ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯ್‌ಬರೇಲಿ– ವಯನಾಡು; ಯಾವ ಕ್ಷೇತ್ರದ ಸಂಸದನಾಗಬೇಕೆಂಬ ಗೊಂದಲವಿದೆ: ರಾಹುಲ್

Published 12 ಜೂನ್ 2024, 7:51 IST
Last Updated 12 ಜೂನ್ 2024, 7:51 IST
ಅಕ್ಷರ ಗಾತ್ರ

ಮಲಪ್ಪುರಂ: ರಾಯ್‌ ಬರೇಲಿ ಮತ್ತು ವಯನಾಡು ಎರಡು ಕ್ಷೇತ್ರಗಳಲ್ಲಿ ಯಾವ ಕ್ಷೇತ್ರ ಉಳಿಸಿಕೊಳ್ಳಬೇಕು ಎನ್ನುವ ಗೊಂದಲದಲ್ಲಿ ಸಿಲುಕಿದ್ದೇನೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ ಭಾರಿ ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು.

ಚುನಾವಣಾ ಗೆಲುವಿನ ಬಳಿಕ ಮೊದಲ ಬಾರಿಗೆ ಬುಧವಾರ ವಯನಾಡಿಗೆ ಆಗಮಿಸಿದ ಅವರು, ‘ಯಾವುದೇ ನಿರ್ಧಾರ ತೆಗೆದುಕೊಂಡರೂ ಎರಡೂ ಕ್ಷೇತ್ರದ ಜನರು ಸಂತೋಷ ಪಡುತ್ತಾರೆ. ಹೀಗಾಗಿ ಯಾವ ಕ್ಷೇತ್ರದ ಸಂಸದನಾಗಬೇಕು ಎನ್ನುವ ಸಂದಿಗ್ಥತೆಯಲ್ಲಿ ಸಿಲುಕಿದ್ದೇನೆ’ ಎಂದು ಸಾರ್ವಜನಿರನ್ನು ಉದ್ದೇಶಿಸಿ ಹೇಳಿದರು.

ಇದೇ ವೇಳೆ ಲೋಕಸಭೆಯಲ್ಲಿ ಎರಡನೇ ಬಾರಿಗೆ ಆಯ್ಕೆ ಮಾಡಿದ್ದಕ್ಕಾಗಿ ವಯನಾಡಿನ ಜನರಿಗೆ ಧನ್ಯವಾದಗಳು. ನಿಮ್ಮನ್ನು ಶೀಘ್ರದಲ್ಲೇ ನೋಡಲು ಎದುರು ನೋಡುತ್ತಿದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿದ ಅವರು, ‘ಪ್ರಧಾನಿಯವರಿಗೆ ಬಂದಂತೆ ನನಗೆ ಯಾವುದೇ ದೇವರಿಂದ ಮಾರ್ಗದರ್ಶನ ಬಂದಿಲ್ಲ. ಪ್ರಧಾನಿ ಮೋದಿಯವರಿಗೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್‌ ಸ್ಥಾವರಗಳನ್ನು ಅದಾನಿ ಕೈಗೊಪ್ಪಿಸುವಂತೆ ದೇವರು ಹೇಳಿದ್ದಾರೆ. ನಾನು ಸಾಮಾನ್ಯ ಮಾನವ. ದೇಶದ ಬಡ ಜನರೇ ನನ್ನ ದೇವರು. ಅವರೊಂದಿಗೆ ಮಾತನಾಡಿ ಅವರು ಏನು ಹೇಳುತ್ತಾರೋ ಅದೇ ನನ್ನ ನಿರ್ಧಾರವಾಗಿರುತ್ತದೆ’ ಎಂದು ಕುಟುಕಿದರು.

‘2024ರ ಲೋಕಸಭಾ ಚುನಾವಣೆಯು ಭಾರತದ ಸಂವಿಧಾನವನ್ನು ರಕ್ಷಿಸುವ ಹೋರಾಟವಾಗಿತ್ತು. ಆ ಹೋರಾಟದಲ್ಲಿ ದ್ವೇಷವನ್ನು ಪ್ರೀತಿ –ವಾತ್ಸಲ್ಯದಿಂದ ಹಾಗೂ ಅಹಂಕಾರವನ್ನು ವಿನಮ್ರತೆಯಿಂದ ಸೋಲಿಸಲಾಗಿದೆ. ಭಾರತದ ಜನರು ಅವರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿರುವುದರಿಂದ ಪ್ರಧಾನಿ ಮೋದಿ ಈಗ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT