ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ರೈತರು ಬರುವರು ದಾರಿಬಿಡಿ!

ಕೃಷಿಭೂಮಿ ಬೀಳು ಬೀಳುತ್ತಿರುವ ಈ ದಿನಗಳಲ್ಲಿ ಮಹಿಳೆಯರ ಕೈಗೆ ಭೂಮಿಯನ್ನು ಕೊಡುವುದು ಅಗತ್ಯ

ಹಿಂದೆ 2012ರಲ್ಲಿ ಯಾತ್ರೆಯೊಂದು ಹೊರಟಿತ್ತು, ಗ್ವಾಲಿಯರ್‌ನಿಂದ ದೆಹಲಿಯತ್ತ. ‘ಭೂಹೀನರಿಗೆ ಉಳಲು ಭೂಮಿ ಕೊಡಿ. ಮನೆ ಇಲ್ಲದವರಿಗೆ ವಾಸಿಸಲು ಮನೆ ಕೊಡಿ’ ಎಂದು ಕಾಡಿನೊಳಗಿನ ಕೂಗನ್ನು ದೆಹಲಿಯಲ್ಲಿರುವ ಕೇಂದ್ರ ಸರ್ಕಾರಕ್ಕೆ ಮುಟ್ಟಿಸಲು ಹೊರಟಿತ್ತು ಜನಯಾತ್ರೆ. ದೆಹಲಿಯತ್ತ ಮುಖ ಮಾಡಿ ಹೊರಟಿದ್ದ ನರ್ಮದಾ ತೀರದದಟ್ಟ ಅರಣ್ಯಗಳ 50,000 ಆದಿವಾಸಿಗಳು ತಮ್ಮ ಬಿಲ್ಲು ಬಾಣ ಹತಾರಗಳೊಂದಿಗೆ ಬರಿಗಾಲಲ್ಲಿ, ಅರೆ ಮುಚ್ಚಿದ ಮೈಯಲ್ಲಿ ನಡೆದಿದ್ದರು. ದಾರಿಯಲ್ಲೇ ನಿಂತು ಕಲ್ಲು ಹೂಡಿಅಡುಗೆ ಮಾಡಿಕೊಂಡು, ದಾರಿಯಲ್ಲೇ ಮಲಗಿ ನಿದ್ದೆ ಕಳೆದು ಮತ್ತೆ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಬಲು ಶಿಸ್ತಿನಿಂದ ನಡೆದ ಚಿತ್ರಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ. ದೆಹಲಿಯಲ್ಲಿ ಇನ್ನೂ ಅರ್ಧ ಲಕ್ಷ ಜನರು ಅವರನ್ನು ಕೂಡಿಕೊಂಡು ಒಂದು ಲಕ್ಷ ಜನ ದೆಹಲಿಯ ಹಾದಿ ಬೀದಿಗಳಲ್ಲಿ ತುಂಬಲಿದ್ದರು.

‘ಕಾಡೋ– ನಾಡೋ ನೋಡದೆ ಉದ್ಯಮಿಗಳಿಗೆ ಬೇಕಾಬಿಟ್ಟಿ ಭೂಮಿಯನ್ನು ಬರೆದುಕೊಡುವ ಸರ್ಕಾರವು ವಂಶಪಾರಂಪರ್ಯವಾಗಿ ನೂರಾರು ವರ್ಷಗಳಿಂದ ಕಾಡಿನಲ್ಲೇ ವಾಸಿಸುತ್ತಿರುವ ಜನರಿಗೇಕೆ ಭೂಮಿಯ ಹಕ್ಕನ್ನು, ಅರಣ್ಯದ ಹಕ್ಕನ್ನು ಕೊಡುವುದಿಲ್ಲ’ ಎಂದು ಸರ್ಕಾರವನ್ನು ಕೇಳಲು ಹೊರಟಿತ್ತು ಈ ಜನ ಸತ್ಯಾಗ್ರಹದ ಯಾತ್ರೆ.

ಅಕ್ಟೋಬರ್ 2, ಮಹಾತ್ಮಾ ಗಾಂಧಿ ಜಯಂತಿಯಂದು ಹೊರಟು 8ರಂದು ಆಗ್ರಾದವರೆಗೆ ತಲುಪಿದ್ದ ‘ಜನಸತ್ಯಾಗ್ರಹ’ ಯಾತ್ರೆಯನ್ನು ಆಗ್ರಾದಲ್ಲಿ ತಡೆದು ನಿಲ್ಲಿಸಿದ್ದ ಅಂದಿನ ಅರಣ್ಯ ಸಚಿವ ಜೈರಾಂ ರಮೇಶ್‌ ಅವರು, ಜನಸತ್ಯಾಗ್ರಹಿಗಳ ಎಲ್ಲಾ ಹತ್ತು ಬೇಡಿಕೆಗಳಿಗೂ ಒಪ್ಪಿ ಸಹಿ ಹಾಕಿದ್ದರು. ಜನಸತ್ಯಾಗ್ರಹವು 10 ಅಂಶಗಳ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿತ್ತು. ಎಲ್ಲಕ್ಕೂ ಒಪ್ಪಿದ್ದ ಜೈರಾಂ ರಮೇಶ್‌ ಅವರು ತಕ್ಷಣದಿಂದಲೇ ಎಲ್ಲಾ ರಾಜ್ಯಗಳ ಸಚಿವರೊಂದಿಗೆ ಮಾತುಕತೆ ನಡೆಸಿ, ‘ಹಿಂದುಳಿದ ಜಿಲ್ಲೆಗಳಲ್ಲಿನ ಭೂರಹಿತರಿಗೆ ಕೃಷಿ ಭೂಮಿಯನ್ನು ಮತ್ತು ಸೂರಿಲ್ಲದ ಗ್ರಾಮೀಣ ಕುಟುಂಬಗಳಿಗೆ ತಲಾ 10 ಸೆಂಟ್‍ಗಳ ನಿವೇಶನ ಹಂಚುವ ಕಾರ್ಯ ದೇಶದಾದ್ಯಂತ ಆರಂಭವಾಗುತ್ತದೆ’ ಎಂದು ಮಾತುಕೊಟ್ಟಿದ್ದರು.

ಹಿಂದಿನಿಂದಲೂ ನಿಸರ್ಗದೊಂದಿಗೆ ಸಾಮರಸ್ಯದ ಒಡನಾಟ ಇಟ್ಟುಕೊಂಡು, ಭೂಮಿಗೆ ಗಾಯವಾಗದಂತೆ, ಕಾಡು ದೋಚದ ರೀತಿಯಲ್ಲಿ ಜನರು ಕೃಷಿಯನ್ನೂ ತಮ್ಮ ಜೀವನವನ್ನೂ ಮಾಡಿಕೊಂಡು ಬಂದಿದ್ದರು. ಆದರೆ ಬ್ರಿಟಿಷರು ಅರಣ್ಯವನ್ನು ಸರ್ಕಾರದ ಆಸ್ತಿಯನ್ನಾಗಿ ಮಾಡಿ, ಅರಣ್ಯವಾಸಿಗಳನ್ನು ಕಾಡುಗಳ್ಳರೆಂಬಂತೆ ನೋಡುತ್ತಿದ್ದುದನ್ನು ಸ್ವಾತಂತ್ರ್ಯಾನಂತರದ ಸರ್ಕಾರ ಕೂಡ ಮುಂದುವರಿಸಿಕೊಂಡು ಬಂದಿದ್ದು ಹೊಸ ವಿಷಯವಲ್ಲ. ಬ್ರಿಟಿಷರ ಕಾನೂನುಗಳು ನಮ್ಮ ಹಳ್ಳಿಗರನ್ನು, ಅರಣ್ಯ ಅವಲಂಬಿತ
ರನ್ನು ಅರಣ್ಯ ಸಂಪನ್ಮೂಲಗಳಿಂದ ದೂರ ಮಾಡಿತು. 1950ರ ಭೂಮಿ ಕಾನೂನು, ಅಣೆಕಟ್ಟು, ರಸ್ತೆ, ಸೇತುವೆ,ಸಾರ್ವಜನಿಕ ಉದ್ದಿಮೆಗಳಿಗೆ ಎಂದು ಸರ್ಕಾರಕ್ಕೆ ಭೂಮಿಯನ್ನು ಕಿತ್ತುಕೊಳ್ಳಲು ಅವಕಾಶ ಮಾಡಿಕೊಟ್ಟರೆ, 1990ರ ಮುಕ್ತ ಮಾರುಕಟ್ಟೆ ನೀತಿಯು ಭೂಮಿಯನ್ನಾಗಲಿ, ಅರಣ್ಯದ ಭಾಗವನ್ನಾಗಲಿ ಖಾಸಗಿ ಉದ್ದಿಮೆಗಳಿಗೆ ತೀರಾ ಸುಲಭವಾಗಿ ಕೊಡುತ್ತ ಸ್ಥಳೀಯರಿಗೇ ಅರಣ್ಯದ ಹಕ್ಕನ್ನು ನಿರಾಕರಿಸುತ್ತ ಬಂತು.

ನರ್ಮದಾ ನದಿಗೆ ಅಣೆಕಟ್ಟಾಗಿ, ಅಲ್ಲಿನ ಆದಿವಾಸಿ ಜನರಿಗೆ ಅರಣ್ಯದ ಹಕ್ಕನ್ನು ಪೂರ್ಣ ನಿರಾಕರಿಸಿದಾಗ ನೂರಾರು ಸಂಘಟನೆಗಳು ಒಟ್ಟಿಗೆ ಬಂದು ದೇಶದ ಉದ್ದಗಲಕ್ಕೂ ಭೂಮಿ, ನೀರು, ಅರಣ್ಯಗಳ ಮೇಲೆ ಜನರ ಅಧಿಕಾರ ಮೊದಲಿರಬೇಕು, ಉದ್ದಿಮೆಗಳದ್ದು ಆನಂತರದ್ದು ಎಂದು ಹೋರಾಟವನ್ನಾರಂಭಿಸಿದವು. 2007ರಲ್ಲಿ 25,000 ಜನರ ‘ಜನಾದೇಶ’ ಪಾದಯಾತ್ರೆ ‘ಜಲ್, ಜಮೀನ್, ಜಂಗಲ್ ನಮ್ಮ ಹಕ್ಕು, ನಮಗೆ ಕೊಡಿ’ ಎನ್ನುತ್ತ ದೆಹಲಿಸರ್ಕಾರವನ್ನು ಒತ್ತಾಯಿಸಿತು. ದೇಶದೆಲ್ಲೆಡೆಯ ಜನರ ಕೂಗಿನ ಪರಿಣಾಮವಾಗಿ ಅರಣ್ಯ ಹಕ್ಕು ಕಾಯ್ದೆ ಪಾಸಾಯಿತು. ಪಂಚಾಯತ್ ರಾಜ್, ಮಹಾತ್ಮಾ ಗಾಂಧಿ ರಾಷ್ಟ್ರೀಯಉದ್ಯೋಗ ಖಾತರಿ ಯೋಜನೆ, ಅರಣ್ಯದ ಹಕ್ಕು ಕಾನೂನು ಇವೆಲ್ಲವೂ ಗ್ರಾಮೀಣ, ಅರಣ್ಯವಾಸಿಗಳ ಸ್ಥಳೀಯ ಆಡಳಿತವನ್ನು ಕೇಂದ್ರವಾಗಿಟ್ಟುಕೊಳ್ಳುವ ಕಾನೂನುಗಳೇ ಆಗಿದ್ದರೂ ಕೂಡ, ಅಧಿಕಾರಶಾಹಿ ನೀತಿಯಲ್ಲಿ ಮೇಲಿನಿಂದ ಬಂದ ನಿಯಮಗಳೇ ಹೆಚ್ಚು ಪರಿಣಾಮಕಾರಿಯಾಗಿವೆಯೇ ಹೊರತು ಸ್ಥಳೀಯ ಜನರ ಆಡಳಿತವಲ್ಲ. ಒಂದೊಂದು ಕಾನೂನನ್ನು ಜಾರಿಗೆ ತರಲಿಕ್ಕೂ ಕರ್ನಾಟಕದ ಸಮೇತ ಎಲ್ಲೆಡೆ ಇನ್ನೂ ಹೋರಾಟಗಳು ನಡೆದೇ ಇವೆ.

2012ರಲ್ಲಿ ಆಗ್ರಾದಲ್ಲಿ ಜನಸತ್ಯಾಗ್ರಹ ಯಾತ್ರೆಗೆ ಕೊಟ್ಟ ವಚನವನ್ನು ಪರಿಶೀಲಿಸುತ್ತ, ಪಾಲಿಸುವ ದಿಸೆಯಲ್ಲಿ ಹೊರಟಿದ್ದ ಸರ್ಕಾರಕ್ಕೆ 2013ರ ಚುನಾವಣೆಯಲ್ಲಿ ಸೋಲಾಯಿತು. ಆರಿಸಿ ಬಂದ ಸರ್ಕಾರ ಇನ್ನೂ ಹೆಚ್ಚಿನ ಉದ್ಯಮ
ಸ್ನೇಹಿ. ಕೂಲಿ ಕಾರ್ಮಿಕರ, ಜನ ಸಾಮಾನ್ಯರ, ಬುಡಕಟ್ಟು ಜನರ ಭೂಮಿ– ವಸತಿಯಂಥ ತೀರಾ ಸಾಮಾನ್ಯ ಬೇಡಿಕೆಗಳನ್ನು ಇಲ್ಲಿ ಕೇಳುವವರಿಲ್ಲ. ಇರುವ ಸಾಮಾಜಿಕ ಸುರಕ್ಷತಾ ಕಾನೂನುಗಳನ್ನು ಸಡಿಲ ಮಾಡಿ, ಹೆಚ್ಚೆಚ್ಚು ಉದ್ದಿಮೆಗಳಿಗೆ ಬೆಂಬಲವಾಗಿ ನಿಂತಿದೆ. ಆದರೆ ‘ನಮಗೆ ವಚನ ಕೊಟ್ಟಿದ್ದು ನಮ್ಮ ಭಾರತ ಸರ್ಕಾರ. ಪಾಲಿಸಬೇಕಾಗಿದ್ದು ಭಾರತ ಸರ್ಕಾರ’ ಎನ್ನುತ್ತಾ ಬುಂದೇಲಖಂಡದ ಮಹಿಳಾ ರೈತರು, ದಲಿತರು, ಆದಿವಾಸಿಗಳು ಇದೇ ಆಗಸ್ಟ್ 16ರಂದು ದೇಶದ ಐದು ಭಾಗಗಳಿಂದ ಯಾತ್ರೆ ಆರಂಭಿಸಿದ್ದಾರೆ. ಕೇರಳದ ತಿರುವನಂತಪುರದಿಂದ ಹೊರಟಿರುವ ಮಹಿಳಾ ಭೂಮಿ ಸಂವಾದ ಯಾತ್ರೆಯು ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಒರಿಸ್ಸಾ,ಛತ್ತೀಸಗಡ, ಮಧ್ಯ ಪ್ರದೇಶ, ರಾಜಸ್ಥಾನಗಳಲ್ಲಿ ಹಾದು,ಸೆಪ್ಟೆಂಬರ್ 30ಕ್ಕೆ ಹರಿಯಾಣದ ಪಲವಾಲ್‍ ಅನ್ನು ತಲುಪುತ್ತದೆ. ಈ ಯಾತ್ರೆಯು ದಾರಿಯುದ್ದಕ್ಕೂ ಮಹಿಳೆಯರ ಭೂಮಿ ಹೋರಾಟಗಳನ್ನು ಸಂದರ್ಶಿಸಿ, ಅವರೊಂದಿಗೆ ಸಂವಾದ ನಡೆಸಿ ಅವರ ಅನುಭವಗಳನ್ನು ದಾಖಲಿಸಿಕೊಳ್ಳುತ್ತ ಪಲವಾಲ್‍ನಲ್ಲಿ ದೇಶದ ಇತರೆಡೆಗಳಿಂದ ಬಂದ ಯಾತ್ರಿಕರನ್ನು ಕೂಡಿಕೊಳ್ಳಲಿದೆ. ಅಲ್ಲಿಂದ ಮುಂದೆ ಅದು ಜನಾಂದೋಲನವಾಗಿ ಅಕ್ಟೋಬರ್ ಎರಡರಂದು ದಿಲ್ಲಿ ಪ್ರವೇಶಿಸಲಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಭೂಮಿಯನ್ನು ಖಾಸಗಿ ಆಸ್ತಿಯಾಗಿ ಪರಿಗಣಿಸಿದ ಸರ್ಕಾರವು ಪೀಳಿಗೆಯಿಂದ ಪೀಳಿಗೆಗೆ ಭೂಮಿಯನ್ನು ದಾಟಿಸಲು ಕಾನೂನು ಮಾಡಿದಾಗ ಮಹಿಳೆಯರನ್ನು ಅಲ್ಲಿಯೇ ಬಿಟ್ಟಿತು. ಯಾವೊಬ್ಬ ಮಹಿಳೆಯೂ ತಾಯಿ ತಂದೆಯ ಅಥವಾ ಗಂಡನ ಆಸ್ತಿಯಲ್ಲಿ ಹಕ್ಕುದಾರಳಾಗಿ ಉಳಿಯಲಿಲ್ಲ. ಅಂದಿನ ಲಿಂಗ ತಾರತಮ್ಯವು ಭೂ ದಾಖಲೆಗಳಲ್ಲಿ ಅವಳ ಹೆಸರು ನೋಂದಣಿ ಆಗದಂತೆ ತಡೆಯಿತು, ಮುಂದೆ ಅವಳ ಹೆಸರಿಗೆ ಆಸ್ತಿ ಇಲ್ಲದ ಕಾರಣಕ್ಕಾಗಿಯೇ ಭೂಮಿ ಮತ್ತು ಆಸ್ತಿ ಬಗೆಗಿನ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ಅವಳನ್ನು ಬದಿಗೆ ಸರಿಸುತ್ತ ಬಂತು. ಇದು ಲಿಂಗ ತಾರತಮ್ಯದ ಕಂದರವನ್ನು ಇನ್ನಷ್ಟು ಅಗಲ ಮಾಡುತ್ತ ಹೋಯಿತು.

2005ನೇ ಇಸವಿಯ ಆಸ್ತಿ ಹಕ್ಕು ಕಾಯ್ದೆಯಲ್ಲಿ ತಾಯಿ ತಂದೆಯರ ಆಸ್ತಿಯಲ್ಲಿ ಮಗ ಮತ್ತು ಮಗಳು ಇಬ್ಬರಿಗೂ ಸಮನಾದ ಪಾಲು ಎಂದು ಹೇಳಲಾಯಿತಾದಾರೂ, ಅದೊಂದು ಮನೆ ಮುರಿಯುವ ಕಾಯ್ದೆ ಎಂದು ಪುರುಷ ಪ್ರಧಾನ ಸಮಾಜ ಅದನ್ನು ಬಣ್ಣಿಸಿತೇ ಹೊರತು ಮನೆಯ ಮಗಳಿಗೆ ಪಾಲು ಕೊಡುವುದನ್ನು ಸಕಾರಾತ್ಮಕವಾಗಿ ಸ್ವೀಕರಿಸಲಿಲ್ಲ. ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವ ಸಂಪ್ರದಾಯದ ಕಾರಣದಿಂದಾಗಿ ಆ ಕಾನೂನು ಸರಿಯಾಗಿ ಜಾರಿಯಲ್ಲಿ ಬರುತ್ತಲೇ ಇಲ್ಲ. ವರದಕ್ಷಿಣೆ ಪದ್ಧತಿಯನ್ನು ತೊಡೆದು ಹಾಕಬೇಕಾಗಿದ್ದ ಕಾನೂನು ವರದಕ್ಷಿಣೆ ಪದ್ಧತಿಯಿಂದಾಗಿಯೇ ಸೋತು ಹೋಗಿದೆ.

ಆಸ್ತಿಯಲ್ಲಿ ಗಂಡನ ಹೆಸರಿನೊಂದಿಗೆ ಹೆಂಡತಿಯ ಹೆಸರೂ ಸೇರಿಕೊಳ್ಳಬೇಕು. ಇದು ಆಗದ ಹೊರತು ಮದುವೆಯಾಗಿ ಆ ಮನೆಯ ಸೊಸೆಯಾಗಿ ತಲೆ ತಗ್ಗಿಸಿ ಬರುವ ಹೆಣ್ಣು, ಕಡೆಯ ತನಕ ತಲೆ ತಗ್ಗಿಸಿಯೇ ನಡೆದುಕೊಳ್ಳುತ್ತಿರಬೇಕಾಗುತ್ತದೆ. ಮನೆಯ ಆದಾಯ, ಖರ್ಚಿನ ಬಗ್ಗೆ ಸೊಲ್ಲೆತ್ತಿದರೆ ಗದರಲಾಗುತ್ತದೆ. ಪೆಟ್ಟು ತಿನ್ನಬೇಕಾಗುತ್ತದೆ. ಮನೆಯಲ್ಲಿ ಯಾವುದೇ ರೀತಿಯ ದೌರ್ಜನ್ಯ, ಹಿಂಸೆಯಾದಾಗ ಅವಳುಹೊರ ಜಗತ್ತನ್ನು ಸಂಪರ್ಕಿಸಿದರೆ, ಕೋರ್ಟಿನ ಮೆಟ್ಟಿಲೇ
ನಾದರೂ ಹತ್ತಿದರೆ ಮನೆಯ ಹೆಸರನ್ನು ಕೆಡಿಸಿದವಳು ಎಂಬ ಅಪವಾದವನ್ನು ಹೊರಬೇಕಾಗುತ್ತದೆ.

ಇಂದು ಗಂಡಸರು ಕೆಲಸಕ್ಕಾಗಿಯೋ ಕೂಲಿ ಅರಸಿಯೋ ಶಹರಗಳಿಗೆ ವಲಸೆ ಹೋಗಿಬಿಡುತ್ತಾರೆ. ಭೂಮಿ ಇರುವವರು ಕೂಡ ಭೂಮಿ ಬಿಟ್ಟು ಹೋಗುತ್ತಿದ್ದಾರೆ. ಹಳ್ಳಿಯಲ್ಲಿ ಉಳಿಯುವವಳು ಹೆಂಡತಿ. ಆದರೆ ಆಸ್ತಿಯ ಹಕ್ಕಿಲ್ಲದೆಯೇ, ತನ್ನ ಭೂಮಿಯ ಬಗ್ಗೆ ಏನೂ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಆಕೆಗಿರುವುದಿಲ್ಲ. ಸರ್ಕಾರದ ಇಲಾಖೆಯಿಂದ ಸಹಾಯ ಪಡೆದು ಕೃಷಿ ಮುಂದುವರಿಸುವ ಅವಕಾಶವೇ ಆಕೆಗಿಲ್ಲ. ಸರ್ಕಾರ ಯಾವುದೋ ಅಭಿವೃದ್ಧಿ ಕೆಲಸಕ್ಕಾಗಿ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಗಂಡಸರು ಸುಲಭವಾಗಿ ಬಿಟ್ಟುಕೊಡಬಹುದು. ಆದರೆ ಹೆಣ್ಮಗಳ ಹೆಸರಲ್ಲಿ ಭೂಮಿ ಇದ್ದಿದ್ದರೆ ಅವಳು ತನ್ನ ಆಸ್ತಿಯನ್ನು ಬಿಟ್ಟುಕೊಡುವ ಸಾಧ್ಯತೆ ಖಂಡಿತ ಕಡಿಮೆಯಿರುತ್ತದೆ. ದೊಡ್ಡ ರೈತರ ಮಕ್ಕಳೆಲ್ಲ ಶಿಕ್ಷಣ ಪಡೆದು ಶಹರ ಸೇರಿದ ಕಾರಣಕ್ಕಾಗಿ ಬಹುಪಾಲು ಕೃಷಿ ಭೂಮಿ ಬೀಳು ಬೀಳುತ್ತಿರುವ ಈ ದಿನಗಳಲ್ಲಂತೂ ಮಹಿಳೆಯರ ಕೈಯಲ್ಲಿ ಭೂಮಿಯನ್ನು ಕೊಡಬೇಕಾಗಿರುವುದು ಅತ್ಯವಶ್ಯವಾಗಿದೆ.

2010ರಲ್ಲಿಯೇ ಮಹಿಳೆಯರಿಗೆ ಭೂಮಿಯ ಹಕ್ಕನ್ನು ಕೊಡಬೇಕೆಂಬ ವಿಚಾರವಾಗಿ ಮಾಡಿದ್ದ ಮಸೂದೆಯನ್ನು ಡಾ. ಸ್ವಾಮಿನಾಥನ್ ಅವರು ಲೋಕಸಭೆಯಲ್ಲಿ ಮಂಡಿಸಿದ್ದರು. ಆದರೆ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನ ಬೇಕು ಎನ್ನುವ ವಿಷಯ ಮೂಲೆಗುಂಪಾಗಿರುವಂತೆಯೇ ಮಹಿಳೆಯರಿಗೆ ಭೂಮಿ ಹಕ್ಕಿನ ಮಸೂದೆಯು ಕೂಡ ಮೂಲೆಗುಂಪಾಗಿದೆ. ಆ ಮಸೂದೆಗೆ ಮತ್ತೆ ಧ್ವನಿಕೊಡಬೇಕು. ಅದರ ಕುರಿತು ಲೋಕಸಭೆಯಲ್ಲಿ ಚರ್ಚೆಯಾಗ
ಬೇಕು, ಕಾನೂನು ಆಗಬೇಕು ಎಂದು ಬೇಡಿಕೆ ಇಟ್ಟು `ಮಹಿಳಾ ಭೂಮಿ ಸಂವಾದ ಯಾತ್ರೆ’ಯು ಹೊರಟಿದೆ.

ಹಳೆಯ ನೆನಪೊಂದು ಲೇಖನದ ಮಧ್ಯೆ ನುಗ್ಗಿ ಬರುತ್ತಿದೆ. ಉತ್ತರ ಕನ್ನಡದ ಕಾಡುಗಳಲ್ಲಿ ಸಿಗುವ ಉಪ್ಪಾಗೆಯನ್ನು ಆರಿಸಲು ದಟ್ಟ ಕಾಡಿನೊಳಗೆ ಬಿರು ಮಳೆಗಾಲದಲ್ಲಿ ಆಯಿ ಮತ್ತು ಅವಳ ಸಖಿಯರು ಹೊರಡುತ್ತಿದ್ದರು. ಜೋರು ಮಳೆ, ಜಾರು ಹಾದಿ, ನೆತ್ತರು ಹೀರುವ ಉಂಬಳಗಳಿದ್ದರೂ ಅದೊಂದೇ ಸಮಯದಲ್ಲಿ ಸಿಗುವ ಉಪ್ಪಾಗೆ ಬೀಜ ಆರಿಸಲು ಈ ಮಹಿಳೆಯರ ಹಿಂಡು ಹೋಗುತ್ತಿತ್ತು. ಜಾಗತೀಕರಣದಿಂದಾಗಿ ರಸ್ತೆಗಳು ಅಗಲವಾಗಿ, ರಸ್ತೆ ಪಕ್ಕ ಢಾಬಾಗಳು ಹೆಚ್ಚಾಗಿ ಮಾಂಸದೂಟದ ಮಸಾಲೆಗೆ ಈ ಉಪ್ಪಾಗೆ ಹಣ್ಣಿನ ಬೇಡಿಕೆ ಹೆಚ್ಚಾದಾಗ ಹಣ್ಣಿಗಾಗಿ ಮರ ಮರಗಳನ್ನೇ ಕತ್ತರಿಸಿ ಹಾಕಿದರು ಲಾಭ ಬುಡುಕರು. ಹಣ್ಣಿಗಾಗಿ ಇಡೀ ಗಿಡವನ್ನೇ ಕತ್ತರಿಸಿ ಹಾಕುವ ಹೊರಗಿನ ಆಶೆಬುರುಕರಿಂದಾಗಿ ಸ್ಥಳೀಯ ಮಹಿಳೆಯರಿಗೆ ಉಪ್ಪಾಗೆ ಒಂದು ಕನಸು ಮಾತ್ರವಾಯಿತು. ಕೇರಳ, ಕೊಡಗಿನ ನೆರೆಯ ದುರಂತದ ಮಧ್ಯೆ ಮತ್ತೆ ಮತ್ತೆ ಇದು ನೆನಪಿಗೆ ಬರುತ್ತದೆ. ಅದು ನೈಸರ್ಗಿಕ ದುರಂತವಲ್ಲ, ಮತ್ತೆ ಮತ್ತೆ ಎಚ್ಚರಿಸುತ್ತಿದ್ದರೂ ನೆಲದ ಹಿತವನ್ನು ಗಣನೆಗೆ ತೆಗೆದುಕೊಳ್ಳದೆ ಗುಡ್ಡಗಳನ್ನು ಕತ್ತರಿಸಿ ಕತ್ತರಿಸಿ ಹಾಕಿದ ಮಾನವ ಮಾಡಿದ ದುರಂತ. ಭೂಮಿಗೆ, ನೀರಿಗೆ, ಪ್ರಕೃತಿ, ಕಾಡಿಗೆ ಈ ತೆರನ ಜೆಸಿಬಿ ಹೊಡೆತವನ್ನು ತಪ್ಪಿಸಬೇಕಾಗಿದೆ. ಆರೈಸುವ, ಪ್ರೀತಿಸುವ, ಅರ್ಥ ಮಾಡಿಕೊಳ್ಳುವ ಕೈಗಳು ಬೇಕಾಗಿವೆ. ಇನ್ನೂ ಭ್ರಷ್ಟರಾಗದ ಗ್ರಾಮೀಣ ಬುಡಕಟ್ಟು ಮಹಿಳಾ ಸಮುದಾಯ ಮಾತ್ರ ಆ ಆರೈಕೆಯನ್ನು ಕೊಡಬಲ್ಲದು. ಪ್ರಕೃತಿಯೂ ಕೂಡ ‘ಮಹಿಳಾ ಭೂಮಿ ಸಂವಾದ ಯಾತ್ರೆ’ಯೊಂದಿಗೆ ತನ್ನ ದನಿಗೂಡಿಸಿದೆ. ‘ವಿನಾಶದತ್ತ ಸಾಗುತ್ತಿದ್ದೀರಿ, ಅಭಿವೃದ್ಧಿಯ ದಿಕ್ಕನ್ನು ಬದಲಾಯಿಸಿ...’ ಎಂದು ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT