ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

56 ಲಕ್ಷ ಮಕ್ಕಳಿಗೆ ವಾರಕ್ಕೆ 6 ದಿನ ಮೊಟ್ಟೆ: ₹1500 ಕೋಟಿ ಕೊಟ್ಟ ಅಜೀಂ ಪ್ರೇಮ್‌ಜಿ

ಪೌಷ್ಟಿಕ ಆಹಾರಕ್ಕೆ ನೆರವಿನ ಪುಣ್ಯಕಾರ್ಯ–ಸಿಎಂ
Published 20 ಜುಲೈ 2024, 19:08 IST
Last Updated 20 ಜುಲೈ 2024, 19:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ 56 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ ಆರು ದಿನ ಬೇಯಿಸಿದ ಮೊಟ್ಟೆ ಸಿಗಲಿದೆ. ಸರ್ಕಾರ ಎರಡು ದಿನ ಪೂರೈಸಿದರೆ, ಉಳಿದ ನಾಲ್ಕು ದಿನ ಅಜೀಂ ಪ್ರೇಮ್‌ಜಿ ಫೌಂಡೇಷನ್ ನೀಡಲಿದೆ.

ಮೂರು ವರ್ಷಗಳ ಅವಧಿಗೆ ಮೊಟ್ಟೆ ಪೂರೈಸಲು ₹1,500 ಕೋಟಿ ನೆರವು ನೀಡುವ ಒಪ್ಪಂದಕ್ಕೆ ಶನಿವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು.

ಒಪ್ಪಂದದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾರದಲ್ಲಿ ಆರು ದಿನ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಚಾರಿತ್ರಿಕ ಪುಣ್ಯ ಕಾರ್ಯಕ್ಕೆ ಅಜೀಂ ಪ್ರೇಮ್‌ಜಿ ನೆರವಾಗುತ್ತಿರುವುದು ಇತರೆ ಎಲ್ಲ ಉದ್ಯಮಿಗಳಿಗೂ ಮಾದರಿ. ಬಡವರೇ ಅಧಿಕ ಸಂಖ್ಯೆಯಲ್ಲಿರುವ ಸರ್ಕಾರಿ ಶಾಲೆಗಳ ಮಕ್ಕಳು
ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಕಾರಣಕ್ಕೆ ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆ ನೀಡುವ ಕಾರ್ಯಕ್ರಮ ಆರಂಭಿಸಲಾಗಿತ್ತು. ವಾರಕ್ಕೆ ಒಂದು ದಿನ ಇದ್ದ ಮೊಟ್ಟೆಯನ್ನು ಎರಡು ದಿನಕ್ಕೆ ವಿಸ್ತರಿಸಲಾಗಿತ್ತು. ಈಗ ಒಂದರಿಂದ ಹತ್ತನೇ ತರಗತಿಯವರೆಗೆ ಎಲ್ಲ ಸರ್ಕಾರಿ, ಅನುದಾನಿತ ಶಾಲೆಯ ಮಕ್ಕಳಿಗೆ ವಾರದ ಆರು ದಿನವೂ ಮೊಟ್ಟೆ ನೀಡಲಾಗುವುದು ಎಂದರು.

ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣ, ಆರೋಗ್ಯ ದೊರಕಿಸಲು ರಾಜ್ಯ ಸರ್ಕಾರ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಹಿಂದೆ ಅಧಿಕಾರದಲ್ಲಿ ಇದ್ದಾಗ ಕ್ಷೀರಭಾಗ್ಯ ಯೋಜನೆ ಮೂಲಕ ಬೆಳಿಗ್ಗೆ ಮಕ್ಕಳಿಗೆ ಹಾಲು ನೀಡಲು ಆರಂಭಿಸಿದ್ದೆವು. ಈಗ ಹಾಲಿನ ಜೊತೆ ರಾಗಿ ಮಾಲ್ಟ್‌ ಸಹ ನೀಡಲಾಗುತ್ತಿದೆ ಎಂದು ಹೇಳಿದರು.

ಮಕ್ಕಳು ಜಾತಿಗಳ ಸಂಕೋಲೆಗೆ ಸಿಲುಕದೆ ವೈಚಾರಿಕ ಜ್ಞಾನ ಬೆಳೆಸಿ
ಕೊಳ್ಳುವುದೇ ನಿಜವಾದ ಶಿಕ್ಷಣ. ಮಕ್ಕಳು ಜಾತ್ಯತೀತವಾಗಿ ಬೆಳೆಯಲು ಅಗತ್ಯವಾದ ವಾತಾವರಣವನ್ನು ರಾಜ್ಯ ಸರ್ಕಾರ ಕಲ್ಪಿಸುತ್ತಿದೆ. ಇಂತಹ ಜ್ಞಾನ ವಿಕಸನ
ಗೊಳ್ಳಲು ಆರೋಗ್ಯವೂ ಮುಖ್ಯ. ಅದಕ್ಕಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ ಎಂದರು.

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜಿ, ಅವರ ಪತ್ನಿ ಯಾಸ್ಮಿನ್‌ ಪ್ರೇಮ್‌ಜಿ, ಮುಖ್ಯಮಂತ್ರಿ  ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್, ಆಯುಕ್ತೆ ಬಿ.ಬಿ. ಕಾವೇರಿ, ಗ್ಯಾರಂಟಿ ಅನು
ಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೂಜ್, ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಸಂಚಾಲಕ ಅನುರಾಗ್ ಬೆಹರ್‌, ಶಾಸಕ ರಿಜ್ವಾನ್‌ ಅರ್ಷದ್ ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ. ಸರ್ಕಾರಿ ಶಾಲೆಯನ್ನು ಬಲಗೊಳಿಸುವ ಮೂಲಕ  ಮಕ್ಕಳ ಸಂಖ್ಯೆಯನ್ನು 60 ಲಕ್ಷ ದಾಟಿಸುವ ಗುರಿ ಹೊಂದಲಾಗಿದೆ
–ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT