ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್ ಹೇಳಿಕೆಗೆ BJP ಆಕ್ಷೇಪ: ಕ್ಷಮೆಗೆ ಆಗ್ರಹ

Published 1 ಜುಲೈ 2024, 11:10 IST
Last Updated 1 ಜುಲೈ 2024, 11:10 IST
ಅಕ್ಷರ ಗಾತ್ರ

ನವದೆಹಲಿ: ‘ಹಿಂದೂಗಳೆಂದು ಹೇಳಿಕೊಳ್ಳುವವರು ಸದಾ ಹಿಂಸಾಚಾರ ಹಾಗೂ ದ್ವೇಷದಲ್ಲೇ ಮುಳುಗಿರುತ್ತಾರೆ’ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ಸಂಸದರು ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೂ ಸಮಾಜವದವರು ಹಿಂಸಾಪ್ರವೃತ್ತಿಯವರು ಎಂದಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯ ಕಲಾಪದಲ್ಲಿ ಸೋಮವಾರ ಮಾತನಾಡಿದ ರಾಹುಲ್ ಗಾಂಧಿ, ‘ಇಡೀ ಹಿಂದೂ ಸಮಾಜ ಎಂದರೆ ಭಾರತೀಯ ಜನತಾ ಪಾರ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ನರೇಂದ್ರ ಮೋದಿ ಮಾತ್ರವಲ್ಲ’ ಎಂದರು.

ಧೈರ್ಯ ಮತ್ತು ಅಹಿಂಸೆಯನ್ನು ಭಗವಾನ್ ಶಿವ ನಮಗೆ ಬೋಧಿಸಿದ್ದಾರೆ ಎಂದು ದೇವರ ಚಿತ್ರ ಪ್ರದರ್ಶಿಸಿದರು. ಇದೇ ಬೋಧನೆಯನ್ನು ಇತರ ಧರ್ಮಗಳಲ್ಲೂ ಹೇಳಲಾಗಿದೆ ಎಂದು ಉಲ್ಲೇಖಿಸಿದರು.

‘ಎಲ್ಲಾ ಧರ್ಮಗಳಿಗೆ ಸೇರಿದ ಸದಸ್ಯರು ಇರುವ ಸದನದಲ್ಲಿ ಆಡಳಿತಾರೂಢ ಬಿಜೆಪಿಯು ಕೇವಲ ಹಿಂದೂ ಧರ್ಮದವರನ್ನು ಪ್ರತಿನಿಧಿಸುವುದಾಗಿ ಹೇಳುವಂತಿಲ್ಲ’ ಎಂದರು.

ರಾಹುಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ರಾಹುಲ್ ಅವರ ಹೇಳಿಕೆಯು ಹಿಂದೂಗಳೆಂಬ ಹೆಮ್ಮೆ ಹೊಂದಿರುವ ದೇಶದ ಕೊಟ್ಯಂತರ ಜನರ ಭಾವನೆಗಳಿಗೆ ಘಾಸಿ ಮಾಡಿದೆ. 1984ರ ಸಿಖ್ ವಿರೋಧಿ ದಂಗೆಯ ಮೂಲಕ ಕಾಂಗ್ರೆಸ್ ಭಯೋತ್ಪಾದನೆಯನ್ನು ದೇಶದಲ್ಲಿ ಬಿತ್ತಿತ್ತು. ಹೀಗಾಗಿ ಅಹಿಂಸೆಯ ಕುರಿತು ಪಾಠ ಮಾಡುವ ಅಧಿಕಾರ ರಾಹುಲ್‌ಗೆ ಇಲ್ಲ’ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ರಾಹುಲ್ ಗಾಂಧಿ ಮಾತನಾಡುವ ಸಂದರ್ಭದಲ್ಲಿ ಶಿವನ ಚಿತ್ರ ತೋರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸದನದ ನಿಯಮದಂತೆ ಪೋಸ್ಟರ್‌ಗಳನ್ನು ತೋರಿಸುವಂತಿಲ್ಲ ಎಂದು ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT