‘1992ರ ಡಿಸೆಂಬರ್ 6, ಆ ಸಂದರ್ಭ ನಾನು ಪಕ್ಷದ ಮುಖ್ಯ ಸಚೇತಕನಾಗಿದ್ದೆ. ಸುಂದರ್ ಸಿಂಗ್ ಭಂಡಾರಿ ಸೇರಿದಂತೆ ಇತರ ನಾಯಕರ ಜತೆ ದೆಹಲಿಯ ಪ್ರಧಾನ ಕಚೇರಿಯಲ್ಲಿ ಕುಳಿತು ಅಯೋಧ್ಯೆಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಆ ಸಂದರ್ಭದಲ್ಲಿ ಸಂವಹನ ಸುಲಭವಾಗಿರಲಿಲ್ಲ, ಮೊಬೈಲ್ ದೂರವಾಣಿಗಳು ಇರಲಿಲ್ಲ. ಸ್ಥಿರ ದೂರವಾಣಿ ಮೂಲಕ ಮಾಹಿತಿ ಪಡೆಯುತ್ತಿದ್ದೆವು. ಅಡ್ವಾಣಿ ಅವರು ಅಯೋಧ್ಯೆಯಲ್ಲಿದ್ದರೆ, ವಾಜಪೇಯಿ ದೆಹಲಿಯಲ್ಲೇ ಇದ್ದರು. ಎಷ್ಟು ಮಂದಿ ಕರಸೇವಕರನ್ನು ಅಯೋಧ್ಯೆ ಪ್ರವೇಶಿಸಲು ಬಿಟ್ಟರು, ಎಷ್ಟು ಮಂದಿ ಹೊರಗೆ ಇದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದೆವು. ಅಡ್ವಾಣಿ ಅವರು ಹಾಗೂ ಪಕ್ಷದ ಇತರ ನಾಯಕರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಮಾಹಿತಿ ನಮಗೆ ದೊರೆತಿತ್ತು. ಆ ಬಳಿಕ ಏನಾಗಬಹುದು ಎಂಬ ಸುಳಿವು ಕೂಡ ನಮಗಿರಲಿಲ್ಲ. ಬಾಬರಿ ಮಸೀದಿ ಧ್ವಂಸಗೊಳಿಸಿದ ಬಳಿಕವಷ್ಟೇ ನಮಗೆ ಆ ಮಾಹಿತಿ ದೊರೆಯಿತು’ ಎಂದು ರಾಮ್ ನಾಯಕ್ ಹೇಳಿದ್ದಾರೆ.