ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

International Yoga Day: ಯೋಗದ ನೈಜ ಸಾರ

Published 20 ಜೂನ್ 2024, 12:17 IST
Last Updated 20 ಜೂನ್ 2024, 12:17 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ದೈಹಿಕವಾಗಿ ಮಾಡುವ ಆಸನಗಳೇ ಯೋಗವೆಂದು ಸಾಮಾನ್ಯ ಕಲ್ಪನೆ. ಆದರೆ ಪತಂಜಲಿಯವರ ಯೋಗಸೂತ್ರಗಳಲ್ಲಿ ಆಸನಕ್ಕೆಂದು ಸಮರ್ಪಿತವಾಗಿರುವ ಸೂತ್ರಗಳು ಕೇವಲ ಮೂರು ಎಂದು ನಿಮಗೆ ತಿಳಿದಿದೆಯೆ? ಪತಂಜಲಿ ಯೋಗಸೂತ್ರಗಳು ಯೋಗದ ವಿಜ್ಞಾನದ ಮೇರುಕೃತಿ. ಯೋಗವು, ವ್ಯಾಯಾಮ ಮತ್ತು ಆಸನಗಳನ್ನೂ ಮೀರಿದ್ದಾಗಿದೆ.

ಯೋಗವನ್ನು ವಿವರಿಸಿರುವ ಪತಂಜಲಿಯವರು ಒಂದು ಸೂತ್ರದಲ್ಲಿ, ‘ಯೋಗವೆಂದರೆ ಮನಸ್ಸಿನ, ಚಿತ್ತದ ವೃತ್ತಿಗಳಿಂದ ಬಿಡುಗಡೆ ಪಡೆಯುವುದು’ ಎಂದು ಹೇಳಿದ್ದಾರೆ. ಇದನ್ನು ಇನ್ನಷ್ಟು ವಿವರಿಸುತ್ತಾ,

‘ಮನಸ್ಸಿಗೆ ಐದು ವೃತ್ತಿಗಳಿವೆ- ಎಲ್ಲದ್ದಕ್ಕೂ ಪ್ರಮಾಣವನ್ನು ಕೋರುವುದು, ವಾಸ್ತವತೆಯನ್ನು ತಪ್ಪಾಗಿ ತಿಳಿಯುವುದು, ಕಲ್ಪನೆ, ನಿದ್ದೆ ಮತ್ತು ಸ್ಮೃತಿ’ ಎನ್ನುತ್ತಾರೆ.

ಇಡೀ ದಿನದಲ್ಲಿ ನಿಮ್ಮ ಮನಸ್ಸು ಈ ಯಾವುದಾದರೊಂದು ಅಥವಾ ಒಂದಕ್ಕಿಂತ ಹೆಚ್ಚಿನ ವೃತ್ತಿಯಲ್ಲಿ ಸದಾ ತೊಡಗಿರುತ್ತದೆ. ಆದರೆ ದಿನದ ಯಾವುದೇ ಸಮಯದಲ್ಲಿ ನೀವು ಮಲಗಿರದೇ, ನೆನಪುಗಳಲ್ಲೇ ಕಳೆದುಹೋಗದೆ, ಗತದ ಬಗ್ಗೆ ಕೋಪಗೊಳ್ಳದೇ, ಕಲ್ಪನೆಗಳಲ್ಲಿ ಮುಳುಗಿರದೇ ಅಥವಾ ಪ್ರಮಾಣಕ್ಕಾಗಿ ಹುಡುಕದೇ ಇದ್ದರೆ, ಆಗ ಆ ಕ್ಷಣದಲ್ಲಿ ಯೋಗವು ಆದಂತೆಯೇ.

ಇವು ಬಲು ಅಮೂಲ್ಯವಾದ ಕ್ಷಣಗಳು, ಏಕೆಂದರೆ ಆಗ ನೀವು ನಿಮ್ಮಲ್ಲೇ ಇರುತ್ತೀರಿ; ಸಂತೋಷದ, ಪ್ರೇಮದ, ಶಾಂತಿಯ ಮತ್ತು ಜ್ಞಾನದ ಮೂಲವೇ ಆಗಿರುವ ನಿಮ್ಮ ಆತ್ಮದೊಡನೆ ಇರುತ್ತೀರಿ. ನಿಮ್ಮಲ್ಲೇ ನೀವು ಪರಿಪೂರ್ಣವಾಗಿ, ಶಾಂತಿಯಿಂದ ಇದ್ದಾಗ ಉಂಟಾಗುವುದೇ ಯೋಗ. ನಿಮ್ಮದೇ ಜೀವನದತ್ತ ಸ್ವಲ್ಪ ಹಿಂದಿರುಗಿ ನೋಡಿ. ಈ ರೀತಿಯ ಅನುಭವವನ್ನು ನೀವು ಪಡೆದಿಲ್ಲವೆ?

ಉದಾಹರಣೆಗೆ, ಸೂರ್ಯಾಸ್ತದಂತಹ ಒಂದು ಸುಂದರವಾದ ದೃಶ್ಯದಲ್ಲಿ ಮಗ್ನವಾಗಿದ್ದಾಗ, ನೀವು ಪೂರ್ಣವಾಗಿ ವರ್ತಮಾನದ ಕ್ಷಣದಲ್ಲಿ ಇರಲಿಲ್ಲವೆ? ಪೂರ್ಣ ಶಾಂತಿಯನ್ನು ನೀವು ಆ ಕ್ಷಣಗಳಲ್ಲಿ ಅನುಭವಿಸಿರಲಿಲ್ಲವೆ? ಪ್ರಾಣಾಯಾಮ ಅಥವಾ ಧ್ಯಾನವನ್ನು ಮಾಡುತ್ತಿರುವಾಗಲೂ ಸಹ ಇದರ ಅನುಭವವಾಗುತ್ತದೆ. ಆ ಸಮಯದಲ್ಲಿ ಮನಸ್ಸು ತನ್ನ ಎಲ್ಲಾ ಐದು ವೃತ್ತಿಗಳಿಂದಲೂ ಮುಕ್ತವಾಗಿರುತ್ತದೆ. ಆದ್ದರಿಂದಲೇ ಯೋಗ ಉಂಟಾಗಲೆಂದೇ, ಆಸನಗಳನ್ನು ಮಾಡುವಾಗ, ದೇಹ, ಮನಸ್ಸು ಮತ್ತು ಉಸಿರನ್ನು ಒಂದಾಗಿ ಸಮೀಕರಿಸುವುದು.

ಮನಸ್ಸಿನ ವೃತ್ತಿಗಳು:

1. ಪ್ರಮಾಣವನ್ನು ಕೋರುವುದು.

ಪ್ರತಿಯೊಂದಕ್ಕೂ ಪ್ರಮಾಣವನ್ನು ಕೋರುವುದು ಮನಸ್ಸಿನ ಪ್ರವೃತ್ತಿಯಾಗಿದೆ. ಈ ಪ್ರಮಾಣಗಳಲ್ಲಿ ಮೂರು ವಿಧ. ಮೊದಲನೆಯದು ಪ್ರತ್ಯಕ್ಷ ಪ್ರಮಾಣ, ಪ್ರತ್ಯಕ್ಷವಾಗಿರಬಲ್ಲಂತಹ, ಅನುಭವಿಸಬಹುದಾದಂತಹ ಪ್ರಮಾಣವನ್ನು ಕೋರುವುದು. ಎರಡನೆಯದು ಅನುಮಾನ, ಅದನ್ನು ಪ್ರತ್ಯಕ್ಷವಾಗಿ ಕಾಣದೆ ಇದ್ದರೂ ಸಹ, ಅದರ ಅಂದಾಜನ್ನು ಮಾಡಬಹುದು. ಉದಾಹರಣೆಗೆ, ಹೊಗೆಯನ್ನು ಕಂಡಾಗ, ನೀವು ಬೆಂಕಿಯನ್ನು ಕಾಣದೆ ಇದ್ದರೂ ಸಹ ಬೆಂಕಿಯಿದೆಯೆಂದು ಅಂದಾಜು ಮಾಡಬಹುದು. ಕೊನೆಯದಾಗಿ ಆಗಮಗಳ, ಶಾಸ್ತ್ರಗಳ ಪ್ರಮಾಣ. ಉದಾಹರಣೆಗೆ, ಒಂದು ಔಷಧೀಯ ಬಾಟಲಿಯ ಮೇಲೆ ವಿಷ ಎಂದು ಬರೆದಿದೆ, ‘ಅದು ವಿಷವೋ ಅಲ್ಲವೋ ಎಂದು ಕುಡಿದು ಅದನ್ನು ಪರೀಕ್ಷಿಸಿ ನೋಡುತ್ತೇನೆ’ ಎನ್ನುವುದಿಲ್ಲ ನೀವು. ಅದನ್ನು ವಿಷ ಎಂದು ಬರೆದಿರುವುದನ್ನು ಒಪ್ಪುತ್ತೀರಿ.

2. ತಪ್ಪಾಗಿ ಅರ್ಥಮಾಡಿಕೊಳ್ಳುವುದು, ವಿಪರ್ಯಯ.

ಮನಸ್ಸು ತಪ್ಪಾದ ತಿಳಿವಳಿಕೆಯಲ್ಲಿ, ತಪ್ಪಾದ ಜ್ಞಾನದಲ್ಲಿ ಸಿಲುಕಿಕೊಳ್ಳುವುದು. ಜನರ ಬಗ್ಗೆ ಅಥವಾ ಪರಿಸ್ಥಿತಿಗಳ ಬಗ್ಗೆ ತಪ್ಪಾದ ತಿಳುವಳಿಕೆಯನ್ನು ಹೊಂದುವುದು. ಇದರಿಂದ ಜನರ ನಡುವೆ, ಸಮಾಜಗಳ ನಡುವೆ ಅಪಾರ್ಥಗಳು ಉಂಟಾಗುತ್ತವೆ. ಉದಾಹರಣೆಗೆ, ನಿಮಗೆ ಕೀಳರಿಮೆ ಇರುವುದರಿಂದ ಇತರರನ್ನು ಅಹಂಕಾರಿಗಳೆಂದು ಭಾವಿಸಿಕೊಳ್ಳುತ್ತೀರಿ. ವಾಸ್ತವದಲ್ಲಿ ಅವರು ಅಹಂಕಾರಿಗಳೂ ಆಗಿರುವುದಿಲ್ಲ ಅಥವಾ ಅಗೌರವವನ್ನೂ ಸೂಚಿಸುತ್ತಿರುವುದಿಲ್ಲ. ನಿಮಗೆ ನೀವೇ ಗೌರವವನ್ನು ಕೊಡುವುದಿಲ್ಲವಾದ್ದರಿಂದ ಬೇರೆಯವರು ನಿಮ್ಮನ್ನು ಗೌರವಿಸುತ್ತಿಲ್ಲ ಎಂದು ಭಾವಿಸುತ್ತೀರಿ. ವಿಪರ್ಯಯವು ಪ್ರಧಾನವಾದಾಗ, ತರ್ಕವು ಸೋತಾಗ, ಪ್ರಮಾಣಕ್ಕೆ ಯಾವ ಮಹತ್ವವೂ ಇರುವುದಿಲ್ಲ. ಸರಿಯಾದ ಮಾಹಿತಿಯು ಕೆಲ ಸಮಯದವರೆಗೆ ಇದ್ದರೂ, ಮನಸ್ಸು ತಪ್ಪಾದ ಮಾಹಿತಿಗೆ ಅಂಟಿಕೊಳ್ಳುತ್ತದೆ.

3. ಇಲ್ಲದೆ ಇರುವುದನ್ನು ಊಹಿಸಿಕೊಳ್ಳುವುದು.

ಮನಸ್ಸಿನ ಈ ಮೂರನೆಯ ಪ್ರವೃತ್ತಿಯಾದ ವಿಕಲ್ಪವು ಒಂದು ರೀತಿಯಾದ ಮಾನಸಿಕ ಭ್ರಮೆ. ಒಂದು ರೀತಿಯ ಆಲೋಚನೆ ಇರಬಹುದು, ಆದರೆ ಇದು ನಿಜವಾಗಿಲ್ಲದೆ ಇರಬಹುದು. ಅದೊಂದು ಸುಖಮಯವಾದ ಕಲ್ಪನೆಯಾಗಿರಬಹುದು ಅಥವಾ ನಿರಾಧಾರವಾದ ಭಯವಿರಬಹುದು. ನಿಮಗೆ ಅರವತ್ತು ವರ್ಷಗಳಾಗಿದ್ದು, ನೀವೀಗ ಹದಿನಾರು ವರ್ಷದವರಾದರೆ ಹೇಗೆ ಎಂದು ಊಹಿಸಿಕೊಳ್ಳುವುದು. ಅಥವಾ ನಾಳೆಯ ದಿನ ನಿಮಗೆ ಅಪಘಾತವಾಗಿ ನೀವು ಸತ್ತು ಹೋದರೆ ಏನು ಮಾಡುವುದು ಎಂದು ಆತಂಕದಿಂದ ಇರುವುದು. ಇವೆರಡೂ ವಿಕಲ್ಪಗಳೇ.

4. ನಿದ್ದೆ.

ನಿದ್ದೆಯನ್ನು ಬಲು ಸುಂದರವಾಗಿ ವಿವರಿಸಿದವರಲ್ಲಿ ಪತಂಜಲಿ ಮಹರ್ಷಿಗಳ ಬಿಟ್ಟು ಮತ್ತೊಬ್ಬರಿಲ್ಲ. ಮನಸ್ಸು ಯಾವುದೇ ವಿಷಯಗಳಲ್ಲಿ ಒಳಗಾಗದ ಸ್ಥಿತಿಯಲ್ಲಿ ನಿದ್ದೆಗೆ ಜಾರುತ್ತದೆ. ವಿಷಯಗಳು ಇಲ್ಲದಂತಹ ಮನಸ್ಸಿನ ವೃತ್ತಿಯಲ್ಲಿ ಮನಸ್ಸು ಆಶ್ರಯವನ್ನು ಪಡೆದಾಗ, ಅದನ್ನು ನಿದ್ದೆ ಎನ್ನಬಹುದು.

5.ಸ್ಮೃತಿ.

ಸ್ಮೃತಿಯೆಂದರೆ, ನಿಮ್ಮ ಮನಸ್ಸಿಗೆ ಬಿಟ್ಟುಬಿಡಲು ಸಾಧ್ಯವಾಗದೆ ಇರುವಂತಹ ಅನುಭವಗಳ ನೆನಪುಗಳು. ಪ್ರತಿನಿತ್ಯ ಬೆಳಿಗ್ಗೆ ನಿಮ್ಮ ಹಲ್ಲನ್ನು ಉಜ್ಜುತ್ತೀರಿ, ಆದರೆ ಅದು ನಿಮ್ಮ ಮನಸ್ಸಿನ ಮೇಲೆ ಯಾವ ಅಚ್ಚನ್ನೂ ಉಂಟುಮಾಡುವುದಿಲ್ಲ. ಪ್ರತಿನಿತ್ಯ ಬೆಳಿಗ್ಗೆ ತಿಂಡಿಯನ್ನು ತಿನ್ನುತ್ತೀರಿ. ಮೊನ್ನೆಯ ದಿನ ಯಾವ ತಿಂಡಿಯನ್ನು ತಿಂದಿರಿ ಎಂಬ ನೆನಪು ನಿಮಗಿದೆಯೆ? ಒಂದು ವಾರದ ಹಿಂದೆ? ಅಥವಾ ಹಿಂದಿನ ತಿಂಗಳು? ಇಲ್ಲ! ಏಕೆಂದರೆ ನೀವು, ಇವುಗಳು ಬಗ್ಗೆ ಯಾವ ಮಹತ್ವವನ್ನೂ ಹೊಂದಿರುವುದಿಲ್ಲ. ಅವು ಸುಖಕರವಾಗಿಯೂ ಇರುವುದಿಲ್ಲ ಅಥವಾ ವೇದನಕರವಾಗಿಯೂ ಇರುವುದಿಲ್ಲ. ಆದ್ದರಿಂದ ಚೈತನ್ಯದ ಮೇಲೆ ಯಾವ ಪ್ರಭಾವವನ್ನೂ ಅವು ಬೀರುವುದಿಲ್ಲ. ಆದರೆ ಕೆಲವು ನೆನಪುಗಳನ್ನು ನಿಮ್ಮ ಮನಸ್ಸಿನಿಂದ ಹೋಗಲಾಡಿಸಲು ಸಾಧ್ಯವಿಲ್ಲ. ಅವು ನಿಮ್ಮ ಸ್ಮೃತಿಪಟಲದಲ್ಲೇ ಉಳಿದು, ಅವು ರಾಗವನ್ನು ಅಥವಾ ದ್ವೇಷವನ್ನು ಉಂಟು ಮಾಡುತ್ತವೆ. ಅಹಿತವಾದ ಅನುಭವಗಳು ಮನಸ್ಸಿನಲ್ಲಿ ಭಯ ಮತ್ತು ಆಘಾತವನ್ನು ಉಂಟುಮಾಡುತ್ತವೆ.

ಮನಸ್ಸಿನ ವೃತ್ತಿಗಳನ್ನು ಹೊಂದಿರುವುದು ತಪ್ಪೇ?

ಈ ಐದು ವೃತ್ತಿಗಳನ್ನು ಹೋಗಲಾಡಿಸಿಬಿಡಬೇಕು ಎಂದು ಕೆಲವರು ಹೇಳುತ್ತಾರೆ. ಅದು ಸರಿಯಲ್ಲ. ರಾತ್ರಿಯಿಡೀ ಎಚ್ಚೆತ್ತುಕೊಂಡಿರಿ ಎನ್ನುತ್ತಾರೆ ಕೆಲವರು. ಮಹರ್ಷಿ ಪತಂಜಲಿಯವರು ಇದರ ಬಗ್ಗೆ ಹೇಳುವುದಿಲ್ಲ.

ಈ ವೃತ್ತಿಗಳು ಕ್ಲಿಷ್ಟವಾಗಿರುತ್ತವೆ ಅಥವಾ ಅಕ್ಲಿಷ್ಟವಾಗಿರುತ್ತವೆ. ಕೆಲವು ಕಷ್ಟಕರವಾಗಿರುತ್ತವೆ, ವೇದನಕರವಾಗಿರುತ್ತವೆ. ಉದಾಹರಣೆಗೆ, ಸಾಕಷ್ಟು ನಿದ್ದೆ ಮಾಡದೆ ಇದ್ದರೆ, ಅದು ವೇದನಕರವಾಗಿರುತ್ತದೆ. ವಿಪರೀತ ನಿದ್ದೆ ಮಾಡಿದರೂ ಅದರಿಂದ ಆಲಸ್ಯ, ಅಹಿತ ಉಂಟಾಗುತ್ತದೆ. ಅದೇ ರೀತಿಯಾಗಿ, ಎಲ್ಲವನ್ನು ಮರೆತರೆ ನೋವುಂಟಾಗುತ್ತದೆ. ಏನನ್ನೂ ಮರೆಯದಿದ್ದರೂ ದುಃಖಮಯವಾಗಿರುತ್ತದೆ. ಪ್ರಮಾಣವನ್ನು ಕೋರಿದರೂ ವೇದನಕರವಾಗಿರುತ್ತದೆ. ಆದ್ದರಿಂದಲೇ ಬಹುಶಃ ‘ಅಜ್ಞಾನವೇ ಆನಂದ’ ಎಂಬ ಆಂಗ್ಲದ ಗಾದೆಯಿರುವುದು. ನಿಮಗೆ ತಿಳಿಯದಿದ್ದಾಗ ಸಂತೋಷವಾಗಿರುತ್ತೀರಿ. ಆದರೆ ಪ್ರಮಾಣ ದೊರೆತಾಗ ಸತ್ಯವು ನಿಮ್ಮನ್ನು ಕಠೋರವಾಗಿ ಹೊಡೆಯಬಹುದು. ಅಜ್ಞಾನ ಮತ್ತು ತಪ್ಪಾದ ತಿಳಿವಳಿಕೆಯಿಂದ ನಿಮ್ಮ ಮನಸ್ಸಿನಲ್ಲಿ ನೀವು ಕಟ್ಟಿಕೊಂಡಿರುವ ಸಣ್ಣ ಜಗತ್ತಿನಲ್ಲೇ ಇದ್ದುಬಿಡಬಹುದು ಮತ್ತು ಅದು ಸುಖಕರವಾಗಿರುತ್ತದೆ. ಒಂದೆಡೆ ಕುಳಿತುಕೊಂಡು ನಿಮಗೆ ರೆಕ್ಕೆಗಳಿವೆ ಮತ್ತು ನೀವು ಹಾರುತ್ತಿರುವಿರಿ ಎಂದು ಊಹಿಸಿಕೊಳ್ಳುತ್ತಿರಬಹುದು. ಅದು ವೇದನಕರವಾಗಿರುವುದಿಲ್ಲ. ಅದೇ ರೀತಿಯಾಗಿ, ಎಲ್ಲರೂ ನಿಮ್ಮ ಬೆನ್ನತ್ತಿದ್ದಾರೆ, ನಿಮ್ಮನ್ನು ಮುಗಿಸಲು ನಿಮ್ಮ ಹಿಂದೆ ಓಡುತ್ತಿದ್ದಾರೆ ಎಂದು ಭಾವಿಸಿಕೊಳ್ಳುತ್ತಿದ್ದರೆ, ನಿಮ್ಮ ಜೀವನವನ್ನು ನೀವು ಕಷ್ಟಕರವಾಗಿ ಮಾಡಿಕೊಳ್ಳುತ್ತೀರಿ.

ಈ ಐದು ವೃತ್ತಿಗಳು ಜೀವನದ ಅವಿಭಾಜ್ಯ ಅಂಗ. ಅವು ನಿಮ್ಮ ಹತೋಟಿಯನ್ನು ಮೀರಿದರೆ ಅಥವಾ ನಿಮ್ಮ ಹತೋಟಿಯಲ್ಲಿ ಇಲ್ಲದಿದ್ದರೆ, ನಿಮ್ಮ ಆತ್ಮದೆಡೆಗೆ ನೀವು ಬರಲು ಸಾಧ್ಯವೇ ಇಲ್ಲ. ಮನಸ್ಸಿನ ಮೇಲೆ ಹತೋಟಿಯನ್ನು ಹೊಂದುವ ಈ ವೃತ್ತಿಗಳನ್ನು ಹೇಗೆ ನಿಭಾಯಿಸುವುದು? ಅಭ್ಯಾಸ ಮತ್ತು ವೈರಾಗ್ಯದಿಂದ.

ಈ ಐದು ವೃತ್ತಿಗಳಿಂದ ಬಿಡುಗಡೆ ಹೊಂದಲು ಯತ್ನ ಮಾಡಬೇಕು, ಮನಸ್ಸನ್ನು ವರ್ತಮಾನದ ಕ್ಷಣಕ್ಕೆ ತರಲು ಯತ್ನ ಮಾಡಬೇಕು. ಈ ಯತ್ನವನ್ನು ಅಭ್ಯಾಸ ಎಂದು ಕರೆಯುತ್ತಾರೆ. ಜ್ಞಾನದ ಪ್ರಮಾಣವನ್ನು ತಿಳಿಯುವ ಯಾವ ಆಸಕ್ತಿಯೂ ಇಲ್ಲವೆಂಬುದರಿಂದ ಆರಂಭಿಸಬಹುದು. ಮನಸ್ಸು ಜ್ಞಾನದ ಪ್ರಮಾಣವನ್ನು ಕೋರಿದಾಗ ಅದನ್ನು ಗಮನಿಸಿ ವಿಶ್ರಮಿಸಿ. ವಿಷಯಗಳು ಇರುವ ರೀತಿಯಲ್ಲೇ ಇರಲಿಬಿಡಿ. ಮನಸ್ಸು ಯಾವುದೋ ಒಂದು ಬಿಸಿಲುಕುದುರೆಯನ್ನು ಹತ್ತಿ ಹೊರಟಿದ್ದರೆ, ಅದು ಹಾಗೆ ಮಾಡುತ್ತಿದೆಯೆಂಬ ಅರಿವನ್ನು ಹೊಂದಿ. ನೀವು ಕಲ್ಪನಾ ಲೋಕದಲ್ಲಿ ತೇಲುತ್ತಿರುವಿರಿ ಎಂದು ಅರಿತುಕೊಂಡಾಗ, ಅದರಿಂದ ಬಿಡುಗಡೆ ಹೊಂದಿ, ವರ್ತಮಾನದ ಕ್ಷಣಕ್ಕೆ ಬರುತ್ತೀರಿ.

ವರ್ತಮಾನದ ಕ್ಷಣವು ನವ ನವೀನ, ಹೊಚ್ಚ ಹೊಸತು ಮತ್ತು ಪರಿಪೂರ್ಣ.

https://www.artofliving.org/in-en/idy-2024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT