ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣ | ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅನಿವಾರ್ಯ: ವಿಜಯೇಂದ್ರ

ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ
Published : 4 ಸೆಪ್ಟೆಂಬರ್ 2024, 15:33 IST
Last Updated : 4 ಸೆಪ್ಟೆಂಬರ್ 2024, 15:33 IST
ಫಾಲೋ ಮಾಡಿ
Comments

ಬೆಂಗಳೂರು: ‘ಮುಡಾದಲ್ಲಿ ಹಗರಣ ನಡೆದಿರುವ ಕಾರಣಕ್ಕೇ ಹಿಂದಿನ ಆಯುಕ್ತರನ್ನು ಅಮಾನತುಗೊಳಿಸಲಾಗಿದೆ. ಮುಂದಿನ ಸರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು. ಹಗರಣದ ಸಂಬಂಧ ಅವರು ರಾಜೀನಾಮೆ ಕೊಡಲೇಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಕ್ಷದ ಕಚೇರಿಯಲ್ಲಿ ಬುಧವಾರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಮುಡಾದಲ್ಲಿ ಹಗರಣ ನಡೆದಿಲ್ಲ, ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈಗ ಪ್ರಕರಣ ಹೈಕೋರ್ಟ್‌ನಲ್ಲಿದೆ. ಮುಡಾದ ಹಿಂದಿನ ಆಯುಕ್ತರನ್ನು ಅಮಾನತು ಮಾಡಿದ್ದಾರೆ. ಹಗರಣವೇ ಆಗಿಲ್ಲದಿದ್ದರೆ ಅಮಾನತು ಮಾಡುತ್ತಿದ್ದರೆ? ಕಾದು ನೋಡಿ, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ’ ಎಂದು ಹೇಳಿದರು.

‘ವಾಲ್ಮೀಕಿ  ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಾಗ, ನಿಗಮದ ಅಧಿಕಾರಿ ಚಂದ್ರಶೇಖರನ್ ಅವರು ಆತ್ಯಹತ್ಯೆ ಮಾಡಿಕೊಂಡರು. ಆಗಲೂ ಯಾವುದೇ ಹಗರಣ ನಡೆದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದರು. ಆ ಬಳಿಕ ಅವರು ನಿಗಮದಲ್ಲಿ ₹87 ಕೋಟಿ ಹಗರಣ ಆಗಿದ್ದನ್ನು ಅವರು ವಿಧಾನಸಭೆಯ ಒಳಗೇ ಒಪ್ಪಿಕೊಂಡಿದ್ದರು’ ಎಂದು ವಿಜಯೇಂದ್ರ ತಿಳಿಸಿದರು.

ಮಹಾನ್‌ ನಾಯಕರು ಎಲ್ಲಿ ಹೋದರು ?

‘ಕಾಂಗ್ರೆಸ್‌ ಪಕ್ಷದ ಕೆಲವು ಮುಖಂಡರು ಛಲವಾದಿ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಲು ಹೋಗಿದ್ದರು. ಆಗ ನಿಮ್ಮ ಮಹಾನ್‌ ನಾಯಕರು ಎಲ್ಲಿದ್ದರು’ ಎಂದು ವಿಜಯೇಂದ್ರ ಪ್ರಶ್ನಿಸಿದರು.

‘ದೂರು ಕೊಡಲು ಡಿ.ಕೆ.ಶಿವಕುಮಾರ್‌ ಏಕೆ ಇರಲಿಲ್ಲ? ಮುಖ್ಯಮಂತ್ರಿಯವರು ಏಕೆ ಬರಲಿಲ್ಲ? ನಿಮ್ಮ ಸರ್ಕಾರದ ಇತರ ಹಿರಿಯ ನಾಯಕರು, ಪಕ್ಷದ ಹಿರಿಯ ನಾಯಕರು ರಾಜಭವನದಲ್ಲಿ ಏಕೆ ಕಾಣಿಸಿಕೊಳ್ಳಲಿಲ್ಲ? ಇದಕ್ಕೆ ಪ್ರಿಯಾಂಕ್‌ ಖರ್ಗೆ ಅವರು ಉತ್ತರಿಸಲಿ’ ಎಂದರು.

‘ಹಗರಣಗಳಲ್ಲಿ ಮುಳುಗಿದ ಸರ್ಕಾರ ಮತ್ತು ಕಾಂಗ್ರೆಸ್‌ ಪಕ್ಷ ತನ್ನನ್ನು ಕಾಪಾಡಿಕೊಳ್ಳಲು ಬಿಜೆಪಿ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದೆ. ಬಿಜೆಪಿ ಮುಖಂಡರ ಮೇಲೆ ಕೇಸುಗಳನ್ನು ದಾಖಲಿಸುವ ಪ್ರಯತ್ನದಲ್ಲಿದ್ದಾರೆ. ಇದ್ಯಾವುದಕ್ಕೂ ನಾವು ಅಂಜುವುದಿಲ್ಲ’ ಎಂದು ವಿಜಯೇಂದ್ರ ಹೇಳಿದರು.

‘ಪಕ್ಷದ ವತಿಯಿಂದ ಕಳೆದ ಬಾರಿ 1.04 ಕೋಟಿ ಸದಸ್ಯರ ನೋಂದಣಿ ಆಗಿತ್ತು. ಅದಕ್ಕಿಂತಲೂ ಹೆಚ್ಚು ಸದಸ್ಯತ್ವ ನೋಂದಣಿ ಮಾಡುವ ಸಂಕಲ್ಪ ನಮ್ಮದು. ರಾಜ್ಯದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿಯಾನ ನಡೆಯುತ್ತಿದೆ. ಪ್ರತಿ ಬೂತ್‌ನಲ್ಲಿ ಕನಿಷ್ಠ 300 ರಿಂದ 400 ಮಂದಿಯನ್ನು ಸದಸ್ಯರನ್ನಾಗಿ ನೋಂದಾಯಿಸುವ ಗುರಿ ಹೊಂದಲಾಗಿದೆ’ ಎಂದು ಅವರು ಹೇಳಿದರು.

ಅಮಿತ್‌ ಶಾ ಜತೆ ಚರ್ಚೆ

‘ಚನ್ನಪಟ್ಟಣ ಸಂಡೂರು ಮತ್ತು ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಭ್ಯರ್ಥಿಗಳ ಕುರಿತು ಇತ್ತೀಚೆಗೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್‌ಶಾ ಅವರ ಜತೆ ಚರ್ಚೆ ನಡೆಸಿದ್ದೇನೆ’ ಎಂದು ವಿಜಯೇಂದ್ರ ತಿಳಿಸಿದರು. ‘ಚನ್ನಪಟ್ಟಣದಿಂದ ಕಣಕ್ಕಿಳಿಯುವ ಬಗ್ಗೆ ಸಿ.ಪಿ.ಯೋಗೇಶ್ವರ್ ಅವರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಸಂಡೂರು ಮತ್ತು ಶಿಗ್ಗಾವಿಗೂ ಅನೇಕ ಆಕಾಂಕ್ಷಿಗಳು ಇದ್ದಾರೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆ ಮಾಡಿ ಅಭ್ಯರ್ಥಿಗಳ ಹೆಸರನ್ನು ದೆಹಲಿಗೆ ಕಳಿಸಿಕೊಡುತ್ತೇವೆ’ ಎಂದು ಹೇಳಿದರು.

‘ಚುನಾವಣೆ ಯಾವುದೇ ಸಂದರ್ಭದಲ್ಲಿ ಬರಬಹುದು’

‘ಸದಸ್ಯತ್ವದ ನೋಂದಣಿ ಕಾರ್ಯ ಹಬ್ಬದ ಮಾದರಿಯಲ್ಲಿ ನಡೆಯಲಿ. ರಾಜ್ಯದಲ್ಲಿ ನಾವು ಯಾವುದೇ ಸಂದರ್ಭದಲ್ಲೂ ಚುನಾವಣೆೆ ಎದುರಿಸುವ ಸ್ಥಿತಿ ಬರಬಹುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಪಕ್ಷವನ್ನು ಬಲಪಡಿಸಲು ಶ್ರಮಿಸೋಣ. ಬಿಜೆಪಿ ಶಕ್ತಿ ನಾಯಕರಲ್ಲ ಬಿಜೆಪಿ ಶಕ್ತಿ ಕಾರ್ಯಕರ್ತರ ರೂಪದಲ್ಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT