ಇಂಫಾಲ್ (ಮಣಿಪುರ): ಸ್ವಚ್ಛತಾ ಅಭಿಯಾನದ ಭಾಗವಾಗಿ ಜಾಗ ಸ್ವಚ್ಛಗೊಳಿಸುವ ವಿಚಾರಕ್ಕೆ ಉಖ್ರುಲ್ ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ನಿಷೇಧಾಜ್ಞೆ ಹೇರಲಾಗಿದೆ.
ಎರಡೂ ಗುಂಪಿನಲ್ಲಿದ್ದವರು ನಾಗಾ ಸಮುದಾಯಕ್ಕೆ ಸೇರಿದವರಾಗಿದ್ದು, ಭೂಮಿ ಹಕ್ಕಿಗಾಗಿ ಘಟನೆ ನಡೆದಿದೆ. ಗುಂಡಿನ ಚಕಮಕಿಯಿಂದಾಗಿ ಕೆಲವರು ಗಾಯಗೊಂಡಿದ್ದಾರೆ. ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಖ್ರುಲ್ ಉಪ–ವಿಭಾಗೀಯ ಜಿಲ್ಲಾಧಿಕಾರಿ ಡಿ.ಕಮೈ ಅವರು ನಿಷೇಧಾಜ್ಞೆ ಜಾರಿಗೆ ಆದೇಶಿಸಿದ್ದಾರೆ.
'ಥವೈಜಾ ಹಂಗ್ಪುಂಗ್ ಯಂಗ್ ಸ್ಟೂಡೆಂಟ್ಸ್' (ಟಿಎಚ್ವೈಎಸ್ಒ) ಸಂಘಟನೆ ಆಯೋಜಿಸಿದ್ದ ಸಾಮಾಜಿಕ ಕಾರ್ಯಕ್ಕೆ ಹುನ್ಫುನ್ ಗ್ರಾಮಾಡಳಿತ ವಿರೋಧ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂಬುದಾಗಿ ಎಸ್ಪಿ ಅವರು ಪತ್ರದ ಮೂಲಕ ಮಾಹಿತಿ ನೀಡಿದ್ದರು ಎಂದು ಕಮೈ ತಿಳಿಸಿದ್ದಾರೆ.
ಹಂಗ್ಪುಂಗ್ ಮತ್ತು ಹುನ್ಫುನ್ ಗ್ರಾಮಗಳ ನಡುವಿನ ಭೂ ವಿವಾದವು ಕಾನೂನು, ಸುವ್ಯವಸ್ಥೆಗೆ ಹಾಗೂ ಹಳ್ಳಿಗಳ ಮಧ್ಯೆ ಶಾಂತಿ–ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳು ಜೀವ ಹಾಗೂ ಆಸ್ತಿ ನಷ್ಟಕ್ಕೂ ಕಾರಣವಾಗಬಹುದು. ಮುನ್ನೆಚ್ಚರಿಕೆಯಾಗಿ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಆದೇಶದವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ ಎಂದೂ ಹೇಳಿದ್ದಾರೆ.