ಕೋಲ್ಕತ್ತ: ಇಲ್ಲಿನ ಆರ್.ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ತಾವು ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಾಗಿ ಕಿರಿಯ ವೈದ್ಯರು ಶುಕ್ರವಾರ ಸಂಜೆ ಘೋಷಿಸಿದರು.
‘ಶನಿವಾರದಿಂದ ಆಸ್ಪತ್ರೆಗಳಿಗೆ ತೆರಳಿ ಸೇವೆಗೆ ಹಾಜರಾಗುತ್ತೇವೆ. ಆದರೂ ಹೊರರೋಗಿಗಳ ವಿಭಾಗದಲ್ಲಿ (ಒಪಿಡಿ) ನಾವು ಸೇವೆ ಮಾಡುವುದಿಲ್ಲ. ಬದಲಾಗಿ ತುರ್ತು ವಿಭಾಗ ಮತ್ತು ಅಗತ್ಯ ಸೇವೆಗಳಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತೇವೆ’ ಎಂದು ಅವರು ತಿಳಿಸಿದರು.
ಅಲ್ಲದೇ ತಮಗೆ ನೀಡಿರುವ ಭರವಸೆಗಳನ್ನು ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ಆರಂಭಿಸುವುದಾಗಿ ಪ್ರತಿಭಟನಾ ನಿರತ ವೈದ್ಯರೊಬ್ಬರು ಹೇಳಿದರು.
ತಮ್ಮ 42 ದಿನಗಳ ನಿರಂತರ ಪ್ರತಿಭಟನೆಯನ್ನು ಅಂತ್ಯಗೊಳಿಸಿದ ಕಿರಿಯ ವೈದ್ಯರು, ಬಳಿಕ ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿಯಿಂದ ಕೇಂದ್ರೀಯ ತನಿಖಾ ದಳ (ಸಿಬಿಐ) ಕಚೇರಿಯವರೆಗೆ 4 ಕಿ.ಮೀ ಮಾರ್ಗದಲ್ಲಿ ಮೆರವಣಿಗೆ ನಡೆಸಿದರು.
ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ಒಪಿಡಿಗಳಲ್ಲಿ ಸೇವೆ ಮಾಡುವುದಿಲ್ಲ: ಕಿರಿಯ ವೈದ್ಯರು