ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ: ಕೇರಳ ನಿರ್ದೇಶಕ ರಂಜಿತ್ ವಿರುದ್ಧ ನಟ ದೂರು

Published : 30 ಆಗಸ್ಟ್ 2024, 5:13 IST
Last Updated : 30 ಆಗಸ್ಟ್ 2024, 5:13 IST
ಫಾಲೋ ಮಾಡಿ
Comments

ತಿರುವನಂತಪುರ: ಕೇರಳ ಚಿತ್ರರಂಗದ ನಿರ್ಮಾಪಕ, ನಿರ್ದೇಶಕರಾದ ರಂಜಿತ್ ಅವರು ನನ್ನನ್ನು ಬಲವಂತವಾಗಿ ವಿವಸ್ತ್ರಗೊಳಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಯುವ ನಟರೊಬ್ಬರು ದೂರು ದಾಖಲಿಸಿದ್ದಾರೆ.

ಯುವ ನಟರೊಬ್ಬರು ಡಿಜಿಪಿಗೆ ದೂರು ಸಲ್ಲಿಸಿದ್ದಾರೆ ಎಂದು ಕೇರಳ ಪೊಲೀಸರು ಖಚಿತಪಡಿಸಿದ್ದಾರೆ.

‘2012ರಲ್ಲಿ ಸಿನಿಮಾವೊಂದರ ಆಡಿಷನ್‌ ವಿಚಾರವಾಗಿ ರಂಜಿತ್ ಅವರು ನನ್ನನ್ನು ಬೆಂಗಳೂರಿನ ಹೊಟೇಲ್‌ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದು ಆಡಿಷನ್‌ನ ಭಾಗವೆಂದು ನಾನು ಭಾವಿಸಿದ್ದೆ’ ಎಂದು ಯುವ ನಟ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಕೇರಳ ಪೊಲೀಸರು ತಿಳಿಸಿದ್ದಾರೆ.

‘ನನ್ನನ್ನು ಬೆತ್ತಲೆಯಾಗಿ ನಿಲ್ಲುವಂತೆ ರಂಜಿತ್ ಹೇಳಿದ್ದರು. ನಾನು ಅವರು ಹೇಳಿದಂತೆಯೇ ಮಾಡಿದೆ. ಇದೇ ಸಂದರ್ಭದಲ್ಲಿ ರಂಜಿತ್ ಅವರು ನಟಿ ರೇವತಿ ಅವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ರಂಜಿತ್ ಮತ್ತು ರೇವತಿ ನಡುವೆ ಯಾವ ರೀತಿಯ ಸಂಬಂಧವಿದೆ ಎಂದು ನನಗೆ ಗೊತ್ತಿಲ್ಲ. ಆದರೆ, ರಂಜಿತ್ ನನ್ನ ಬೆತ್ತಲೆ ಫೋಟೊಗಳನ್ನು ರೇವತಿ ಅವರಿಗೆ ಕಳುಹಿಸಿದ್ದರು. ಆ ಫೋಟೊಗಳನ್ನು ನೋಡಿ ರೇವತಿ ಇಷ್ಟಪಟ್ಟಿದ್ದಾಳೆ ಎಂದು ರಂಜಿತ್ ಹೇಳಿದ್ದರು. 'ಬಾವುಟ್ಟಿಯುಡೆ ನಾಮತ್ತಿಲ್' ಚಿತ್ರದ ಆಡಿಯೊ ಬಿಡುಗಡೆ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು’ ಎಂದು ಯುವ ನಟ ದೂರಿನಲ್ಲಿ ವಿವರಿಸಿದ್ದಾರೆ.

ಇತ್ತೀಚೆಗೆ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಕೂಡ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸಂಬಂಧ ನಟಿಯೊಬ್ಬರು ಸಲ್ಲಿಸಿದ ದೂರಿನ ಆಧಾರದ ಮೇಲೆ ಮಲಯಾಳಂ ನಟ ಜಯಸೂರ್ಯ ವಿರುದ್ಧ ಹೊಸ ಪ್ರಕರಣ ದಾಖಲಿಸಲಾಗಿದೆ ಎಂದು ಕೇರಳ ಪೊಲೀಸರ ತಿಳಿಸಿದ್ದಾರೆ.

ಚಿತ್ರನಟರಿಂದ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಹಿರಂಗಗೊಂಡ ಹಿಂದೆಯೇ, ಮಲಯಾಳ ಸಿನಿಮಾ ಕಲಾವಿದರ ಸಂಘಕ್ಕೆ (ಅಮ್ಮ) ಹಿರಿಯ ನಟ ಮೋಹನ್‌ಲಾಲ್‌, ಇತರ ಪದಾಧಿಕಾರಿಗಳು ಈಚೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು.

ನಟರಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅನೇಕ ಕಲಾವಿದೆಯರು ಕಳೆದ ಕೆಲವು ದಿನಗಳಿಂದ ಆರೋಪ ಮಾಡಿದ್ದಾರೆ. ಕೆಲವು ಬಂಗಾಳಿ ನಟಿಯರೂ ಆರೋಪಕ್ಕೆ ದನಿಗೂಡಿಸಿದ್ದಾರೆ.

ನಿರ್ದೇಶಕ ರಂಜಿತ್, ನಟರಾದ ಸಿದ್ದೀಕ್‌, ಮುಕೇಶ್ ಅವರ ವಿರುದ್ಧವೂ ಅರೋಪಗಳು ಕೇಳಿಬಂದಿವೆ. ಮಲಯಾಳ ಚಿತ್ರರಂಗದಲ್ಲಿ ಕಾರ್ಯಸ್ಥಳದಲ್ಲಿ ಕಲಾವಿದೆಯರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ನಡೆಯುತ್ತಿದೆ ಎಂಬ ಅಂಶಗಳನ್ನು ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಉಲ್ಲೇಖಿಸಿತ್ತು.

ಮಲಯಾಳ ಚಿತ್ರರಂಗದಲ್ಲಿ ಪ್ರಭಾವಿ ಯಾಗಿರುವ ‘ಅಮ್ಮ’ ಕುರಿತು ಹೇಳಿಕೆ ನೀಡಿದ್ದು, ಅಧ್ಯಕ್ಷ ಮೋಹನ್‌ಲಾಲ್‌ ಸೇರಿ ಎಲ್ಲ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾಗಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT