ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವ, ಸಂಚಾರಿ ನಿಯಮ ಪಾಲನೆ ಮಾಡದವರ ಚಾಲನಾ ಪರವಾನಗಿ ರದ್ದು ಮಾಡವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಆರೋಗ್ಯ ಇಲಾಖೆ, ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಧುನಿಕ ಜೀವ ರಕ್ಷಕ ಸವಲತ್ತುಗಳಿರುವ 65 ಆಂಬುಲೆನ್ಸ್ಗಳನ್ನು ಸಾರ್ವಜನಿಕ ಸೇವೆಗೆ ನೀಡಿದ ನಂತರ ಅವರು ಮಾತನಾಡಿದರು.
ಸಂಚಾರ ವ್ಯವಸ್ಥೆಗೆ ಕಟ್ಟುನಿಟ್ಟಿನ ನಿಯಮಗಳಿದ್ದರೂ, ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೆಲವರ ನಿರ್ಲಕ್ಷ್ಯದ ಫಲವಾಗಿ ತಪ್ಪು ಮಾಡದ ಹಲವರು ಜೀವ ಕಳೆದುಕೊಳ್ಳುವಂತಾಗಿದೆ. ಸಂಚಾರಿ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಬಹುತೇಕ ಅಪಘಾತಗಳನ್ನು ತಡೆಯಬಹುದು. ಕುಡಿದು, ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಾಲಾಯಿಸುವ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಬೀಳಬೇಕು. ಎಲ್ಲ ರೀತಿಯ ಅಪಘಾತ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ನೀಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ನಿಯಮ ಉಲ್ಲಂಘಿಸಿದವರ ಪರವಾನಗಿ ರದ್ದು ಮಾಡಬೇಕು ಎಂದರು.
ತುರ್ತು ಚಿಕಿತ್ಸೆಗೆ ನೆರವಾಗಲಿವೆ ಆಂಬುಲೆನ್ಸ್
ಅಪಘಾತಗಳು ಸಂಭವಿಸಿದಾಗ ‘ಗೋಲ್ಡನ್ ಅವರ್’ ಬಹಳ ಮುಖ್ಯ. ಅಪಘಾತವಾದ ಒಂದು ಗಂಟೆಯ ಒಳಗೆ ಅಗತ್ಯ ಚಿಕಿತ್ಸೆ ದೊರೆತರೆ ನೂರಾರು ಜನರ ಪ್ರಾಣ ಉಳಿಸಲು ಸಾಧ್ಯವಾಗುತ್ತದೆ. ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ, ಸಮೀಪದ ಆಸ್ಪತ್ರೆಗಳಿಗೆ ತ್ವರಿತವಾಗಿ ಕರೆದುಕೊಂಡು ಹೋಗಲು ಹೊಸ ಆಂಬುಲೆನ್ಸ್ಗಳು ನೆರವಾಗಲಿವೆ ಎಂದು ಹೇಳಿದರು.
ಸದ್ಯ 65 ಆಂಬುಲೆನ್ಸ್ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ಅಗತ್ಯವಿರುವಷ್ಟು ವಾಹನಗಳನ್ನು ನೀಡಲಾಗುವುದು ಎಂದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಉಪಸ್ಥಿತರಿದ್ದರು.