ಕೋಲ್ಕತ್ತ: ಆರ್.ಜಿ. ಕರ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಆವರಣದಲ್ಲಿ ಬುಧವಾರ ‘ಬಂಗಾಳ ಜೂನಿಯರ್ ಡಾಕ್ಟರ್ಸ್ ಫ್ರೆಂಟ್’ ಬೃಹತ್ ರ್ಯಾಲಿಯನ್ನು ಆಯೋಜಿಸಿತ್ತು. ‘ನಮ್ಮ ಸಹೋದರಿ ‘ಅಭಯಾ’ಗೆ ನ್ಯಾಯ ದೊರಕುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಕಿರಿಯ ವೈದ್ಯರು ಘೋಷಿಸಿದರು.
ನಗರದ ಮಧ್ಯ ಭಾಗದಲ್ಲಿರುವ ಎಸ್ಪ್ಲನೇಡ್ನಿಂದ ರ್ಯಾಲಿಯು ಆರಂಭಗೊಂಡಿತ್ತು. ಈ ರ್ಯಾಲಿಯಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು. ಆರ್.ಜಿ. ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಕಿರಿಯ ವೈದ್ಯೆಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
‘ರಾಜ್ಯದ ವೈದ್ಯಕೀಯ ವ್ಯವಸ್ಥೆಯೊಳಗೆ ಮಡುಗಟ್ಟಿರುವ ಭಯ ಹಾಗೂ ಬೆದರಿಕೆ ಒಡ್ಡುವ ಶಕ್ತಿಯ ವಿರುದ್ಧವೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಪ್ರತಿಭನಕಾರರು ಹೇಳಿದರು.
ನವರಾತ್ರಿ ಆರಂಭವಾಗುತ್ತಿದೆ. ‘ಪೂಜೆ’ ಅಥವಾ ‘ಉತ್ಸವ’ ಆಚರಿಸುವ ಮನಃಸ್ಥಿತಿಯಲ್ಲಿ ನಾವಿಲ್ಲ. ನ್ಯಾಯಕ್ಕಾಗಿ ಬೀದಿಯಲ್ಲಿ ಹೋರಾಟ ಮಾಡುವುದನ್ನು ಮುಂದುವರಿಸುತ್ತೇವೆ. ನಮ್ಮ ಪ್ರತಿಭಟನೆಯ 52ನೇ ದಿನವಿದು. ಇವತ್ತಿಗೂ ನಮ್ಮ ಮೇಲೆ ದಾಳಿಗಳಾಗುತ್ತಿವೆ. ನಮ್ಮ ಸುರಕ್ಷತೆ, ಭದ್ರತೆ ಕುರಿತು ರಾಜ್ಯ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತ್ತಿಲ್ಲ’ ಎಂದು ಪ್ರತಿಭನನಿರತ ಕಿರಿಯ ವೈದ್ಯ ಅನಿಕೇತ್ ಮಹತೋ ಹೇಳಿದರು.