ಗಯಾನ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್ ಲಯದಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಅವರನ್ನು ನಾಯಕ ರೋಹಿತ್ ಶರ್ಮ ಹಾಗೂ ಕೋಚ್ ರಾಹುಲ್ ದ್ರಾವಿಡ್ ಬೆಂಬಲಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲೂ ಕೊಹ್ಲಿ ವೈಫಲ್ಯ ಅನುಭವಿಸಿದರು. ಕೇವಲ 9 ರನ್ ಗಳಿಸಿ ಔಟ್ ಆದರು.
ಆದರೆ ವಿರಾಟ್ ಬ್ಯಾಟಿಂಗ್ ಪ್ರದರ್ಶನದ ಕುರಿತು ಚಿಂತಿತರಾಗದ ನಾಯಕ ರೋಹಿತ್ ಶರ್ಮಾ, 'ಬಹುಶಃ ವಿರಾಟ್ ತಮ್ಮ ಶ್ರೇಷ್ಠ ಪ್ರದರ್ಶನವನ್ನು ಫೈನಲ್ಗಾಗಿ ಉಳಿಸಿರಬಹುದು' ಎಂದು ಹೇಳಿದ್ದಾರೆ.
'ವಿರಾಟ್ ಕೊಹ್ಲಿ ಗುಣಮಟ್ಟದ ಆಟಗಾರ. ಇಂತಹ ಪರಿಸ್ಥಿತಿ ಯಾವ ಬ್ಯಾಟರ್ಗೂ ಎದುರಾಗಬಹುದು. ವಿರಾಟ್ ಕ್ಲಾಸ್ ಆಟಗಾರನಾಗಿದ್ದು, ದೊಡ್ಡ ಪಂದ್ಯಗಳಲ್ಲಿ ಅವರ ಸಾನಿಧ್ಯವನ್ನು ನಾವು ಅರಿತುಕೊಂಡಿದ್ದೇವೆ' ಎಂದು ಹೇಳಿದ್ದಾರೆ.
'15 ವರ್ಷಗಳ ಕಾಲ ಕ್ರಿಕೆಟ್ ಆಡಿದಾಗ ಬ್ಯಾಟಿಂಗ್ ಲಯ ಎಂಬುದು ಸಮಸ್ಯೆಯಾಗುವುದಿಲ್ಲ. ಅವರು ಉತ್ತಮ ಲಯದಲ್ಲಿದ್ದಾರೆ ಎಂಬ ಭಾವನೆ ನನ್ನಲ್ಲಿದೆ' ಎಂದು ಹೇಳಿದ್ದಾರೆ.
ಕೋಚ್ ದ್ರಾವಿಡ್ ಕೂಡ ವಿರಾಟ್ ಅವರನ್ನು ಬೆಂಬಲಿಸಿದ್ದಾರೆ. 'ಹೈ-ರಿಸ್ಕ್ ಕ್ರಿಕೆಟ್ ಆಡುವಾಗ ಕೆಲವೊಮ್ಮೆ ನಾವು ಬಯಸಿದ ರೀತಿಯಲ್ಲಿ ಎಲ್ಲವೂ ಆಗುವುದಿಲ್ಲ' ಎಂದು ಹೇಳಿದ್ದಾರೆ.
'ವಿರಾಟ್ ಇಂದು ಕೂಡ ಉತ್ತಮ ಗತಿಯಲ್ಲಿ ಆಡಿದರು. ಅದ್ಭುತ ಸಿಕ್ಸರ್ ಹೊಡೆದರು. ಆದರೆ ದುರದೃಷ್ಟವಶಾತ್ ಔಟ್ ಆದರು. ವಿರಾಟ್ ಕೊಹ್ಲಿ ಬದ್ಧತೆಯನ್ನು ನಾವು ಗೌರವಿಸುತ್ತೇನೆ' ಎಂದು ಹೇಳಿದ್ದಾರೆ.
ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. 2007ರ ಚೊಚ್ಚಲ ವಿಶ್ವಕಪ್ ಜಯಸಿದ್ದ ಭಾರತ ಎರಡನೇ ಸಲ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ.