ಬ್ರಿಜ್ಟೌನ್, ಬಾರ್ಬಾಡೋಸ್: ಬೆರಿಲ್ ಚಂಡಮಾರುತದ ಪರಿಣಾಮ ಬಾರ್ಬಾಡೋಸ್ನಲ್ಲಿಯೇ ಸಿಲುಕಿರುವ ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಮಂಗಳವಾರ ಸಂಜೆ ಚಾರ್ಟರ್ ವಿಮಾನದಲ್ಲಿ ಸ್ವದೇಶಕ್ಕೆ ಪ್ರಯಾಣಿಸಲಿದೆ ಎಂದು ಬಾರ್ಬಾಡೋಸ್ ಪ್ರಧಾನಿ ಮಿಯಾ ಮೋಟ್ಲಿ ತಿಳಿಸಿದ್ದಾರೆ.
ಮುಂದಿನ 6ರಿಂದ 12 ಗಂಟೆಗಳ ಒಳಗಾಗಿ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಬ ನಿರೀಕ್ಷೆ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯವನ್ನು ಏಳು ರನ್ಗಳಿಂದ ಗೆದ್ದ ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ, ಸಹಾಯಕ ಸಿಬ್ಬಂದಿ, ಬಿಸಿಸಿಐ ಅಧಿಕಾರಿಗಳು ಸೇರಿದಂತೆ ಆಟಗಾರರ ಕುಟುಂಬದ ಸದಸ್ಯರು ಬಾರ್ಬಾಡೋಸ್ನಲ್ಲಿಯೇ ಉಳಿದಿದ್ದಾರೆ.
ಬೆರಿಲ್ ಚಂಡಮಾರುತವು ಬಾರ್ಬಾಬಡೋಸ್ ಮತ್ತು ಸಮೀಪದ ದ್ವೀಪಗಳಿಗೆ ಸೋಮವಾರ ಅಪ್ಪಳಿಸಿದೆ. ಸುಮಾರು ಮೂರು ಲಕ್ಷ ಜನಸಂಖ್ಯೆಯಿರುವ ದೇಶ ಭಾನುವಾರ ಸಂಜೆಯಿಂದಲೇ ಸ್ತಬ್ದಗೊಂಡಿದೆ. ವಿಮಾನ ನಿಲ್ದಾಣ ಮುಚ್ಚಲಾಗಿದೆ.
‘ನಾನು ವಿಮಾನ ನಿಲ್ದಾಣ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಸಿಬ್ಬಂದಿಯು ಅಂತಿಮ ಹಂತದ ಪರಿಶೀಲನಾ ಕೆಲಸದಲ್ಲಿ ತೊಡಗಿದ್ದಾರೆ’ ಎಂದು ಪಿಟಿಐ ತಿಳಿಸಿದೆ.
ಭಾರತ ತಂಡದ ಸದಸ್ಯರು ಬ್ರಿಜ್ಟೌನ್ನಿಂದ ಸ್ಥಳೀಯ ಕಾಲಮಾನ ಮಂಗಳವಾರ ಸಂಜೆ 6 ಗಂಟೆ ಹೊರಟು, ಬುಧವಾರ ಸಂಜೆ 7.45ಕ್ಕೆ ದೆಹಲಿ ತಲುಪುವ ನಿರೀಕ್ಷೆ ಇದೆ.