ನವದೆಹಲಿ: ‘ರಾಷ್ಟ್ರದ ಉನ್ನತ ನಾಯಕತ್ವವನ್ನು ನಾವು ಯಾವಾಗ ಭೇಟಿಯಾಗಲು ಸಾಧ್ಯವೆಂದು ಅಧಿಕಾರಿಗಳು ತಿಳಿಸುವವರೆಗೂ ನಾನು ಮತ್ತು ನನ್ನ ಬೆಂಬಲಿಗರು ಲಡಾಖ್ ಭವನದಲ್ಲಿಯೇ ಇರುತ್ತೇವೆ’ ಎಂದು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಸೋಮವಾರ ತಿಳಿಸಿದ್ದಾರೆ.
‘ನಮ್ಮ ನಾಯಕರನ್ನು ನಾವು ಯಾವಾಗ ಭೇಟಿಯಾಗಬಹುದು ಎಂಬುದಕ್ಕೆ ಉತ್ತರ ಸಿಗುವವರೆಗೂ ನಾವು ಇಲ್ಲಿಯೇ ಇರಲಿದ್ದೇವೆ. ನಾವು 30ರಿಂದ 32 ದಿನಗಳು ನಡೆದು ಬಂದಿದ್ದೇವೆ. ನಮ್ಮ ನಾಯಕರ ಭೇಟಿಗೆ ನಾವು ಅರ್ಹರಿದ್ದೇವೆ’ ಎಂದು ವಾಂಗ್ಚುಕ್ ಸುದ್ದಿಸಂಸ್ಥೆಗೆ ತಿಳಿಸಿದರು.
‘ಲಡಾಖ್ ಅನ್ನು ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿರುವ ಪ್ರತಿಭಟನಕಾರರು ಅಸಾಮಾನ್ಯವಾದುದನ್ನು ಕೇಳುತ್ತಿಲ್ಲ. ಆಡಳಿತಾರೂಢ ಬಿಜೆಪಿಗೆ ತನ್ನ ಚುನಾವಣಾ ಭರವಸೆಯನ್ನು ನೆನಪಿಸಲು ಲಡಾಖ್ ಜನರು ಇಲ್ಲಿಗೆ ಬಂದಿದ್ದಾರೆ’ ಎಂದು ಅವರು ಹೇಳಿದರು.
ರಾಷ್ಟ್ರಪತಿ, ಪ್ರಧಾನಿ ಅಥವಾ ಗೃಹ ಸಚಿವರನ್ನು ಅಕ್ಟೋಬರ್ 4 ರಂದು ಭೇಟಿ ಮಾಡಲು ಸಮಯ ನೀಡದ ಕಾರಣ ವಾಂಗ್ಚುಕ್ ಮತ್ತು ಅವರ ಬೆಂಬಲಿಗರು ಭಾನುವಾರದಿಂದ ಲಡಾಖ್ ಭವನದಲ್ಲಿ ತಮ್ಮ ಅನಿರ್ದಿಷ್ಟ ಉಪವಾಸ ಪ್ರಾರಂಭಿಸಿದ್ದಾರೆ.