ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಎಲ್ಲೋ ಕಳೆದೋಗ್ಯದೆ!

Published : 23 ಸೆಪ್ಟೆಂಬರ್ 2024, 20:07 IST
Last Updated : 23 ಸೆಪ್ಟೆಂಬರ್ 2024, 20:07 IST
ಫಾಲೋ ಮಾಡಿ
Comments

ಮೊನ್ನೆ ನಾಗರಹೊಳೆಗೆ ಹೋಗಿದ್ದೋ. ಕಾಡು ಕಂಡೇಟಿಗೆ ಯಂಟಪ್ಪಣ್ಣ ರಾಂಗಾಗಿ ‘ಇಲ್ಲೇ ಇತ್ತು, ಎಲ್ಲೋ ಕಳೆದೋಗ್ಯದೆ. ಸರ್ವೇ ನಂಬರದೆ ಕಾಡಿಲ್ಲ. ಪಾರೆಸ್ಟು ಇಲಾಖೆ ನಲವತ್ತಮೂರು ಸಾವಿರ ಎಕರೆ ಜಾಗನೇ ಕಳೆದಾಕ್ಯದೆ’ ಅಂತ ಹಲುಬಕ್ಕೆ ಶುರುವಾತು.

‘ಎಲ್ಲೋ ಅಡ ಇಕ್ಕಿರತರೆ ಕಾ ಬುಡಣೈ’ ಅಂದ್ರೂ ಕೇಳ್ತಿಲ್ಲ. ನೆನ್ನೆ ಬಿಬಿಎಂಪಿ ಆಪೀಸಿನ ತಾವು ನಡಕೋಯ್ತಿದ್ದೋ. ‘ನಾನು ಕಂಡಂಗೆ ನೆನ್ನೆ ಪಾಲಿಕೆ ಇಲ್ಲೇ ಇತ್ತಲ್ಲ. ಎಲ್ಲೋತು? ಮಾರಿ ಮಸಾಲೆದೋಸೆ ತಿನ್ಕಂಡ್ರಾ, ಯಂಗೆ?’ ಯಂಟಪ್ಪಣ್ಣ ಹುಡುಕತೊಡಗಿತು.

ಸಂದೆಗೆ ಕೆಪಿಎಸ್‍ಸಿ ತಾವು ಓಡಾಡ್ತಿದ್ದೋ. ‘ಅಲ್ಲ ಕಣಿರ್‍ಲಾ, ಇಲ್ಲೊಂದು ಲೋಪಶೇವಾ ಆಯೋಗದ ಆಪೀಸಿತ್ತಲ್ಲ ಎಲ್ರೋ? ಓದಿರ ಹುಡ್ಲಿಗೆ ಕೆಲಸ ಕೊಡಕ್ಕಾಯ್ತಿಲ್ಲ ಅಂತ ಆಪೀಸೇ ಮಾರಿಕ್ಯಂದ್ರಾ? ವಿಧಾನಸೌಧ ಅಂತ ಇತ್ತಲ್ಲ ಎಲ್ಲೋತು? ಸತ್ಯ, ನ್ಯಾಯ, ನೀತಿ, ಧರ್ಮ ಒಂದೂ ಕಾಣ್ತಿಲ್ಲವಲ್ರೋ?’ ಯಂಟಪ್ಪಣ್ಣನಿಗೆ ಯಂಗೆ ಉತ್ತರ ಹೇಳದು ಅಂತ್ಲೇ ಗೊತ್ತಾಗ್ನಿಲ್ಲ.

ಕೆಆರೆಸ್ ನೋಡುಮಾ ಅಂತ ಹೋಗಿದ್ದೋ. ‘ಸದ್ಯ ಮಾರಾಜ್ರು ಕಟ್ಟಿದ್ದು ಅಂತ ಇದುನ್ನಾದ್ರೂ ಬುಟ್ಟವ್ರಲ್ಲ. ಇಲ್ಲಿ ಕಾವೇರಿ ಆರತಿ ಅಂತ ಮಾಡಾರಂತೆ. ನಾನೆ ಆರತಿ ಪದ ಬರೀತೀನಿ. ‘ಕಲ್ಲು ಕದ್ದವಗೆ ಎಲ್ಲ ಭಾಗ್ಯವು ಬರಲಿ, ಲಾಂಗು ಹಿಡಿದೋನು ಚೆಂದಾಗಿ ಮೆರೆಯಲಿ, ತಲೆ ಹೊಡೆವೋನು ಮುಂದಾಕೆ ಬರಲಿ. ಎತ್ತೀರೆ ಮಂಗಳಾರತಿಯಾ ನಮ್ಮನಾಳೋ ಶೂರರಿಗೆ!’ ಯಂಟಪ್ಪಣ್ಣ ಹಾಡತೊಡಗಿತು.

‘ಬನ್ನಿ ಯಂಟಪ್ಪಣ್ಣ ಒಂದು ಸಿನೆಮಾನಾದ್ರೂ ನೋಡಿ ಬರಮು, ಸಮಾಧಾನಾಯ್ತದೆ’ ಅಂತಂದೆ.

‘ಯಪ್ಪ ನಾನೊಲ್ಲೆ. ಚಂದನವನಕ್ಕೆ ಫೈರು, ಫೈರು, ಬೆಂಕಿ ಬಿದ್ದದಂತೆ ಕಲಾ’ ಅಂತ ಯಂಟಪ್ಪಣ್ಣ ಗಾಬರಿಯಾತು.

‘ಇದ್ದುದ್ದೆಲ್ಲಾ ಇಲ್ಲ ಅಂತ ರೋಸ್ತಾವ್ರಲ್ಲ ಇವರಿಗೇನಾಗ್ಯದೆ?’ ತುರೇಮಣೆಗೆ ಕೇಳಿದೆ.

‘ಪ್ರಜಾಪ್ರಭುತ್ವಕ್ಕೆ ಮೆಟ್ಟಿಕ್ಯಂಡಿರೋ ಕುತಂತ್ರ
ಪಿಶಾಚಿ ರಾಜಕಾರಣಿಗಳು ಸತ್ಪ್ರಜೆಗಳಿಗೆ ಕಂಡಿದ್ದು ಕಾಣದಂಗೆ ಹಾಕಿರೋ ಮಾಯಾಗುನ್ನಡಕದ ದೆಸೆಯಿಂದ ಯಂಟಪ್ಪಣ್ಣ ಹಿಂಗಾಡತಾ ಅದೆ’ ಅಂತ ತುರೇಮಣೆ ಅಭಿಮತ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT