ಭುವನೇಶ್ವರ: ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುವ ಒಡಿಶಾ ಸರ್ಕಾರದ ‘ಸುಭದ್ರಾ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು.
ಈ ಯೋಜನೆಯ ಸೌಲಭ್ಯ ಒಡಿಶಾದ ಸುಮಾರು 1 ಕೋಟಿಗೂ ಹೆಚ್ಚು ಮಹಿಳೆಯರಿಗೆ ದೊರಕಲಿದೆ. ಈ ಯೊಜನೆಯಡಿ 21–60 ವರ್ಷ ಮಹಿಳೆಯರು ಐದು ವರ್ಷಗಳಲ್ಲಿ ₹ 50 ಸಾವಿರ ಪಡೆಯಲಿದ್ದಾರೆ. ಅಂದರೆ ಪ್ರತಿ ವರ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಎರಡು ಕಂತುಗಳಲ್ಲಿ ₹10 ಸಾವಿರ ಜಮಾ ಆಗಲಿದೆ.
ಇದೇ ವೇಳೆ ಮೋದಿ ₹2800 ಕೋಟಿಗೂ ಅಧಿಕ ವೆಚ್ಚದ ರೈಲ್ವೆ ಯೋಜನೆಗೆ ಹಾಗೂ ₹1 ಸಾವಿರ ಕೋಟಿಗೂ ಅಧಿಕ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಅಲ್ಲದೆ 14 ರಾಜ್ಯಗಳ 10 ಲಕ್ಷ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿದರು, ಈ ಯೊಜನೆ ಇನ್ನೂ ಹೆಚ್ಚಿನ ಕುಟುಂಬಗಳಿಗೆ ಪ್ರಯೋಜನಕಾರಿಯಾಗುವಂತೆ ಸರ್ವೆ ನಡೆಸಲು ‘ಆವಾಸ್ + 2024’ ಮೊಬೈಲ್ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಿದರು.