ಚಿತ್ರದುರ್ಗ: ಪೋಕ್ಸೊ ಪ್ರಕರಣ ಸಂಬಂಧ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧ ಪ್ರಮುಖ ಸಾಕ್ಷ್ಯಗಳ ವಿಚಾರಣೆ ಪ್ರಕ್ರಿಯೆ ಪೂರ್ಣಗೊಂಡದ್ದು, 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸಿವಿಲ್ ನ್ಯಾಯಾಲಯವು ಸ್ವಾಮೀಜಿ ಬಿಡುಗಡೆಗೆ ಸೋಮವಾರ ಆದೇಶಿಸಿತು.
ಪ್ರಕರಣ ಸಂಬಂಧ 2023ರ ನ.11ರಂದು ಹೈಕೋರ್ಟ್ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ನಂತರ ಸುಪ್ರೀಂಕೋರ್ಟ್ ಜಾಮೀನಿಗೆ ತಡೆ ನೀಡಿ ಸಾಕ್ಷ್ಯಗಳ ವಿಚಾರಣೆ ಮುಗಿಯುವವರೆಗೂ ಸ್ವಾಮೀಜಿಯನ್ನು ನ್ಯಾಯಂಗಬಂಧನದಲ್ಲಿ ಇರಿಸುವಂತೆ ಆದೇಶಿಸಿತ್ತು.
ವಿಚಾರಣೆಯನ್ನು 4 ತಿಂಗಳ ಒಳಗೆ ಪೂರ್ಣಗೊಳಿಸಿವಂತೆ ಸೂಚಿಸಿತ್ತು. ವಿಚಾರಣೆ ಮುಗಿದ ನಂತರ ಜಾಮೀನಿಗಿದ್ದ ತಡೆ ತೆರವುಗೊಳ್ಳಲಿದೆ ಎಂದು ಆದೇಶದಲ್ಲೇ ತಿಳಿಸಿತ್ತು.
'ಇಬ್ಬರು ಸಂತ್ರಸ್ರೆಯರು, 13 ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡಿದೆ. ಹೀಗಾಗಿ ಹೈಕೋರ್ಟ್ ಜಾಮೀನಿಗೆ ಸುಪ್ರೀಂಕೋರ್ಟ್ ನೀಡಿದ್ದ ತಡೆ ತೆರವುಗೊಂಡಿದೆ. ಹೈಕೋರ್ಟ್ ಜಾಮೀನು ಮುಂದುವರಿಯಲಿದ್ದು ಸ್ವಾಮೀಜಿಗಳ ಬಿಡುಗಡೆಗೆ 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಚನ್ನಬಸಪ್ಪ ಹಡಪದ ಆದೇಶಿಸಿದರು' ಎಂದು ಸ್ವಾಮೀಜಿ ಪರ ವಕೀಲ ವಿಶ್ವನಾಥಯ್ಯ ತಿಳಿಸಿದರು.