ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಪುಸ್ತಕೋದ್ಯಮಕ್ಕೆ ಬೇಕು ಕಾಯಕಲ್ಪ

Published : 17 ಸೆಪ್ಟೆಂಬರ್ 2024, 0:27 IST
Last Updated : 17 ಸೆಪ್ಟೆಂಬರ್ 2024, 0:27 IST
ಫಾಲೋ ಮಾಡಿ
Comments

ಸರ್ಕಾರವು ಗ್ರಂಥಾಲಯ ಸಮಿತಿಯ ಮೂಲಕ ಪ್ರಕಾಶಕರಿಂದ ಪುಸ್ತಕದ ಪ್ರತಿಗಳನ್ನು ಕೊಂಡುಕೊಳ್ಳಲು ತಡಮಾಡುತ್ತಿರುವುದು ಪುಸ್ತಕೋದ್ಯಮದ ಒಂದು ಪ್ರಮುಖ ಸಮಸ್ಯೆಯಾಗಿದೆ. ಆಯಾ ವರ್ಷ ಪ್ರಕಟವಾದ ಕೃತಿಗಳನ್ನು ಆಯಾ ವರ್ಷವೇ ಕೊಂಡುಕೊಂಡು ಅವನ್ನು ಜಿಲ್ಲಾ ಗ್ರಂಥಾಲಯಗಳಿಗೆ ಕಳುಹಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಆದರೆ ಈಗ ಹಾಗಾಗುತ್ತಿಲ್ಲ. ಪ್ರಕಾಶಕರು ಪುಸ್ತಕ ಖರೀದಿ ಯೋಜನೆಗೆ ಮೂರ್ನಾಲ್ಕು ವರ್ಷ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ಪುಸ್ತಕ ಪ್ರಕಟಣೆಗೆ ಅವರು ಹೆಚ್ಚು ಆಸಕ್ತಿ ತೋರುವುದಿಲ್ಲ. ಹಾಗಾಗಿ, ಕೃತಿಗಳು ಪ್ರಕಟವಾಗದೇ ಉಳಿಯುತ್ತವೆ. ಇದು, ಒಳ್ಳೆಯ ಪುಸ್ತಕಗಳು ಮಾರುಕಟ್ಟೆಗೆ ಬಾರದೇ ಹೋಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಎಷ್ಟೋ ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಜಿಲ್ಲಾ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಓದಿ ಅಧ್ಯಯನ ಮುಂದುವರಿಸುತ್ತಾರೆ. ಪುಸ್ತಕ ಎಂಬುದು ರಾಜ್ಯದ ಸಾಂಸ್ಕೃತಿಕ ಆಸ್ತಿ. ಪ್ಲೇಟೊ, ಗಾಂಧೀಜಿಯಂತಹವರು ನಮಗೆ ಅರ್ಥವಾದದ್ದು ಪುಸ್ತಕಗಳ ಮೂಲಕ. ಎಷ್ಟೋ ಪುಸ್ತಕಗಳು ನಮಗೆ ಸಿಗುವುದು ಸಾರ್ವಜನಿಕ ಗ್ರಂಥಾಲಯಗಳಲ್ಲಿ. ಎಲ್ಲರೂ ವೈಯಕ್ತಿಕವಾಗಿ ಪುಸ್ತಕಗಳನ್ನು ಸಂಗ್ರಹಿಸುವುದು ಕಷ್ಟದ ಕೆಲಸ. ಈಗ ಗ್ರಂಥಗಳನ್ನು ಸರ್ಕಾರ ಖರೀದಿ ಮಾಡದೇ ಹೋದರೆ ಪುಸ್ತಕಗಳನ್ನು ಅವಲಂಬಿಸಿದವರ ಕತೆ ಏನು ಎಂಬುದನ್ನು ಯೋಚನೆ ಮಾಡಬೇಕು.

ಓದಲೇಬೇಕಾದ ಅನೇಕ ಹಳೆಯ ಪುಸ್ತಕಗಳನ್ನು ನಮಗೆ ಒದಗಿಸುವುದು ಸಾರ್ವಜನಿಕ ಗ್ರಂಥಾಲಯ ಗಳು. ಹೀಗಾಗಿ, ಪುಸ್ತಕಗಳ ಖರೀದಿ ಕಾರ್ಯದಲ್ಲಿ ವಿಳಂಬ ಧೋರಣೆ ಅನುಸರಿಸುವ ಮೂಲಕ ಜ್ಞಾನ ವನ್ನು ಕೊಲ್ಲಲು ಮುಂದಾಗಬೇಡಿ ಎಂದು ಸರ್ಕಾರಕ್ಕೆ ಹೇಳಲೇಬೇಕಾಗಿದೆ. ರಾಜ್ಯದಲ್ಲಿ ಇಂಥ ಪರಿಸ್ಥಿತಿ ಬರಬಾರದು. ಇದರಲ್ಲಿ ಪ್ರಮುಖವಾಗಿ ಮೂರು ಸಮಸ್ಯೆಗಳಿವೆ. ಮೊದಲನೆಯದು, ಲೇಖಕರ ಸಮಸ್ಯೆ. ಲೇಖಕರು ತಾವು ಬರೆದುದನ್ನು ತಾವೇ ಪ್ರಕಟಿಸುವುದು ಮತ್ತು ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳುವುದು ಬಹಳ ಕಷ್ಟ. ನಾಡಿನ ಸಾಂಸ್ಕೃತಿಕ ವಿವೇಕವನ್ನು ಅಭಿವ್ಯಕ್ತಿಸುವವರು ಲೇಖಕರು. ಅವರನ್ನು ಬರೆಯದ ಹಾಗೆ ಮಾಡುವುದು ಸಂಸ್ಕೃತಿ ಅವನತಿಯ ಸೂಚನೆ.

ಎರಡನೆಯದು, ಪ್ರಕಾಶಕರದ್ದು. ಅವರು ಮುಂದೆ ಬರದೇ ಹೋದರೆ ಪುಸ್ತಕಗಳು ಜನರಿಗೆ ದೊರೆ ಯುವುದಿಲ್ಲ. ಹೀಗಾಗಿ, ಪ್ರಕಾಶಕರು ಮುದ್ರಣಾಲಯದ ಬಾಗಿಲು ಮುಚ್ಚಿದರೆ ಅಪಾಯ. ಮೂರನೆಯದು, ಓದುಗರ ಸಮಸ್ಯೆ. ಕೆಲವು ತಿಂಗಳ ಹಿಂದೆ ಒಂದಿಬ್ಬರು ಓದುಗರು ಜಿಲ್ಲಾ ಗ್ರಂಥಾಲಯದಲ್ಲಿ ನನ್ನ ಪುಸ್ತಕ ಓದಿ ನನಗೆ ದೂರವಾಣಿ ಕರೆ ಮಾಡಿದ್ದರು. ಅವರು ಯಾರೋ ನನಗೆ ಗೊತ್ತಿರಲಿಲ್ಲ, ನನ್ನ ಮುಖ ಪರಿಚಯ ಅವರಿಗೆ ಇರಲಿಲ್ಲ. ನಮ್ಮ ಬಾಂಧವ್ಯಕ್ಕೆ ಸಾಕ್ಷಿಯಾದದ್ದು ಪುಸ್ತಕಗಳು.

ಸರ್ಕಾರವು ಅನ್ನ, ವಸತಿ, ಆರೋಗ್ಯ ಕ್ಷೇತ್ರಗಳಿಗೆ ಕೊಡುವಷ್ಟು ಪ್ರಾಮುಖ್ಯವನ್ನು ಪುಸ್ತಕಗಳಿಗೂ ಕೊಡುವುದು ಅಗತ್ಯ. ಅದಿಲ್ಲದೆ ಖರೀದಿ ಕಾರ್ಯವನ್ನು ತಡ ಮಾಡಿದಷ್ಟೂ ಸಮಸ್ಯೆಗಳು ಹೆಚ್ಚು. ಪುಸ್ತಕ ಖರೀದಿಯಲ್ಲಿ ವಿಳಂಬ ಮಾಡಿದರೆ ಒಬ್ಬ ಸಂಶೋಧಕನ ಬರಹ ಅರ್ಧದಲ್ಲಿಯೇ ನಿಂತಂತೆ. ಸರ್ಕಾರಕ್ಕೂ ಒಂದು ಸಾಂಸ್ಕೃತಿಕ ಜವಾಬ್ದಾರಿ ಇದೆ. ಪುಸ್ತಕೋದ್ಯಮವನ್ನು ಸಾಯಲು ಬಿಡಬಾರದು. ಹಾಗೆ ಮಾಡಿದರೆ ಸರ್ಕಾರವು ಸಾಂಸ್ಕೃತಿಕ ಅಭಿರುಚಿಯನ್ನು ಕೊಂದಂತೆ. ಹಾಗಾದರೆ ಸರ್ಕಾರವು ಪುಸ್ತಕೋದ್ಯಮವನ್ನು ರಾಜ್ಯದಿಂದ ಹೊರಗೆ ತಳ್ಳಿದೆ ಎಂದರ್ಥ. ಪ್ರಕಾಶಕರು ಕೂಡ ಎಲ್ಲ ಆಯಾಮಗಳಲ್ಲೂ ಯೋಚನೆ ಮಾಡಬೇಕು. ಲೇಖಕರಿಗೆ ಗೌರವಧನವನ್ನು ಕೊಡಬೇಕು. ಇದು ಅವರ ಆದ್ಯತೆಯೂ ಆಗಲಿ.

ಸಾಲ ಮಾಡಿ ಪುಸ್ತಕವನ್ನು ಪ್ರಕಟಿಸುವ ಪ್ರಕಾಶಕರ ಕತೆಯಂತೂ ಹೇಳತೀರದು. ಆದ್ದರಿಂದ ಆಯಾ ವರ್ಷವೇ ಪುಸ್ತಕ ಖರೀದಿಸುವಂತಹ ಯೋಜನೆಯನ್ನು ಮುಂದುವರಿಸುವುದು ಅತ್ಯಂತ ಅಗತ್ಯ. ಪ್ರಕಾಶಕರು, ಲೇಖಕರು ಮತ್ತು ಓದುಗರಿಗೆ ಆಗುವ ತೊಂದರೆಗಳನ್ನು ತಕ್ಕಡಿಯಲ್ಲಿ ಹಾಕಿ ತೂಗುವುದು ಕಷ್ಟ. ಕೆಲವು ಪ್ರಬಲ ಪ್ರಕಾಶಕರ ಪುಸ್ತಕಗಳು ಮಾತ್ರವೇ ಗ್ರಂಥಾಲಯ ಸಮಿತಿಯಲ್ಲಿ ಆಯ್ಕೆಯಾಗುತ್ತವೆ ಎನ್ನುವ ಮಾತಿದೆ. ಆ ಬಗ್ಗೆ ಸರ್ಕಾರ ಗಮನ ಹರಿಸುವುದು ಸೂಕ್ತ.

ಇಷ್ಟು ಹೇಳುವಾಗಲೂ ಪ್ರಕಾಶಕರೆಲ್ಲ ದೋಷರಹಿತರು ಎಂದು ಹೇಳಲಾಗದು. ಪುಸ್ತಕದ ಸಾವಿರಾರು ಪ್ರತಿಗಳನ್ನು ಮುದ್ರಿಸಿದಂತೆ ತೋರಿಸಿ, ಗ್ರಂಥಾಲಯಕ್ಕೆ ಆಯ್ಕೆಯಾದ ಮೇಲೆ 300 ಪ್ರತಿಗಳನ್ನಷ್ಟೇ ಮುದ್ರಿಸುವ ಪ್ರಕಾಶಕರಿದ್ದಾರೆ. 300 ಪುಟದ ಒಂದು ಪುಸ್ತಕಕ್ಕೆ ₹ 450 ಬೆಲೆ ನಿಗದಿ ಮಾಡಿ ಪ್ರಕಟಿಸುವವರಿದ್ದಾರೆ. ಅದರ ಸಂಪೂರ್ಣ ಲಾಭ ಅವರಿಗೆ. ಲೇಖಕನಿಗೆ ಹತ್ತು ಪ್ರತಿಗಳನ್ನಷ್ಟೇ ಕೊಡುತ್ತಾರೆ. ಕೆಲವೊಮ್ಮೆ ಪುಸ್ತಕ ಮಾರುಕಟ್ಟೆಗೆ ಬರುವುದೇ ಇಲ್ಲ. ಜನರು ಓದುವುದಿಲ್ಲ ಎನ್ನುವ ದೂರನ್ನು ಮಾತ್ರ ಪ್ರಕಾಶಕರು ಹೇಳುತ್ತಾರೆ.

ಓದುಗರನ್ನು ಬೈಯುವುದರಲ್ಲಿ ಯಾವುದೇ ಅರ್ಥವಿಲ್ಲ. ಪುಸ್ತಕೋದ್ಯಮದ ಸಮಸ್ಯೆಗಳ ಪರಿಹಾರ ಕ್ಕಾಗಿ ಸರ್ಕಾರ ನಿರ್ದಿಷ್ಟವಾದ ಯೋಜನೆಯನ್ನು ತುರ್ತಾಗಿ ಜಾರಿಗೆ ತರಬೇಕು. ಇದರಿಂದ ಲೇಖಕರು ಮತ್ತು ಪ್ರಕಾಶಕರು ಉಳಿಯುತ್ತಾರೆ. ಲೇಖಕರಿಗೆ ಕನಿಷ್ಠವೆಂದರೂ ಒಂದು ಪುಸ್ತಕದ ನೂರು ಪ್ರತಿಗಳನ್ನು ಪ್ರಕಾಶಕರು ಕೊಡುವಂತೆ ಆಗಬೇಕು. ಇದಕ್ಕೆ ಸರಿಯಾದ ಒಂದು ನೀತಿ ಸಮಿತಿಯನ್ನು ಸರ್ಕಾರ ರಚಿಸಬೇಕು. ಈ ದಿಸೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಯತ್ನಿಸುವುದು ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT