳು ಒಪಿಎಸ್‌ ಜಾರಿಗೆ ಮುಂದಾದವು. ತುಟ್ಟಿಭಟ್ಟೆ (ಡಿಎ) ಆಧರಿಸಿ ಪಿಂಚಣಿ ನಿಗದಿಪಡಿಸಲು ಕ್ರಮ ಕೈಗೊಂಡವು.

ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೆಚ್ಚಾಯಿತು. ಎನ್‌ಪಿಎಸ್‌ ಅನ್ನು ಉತ್ತಮಪಡಿಸುವುದು ಹೇಗೆ ಎನ್ನುವ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಕೇಂದ್ರವು ಏಪ್ರಿಲ್ 2023ರಲ್ಲಿ ಒಂದು ಸಮಿತಿ ನೇಮಿಸಿತ್ತು. ಅದು ನೀಡಿದ ವರದಿಯ ಆಧಾರದ ಮೇಲೆ ಈಗ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್‌) ಘೋಷಿಸಿದೆ.

ಕೇಂದ್ರ ಸರ್ಕಾರದ 23 ಲಕ್ಷ ನೌಕರರಿಗೆ ಯುಪಿಎಸ್‌ನ ನೆರವು ಸಿಗಲಿದೆ ಎಂದು ಕೇಂದ್ರ ಹೇಳಿದೆ. ಇದೇ ಪದ್ಧತಿಯನ್ನು ರಾಜ್ಯ ಸರ್ಕಾರಗಳೂ ಅಳವಡಿಸಿಕೊಂಡರೆ, ರಾಜ್ಯಗಳ 90 ಲಕ್ಷ ನೌಕರರಿಗೂ ಅದರ ಫಲ ಸಿಗಲಿದೆ ಎಂದು ಕೇಂದ್ರವು ಹೇಳಿದೆ. ಇದು ದೀರ್ಘ ಬಾಳಿಕೆಯ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದ ಮೇಲೆ ಹೆಚ್ಚು ಒತ್ತಡ ಹಾಕುವುದಿಲ್ಲ ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಭಾರತದ ಪಿಂಚಣಿ ವ್ಯವಸ್ಥೆಯಲ್ಲಿ ಯುಪಿಎಸ್ ಒಂದು ಉತ್ತಮ ಸುಧಾರಣಾ ಕ್ರಮ ಎಂದೂ ಅವರು ಹೇಳುತ್ತಿದ್ದಾರೆ. ಆದರೆ, ಯುಪಿಎಸ್‌ ಕೂಡ ಮಾರುಕಟ್ಟೆ ಆಧಾರಿತವಾಗಿದ್ದು, ಏರಿಳಿತದ ಅಪಾಯ ಇದ್ದೇ ಇದೆ; ಒಪಿಎಸ್‌ನಂತೆ ಖಚಿತ ಮೊತ್ತದ ಗ್ಯಾರಂಟಿ ನೀಡುವುದಿಲ್ಲ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.

ಎನ್‌ಪಿಎಸ್ ಅಡಿಯಲ್ಲಿರುವ ನೌಕರರು ಯುಪಿಎಸ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಒಮ್ಮೆ ಯುಪಿಎಸ್ ಆಯ್ಕೆ ಮಾಡಿಕೊಂಡರೆ, ನಂತರ ಬದಲಾವಣೆಗೆ ಅವಕಾಶವಿಲ್ಲ.

ಹಲವು ರಾಜ್ಯಗಳ ಚುನಾವಣೆ ಮತ್ತು ಯುಪಿಎಸ್‌ ಜಾರಿ

ಕೇಂದ್ರವು ಎನ್‌ಪಿಎಸ್ ಬದಲಿಸಿ ಯುಪಿಎಸ್ ಜಾರಿ ಮಾಡಲು ಹೊರಟಿರುವುದರ ಹಿಂದೆ ರಾಜಕೀಯ ಕಾರಣಗಳೂ ಇವೆ ಎನ್ನುವ ಮಾತೂ ಕೇಳಿಬರುತ್ತಿದೆ. ಮುಂಬರುವ ಜಮ್ಮು–ಕಾಶ್ಮೀರ, ಹರಿಯಾಣ ಚುನಾವಣೆ ಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. 

ಕೇಂದ್ರವು ಯುಪಿಎಸ್ ಘೋಷಿಸಿದ ತಕ್ಷಣವೇ ಮಹಾರಾಷ್ಟ್ರ ಸರ್ಕಾರ ಕೂಡ ಯುಪಿಎಸ್ ಅನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿದೆ. ದೇಶದಲ್ಲಿ ಯುಪಿಎಸ್ ಅಳವಡಿಸಿಕೊಂಡ ಮೊದಲ ರಾಜ್ಯ ಇದಾಗಿದೆ. ಚುನಾವಣೆ ಸನಿಹದಲ್ಲಿರುವುದನ್ನು ಗಮನದಲ್ಲಿರಿಸಿಕೊಂಡೇ ರಾಜ್ಯದಲ್ಲಿ ಯುಪಿಎಸ್ ಜಾರಿ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎನ್‌ಪಿಸ್‌ ಕೊರತೆಗಳನ್ನು ಯುಪಿಎಸ್ ಮೂಲಕ ನೀಗಲು ಕೇಂದ್ರವು ಪ್ರಯತ್ನಿಸಿದೆ. ಆದರೂ ಒಪಿಎಸ್‌ಗೆ ಹೋಲಿಸಿದರೆ, ಇನ್ನೂ ಕೆಲವು ಕೊರತೆಗಳಿವೆ ಎಂದು ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್‌) ಅಭಿಪ್ರಾಯ ಪಟ್ಟಿದೆ.

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ‘ಯುಪಿಎಸ್, ಎನ್‌ಪಿಎಸ್‌ನ ವಿಸ್ತರಣೆ ಅಲ್ಲದೇ ಬೇರೇನಲ್ಲ’ ಎಂದಿದೆ. ಯುಪಿಎಸ್‌ ಬಗ್ಗೆ ಹಲವು ಗುಮಾನಿಗಳಿವೆ ಎಂದೂ ಹೇಳಿರುವ ಅದು, ಒಪಿಎಸ್ ಜಾರಿಗೆ ಹೋರಾಟ ಮುಂದುವರಿಸುವುದಾಗಿ ಹೇಳಿದೆ. ಸಿಐಟಿಯು ಕೂಡ ಇದೇ ಧಾಟಿಯಲ್ಲಿ ಮಾತನಾಡಿದೆ. 

ಹಿಂದೆಯೂ ಚುನಾವಣೆ ವಿಷಯ: ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆ ಈ ಹಿಂದೆಯೂ ಚುನಾವಣಾ ವಿಷಯವಾಗಿತ್ತು. ಪಶ್ಚಿಮ ಬಂಗಾಳವು ಆರಂಭದಿಂದಲೂ ಹೊಸ ಪಿಂಚಣಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿರಲಿಲ್ಲ. ಆದರೆ, ಎನ್‌ಪಿಎಸ್‌ ಅಳವಡಿಸಿಕೊಂಡಿದ್ದ ಕೆಲವು ರಾಜ್ಯಗಳು ಹಳೆಯ ವ್ಯವಸ್ಥೆಗೆ ಮರಳಿವೆ.  

ಹಿಮಾಚಲ ಪ್ರದೇಶದಲ್ಲಿ 2022ರ ಚುನಾವಣೆಯಲ್ಲಿ ಇದು ಚುನಾವಣೆ ವಿಷಯವಾಗಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ ಒಪಿಎಸ್‌ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಘೋಷಿಸಿತ್ತು. ಚುನಾವಣೆಯಲ್ಲಿ ಗೆದ್ದ ಬಳಿಕ ಕಾಂಗ್ರೆಸ್‌ ಸರ್ಕಾರ ಅಲ್ಲಿ ಹಳೆ ವ್ಯವಸ್ಥೆ ಜಾರಿಗೊಳಿಸಿದೆ. 

2022ರಲ್ಲಿ ಛತ್ತೀಸಗಢದ ಕಾಂಗ್ರೆಸ್‌ ಸರ್ಕಾರವು ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಗೆ ಮರಳಲು ಅವಕಾಶ ಕಲ್ಪಿಸಿತ್ತು.

ರಾಜಸ್ಥಾನದಲ್ಲಿ 2022ರಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಹಳೆ ವ್ಯವಸ್ಥೆ ಜಾರಿಯನ್ನು ಘೋಷಿಸಿದ್ದರು. 2023ರ ಚುನಾವಣಾ ಸಂದರ್ಭದಲ್ಲಿ ಒಪಿಎಸ್‌ ಅನ್ನು ಮುಂದುವರಿಸುವುದು ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಒಂದಾಗಿತ್ತು. ಆದರೆ, ಚುನಾವಣೆಯಲ್ಲಿ ಬಿಜೆಪಿ ಗೆದ್ದಿತು. ಬಿಜೆಪಿ ಸರ್ಕಾರ ಹಳೆ ವ್ಯವಸ್ಥೆಯನ್ನೇ ಮುಂದುವರಿಸಿದೆ. ಜಾರ್ಖಂಡ್‌ನಲ್ಲೂ 2022ರಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಲಾಗಿದೆ. 

ಪಂಜಾಬ್‌ನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಎಎಪಿ ಸರ್ಕಾರ ಕೂಡ ಒಪಿಎಸ್‌ ಜಾರಿಗೆ ತರುವುದಾಗಿ ಘೋಷಿಸಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ. 

ಕರ್ನಾಟಕದಲ್ಲಿ 2023ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ಬಳಿಕ ಪ್ರಸ್ತಾವದ ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಿದೆ.

l ಕನಿಷ್ಠ 25 ವರ್ಷ ಕೆಲಸ ಮಾಡಿ ನಿವೃತ್ತರಾದ ನೌಕರರಿಗೆ, ನಿವೃತ್ತಿಗೂ ಮೊದಲಿನ ಕೊನೆಯ 12 ತಿಂಗಳ ಸರಾಸರಿ ಮೂಲ ವೇತನದ ಶೇ 50ರಷ್ಟು ಹಣ ಪಿಂಚಣಿ ರೂಪದಲ್ಲಿ ಸಿಗಲಿದೆ.10ರಿಂದ 25 ವರ್ಷಗಳ ಸೇವಾವಧಿ ಹೊಂದಿರುವ ನಿವೃತ್ತ ನೌಕರರಿಗೆ, ಕೆಲಸ ಮಾಡಿದ ವರ್ಷಗಳಿಗೆ ಅನುಗುಣವಾಗಿ ಪಿಂಚಣಿ ಸಿಗಲಿದೆ. 

l 10 ವರ್ಷ ಕೆಲಸ ಮಾಡಿ ನಿವೃತ್ತರಾದವರಿಗೆ ಕನಿಷ್ಠ ₹10 ಸಾವಿರ ಪಿಂಚಣಿ ಬರಲಿದೆ ‌

l ನಿವೃತ್ತ ನೌಕರ ಮೃತಪಟ್ಟರೆ ಶೇ 60ರಷ್ಟು ಪಿಂಚಣಿ ಕುಟುಂಬದ ಸದಸ್ಯರಿಗೆ ಸಿಗಲಿದೆ

l ಖಚಿತ ಪಿಂಚಣಿ, ಖಚಿತ ಕುಟುಂಬ ಪಿಂಚಣಿ, ಕನಿಷ್ಠ ಪಿಂಚಣಿಯು ಹಣದುಬ್ಬರದ ಸೂಚ್ಯಂಕಕ್ಕೆ ಅನುಗುಣವಾಗಿರಲಿದೆ. ಅಂದರೆ, ಹಣದುಬ್ಬರಕ್ಕೆ ಅನುಗುಣವಾಗಿ ಪಿಂಚಣಿಯ ಮೊತ್ತದಲ್ಲಿ ಬದಲಾವಣೆಯಾಗುತ್ತದೆ

l ನಿವೃತ್ತಿ ಹೊಂದುವ ಸಂದರ್ಭದಲ್ಲಿ ನೌಕರ ಖಚಿತ ಮೊತ್ತವನ್ನು ಪಡೆಯಲಿದ್ದಾರೆ. ಇದು ಗ್ರ್ಯಾಚ್ಯುಟಿಯಿಂದ ಪ್ರತ್ಯೇಕವಾಗಿರುತ್ತದೆ ಮತ್ತು ಪಿಂಚಣಿ ಮೊತ್ತವನ್ನು ಕಡಿಮೆ ಮಾಡುವುದಿಲ್ಲ

l ಪಿಂಚಣಿಗಾಗಿ ನೌಕರರ ಮೂಲ ವೇತನದಿಂದ ಶೇ 10 ಕಡಿತವಾದರೆ, ಕೇಂದ್ರ ಶೇ 18.5ರಷ್ಟು ಪಾವತಿಸುತ್ತದೆ

ಪಿಂಚಣಿ ವ್ಯಾಪ್ತಿಗೆ ಬರುವವರು

ಪಿಂಚಣಿ ಯೋಜನೆ;ನೋಂದಣಿದಾರರು;ನಿಧಿಯಲ್ಲಿರುವ ಮೊತ್ತ (ಎಯುಎಂ) (ಕೋಟಿ ₹ಗಳಲ್ಲಿ)

ಅಟಲ್‌ ಪಿಂಚಣಿ ಯೋಜನೆ;5.78 ಕೋಟಿ;39,133

ಎನ್‌ಪಿಎಸ್‌ ಸ್ವಾವಲಂಬನ;33.39 ಲಕ್ಷ;5,821

ಎಲ್ಲ ನಾಗರಿಕರು;37.10 ಲಕ್ಷ;67,006

ಕಾರ್ಪೊರೇಟ್‌ ವಲಯ;20.70 ಲಕ್ಷ;1.89 ಲಕ್ಷ ಕೋಟಿ

ರಾಜ್ಯ ಸರ್ಕಾರಿ ನೌಕರರು;67.11 ಲಕ್ಷ;6.32 ಲಕ್ಷ ಕೋಟಿ

ಕೇಂದ್ರ ಸರ್ಕಾರಿ ನೌಕರರು;26.51 ಲಕ್ಷ;3.47 ಲಕ್ಷಕೋಟಿ

ಒಟ್ಟು;7.63 ಕೋಟಿ;12.81 ಲಕ್ಷ ಕೋಟಿ

l ಪಿಂಚಣಿ ಮೊತ್ತ ನಿಗದಿತವಲ್ಲ. ಅದು ಮಾರುಕಟ್ಟೆ ಬೆಳೆವಣಿಗೆಯ ಮೇಲೆ ಅವಲಂಬಿತವಾಗಿರುತ್ತದೆ

l ಕುಟುಂಬ ಪಿಂಚಣಿ ಮೊತ್ತವು, ಪಿಂಚಣಿ ನಿಧಿಯಲ್ಲಿ ಸಂಗ್ರಹವಾಗಿರುವ ಮೊತ್ತ ಮತ್ತು ನಿವೃತ್ತಿ ಸಂದರ್ಭದಲ್ಲಿ ಆಯ್ಕೆ ಮಾಡಿದ ವಾರ್ಷಿಕ ಯೋಜನೆಯನ್ನು ಅವಲಂಬಿಸಿರುತ್ತದೆ

l ಸಶಸ್ತ್ರ ಪಡೆಗಳ ಸಿಬ್ಬಂದಿ ಬಿಟ್ಟು, 2004ರ ಜ. 1ರ ನಂತರ ಕೇಂದ್ರ ಸರ್ಕಾರಿ ಕೆಲಸಕ್ಕೆ ಸೇರಿದವರಿಗೆ ಅನ್ವಯ. ಖಾಸಗಿ ವಲಯದ ನೌಕರರಿಗೂ ಇದು ಲಭ್ಯವಿದೆ. 

l ನೌಕರರು ಮೂಲ ವೇತನದ ಶೇ 10ರಷ್ಟು, ಕೇಂದ್ರ ಶೇ 14ರಷ್ಟು ಪಾವತಿಸುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT