ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡಲಸಂಗಮ | ತುಂಬಿದ ಕೃಷ್ಣ, ಮಲಪ್ರಭೆ ಒಡಲು: ಪ್ರವಾಸಿಗರ ಸಂಭ್ರಮ

Published 18 ಜುಲೈ 2024, 6:06 IST
Last Updated 18 ಜುಲೈ 2024, 6:06 IST
ಅಕ್ಷರ ಗಾತ್ರ

ಕೂಡಲಸಂಗಮ: ಎರಡು ದಿನಗಳಿಂದ ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಟ್ಟ ಪರಿಣಾಮವಾಗಿ ನಾರಾಯಣಪುರ ಜಲಾಶಯದ ಹಿನ್ನೀರು ತುಂಬಿಕೊಂಡಿದೆ.

ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪದ ಬಳಿ ನೀರಿನ ಜಲರಾಶಿ ವಿಶಾಲವಾಗಿ ಹರಡಿಕೊಂಡಿದೆ.

ಮೂರು ತಿಂಗಳಿಂದ ಕೃಷ್ಣಾ, ಮಲಪ್ರಭಾ ನದಿ ಒಡಲು ಬರಿದಾಗಿತ್ತು. 20 ದಿನಗಳ ಹಿಂದೆ ಮಲಪ್ರಭಾ ನದಿಗೆ ಅಲ್ಪ ಪ್ರಮಾಣದಲ್ಲಿ ನೀರು ಹರಿದುಬಂದಿತು. ಎರಡು ದಿನಗಳಿಂದ ಆಲಮಟ್ಟಿ ಜಲಾಶಯದಿಂದ ನೀರು ಹರಿದು ಬರುತ್ತಿರುವುದರಿಂದ ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಬಳಿ ನದಿಗಳು ಸಂಪೂರ್ಣ ತುಂಬಿ ಜೀವಕಳೆ ಪಡೆದಿವೆ. ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಬುಧವಾರ ರಜೆಯ ದಿನವಾದ್ದರಿಂದ ಬೆಳಿಗ್ಗೆಯಿಂದಲೇ ತಂಡೋಪ ತಂಡವಾಗಿ ಪ್ರವಾಸಿಗರು ಸುಕ್ಷೇತ್ರಕ್ಕೆ ಬಂದು ನದಿಯ ವಿಹಂಗಮ ದೃಶ್ಯ ನೋಡಿ ಸಂಭ್ರಮಿಸಿದರು.

ಪ್ರತಿ ವರ್ಷ ಏಪ್ರಿಲ್‌ದಿಂದ ಜೂನ್‌ ಅಂತ್ಯದವರೆಗೆ ನದಿಯ ಒಡಲು ಬರಿದಾಗುತ್ತಿತ್ತು. ಈ ವರ್ಷ ಏಪ್ರಿಲ್ ಮೊದಲ ವಾರ ಇಳಿಮುಖಗೊಂಡು ಜೂನ್‌ ಮೂರನೇ ವಾರ ಅಲ್ಪಪ್ರಮಾಣದಲ್ಲಿ ತುಂಬಿಕೊಂಡಿತು. ಈಗ ನದಿ ಸಂಪೂರ್ಣ ತುಂಬಿ ಹರಿಯುತ್ತಿದೆ.

ಸಂಗಮೇಶ್ವರ ದೇವಾಲಯ ಬಳಿಯ ಕೃಷ್ಣಾ, ಮಲಪ್ರಭಾ ನದಿಯ ದಡ, ಕೂಡಲಸಂಗಮ ಅಡವಿಹಾಳ ಸೇತುವೆ ಮೇಲೆ ಬುಧವಾರ ಪ್ರವಾಸಿಗರ ದಂಡೇ ಇತ್ತು. ಕೆಲವು ಪ್ರವಾಸಿಗರು ನದಿ ಹರಿಯುವ ದೃಶ್ಯ ನೋಡಿ ಸಂಭ್ರಮಿಸಿದರೆ, ಇನ್ನೂ ಕೆಲವು ಪ್ರವಾಸಿಗರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ನದಿಯಲ್ಲಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ನದಿ ದಡದ ರೈತರು ನದಿಯಲ್ಲಿ ಅಳವಡಿಸಿದ ಪೈಪ್‌, ಪಂಪ್‌ಸೆಟ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ದೃಶ್ಯ ಬುಧವಾರ ಬೆಳಿಗ್ಗೆಯಿಂದ ಕಂಡು ಬಂತು. ನದಿಯ ದಡದ ಕೆಲವು ರೈತರ ಭೂಮಿಗೆ ಕೃಷ್ಣಾ ನದಿ ನೀರು ನುಗ್ಗಿದೆ.

ಕೃಷ್ಣಾ ನದಿ ವೀಕ್ಷಿಸುತ್ತಿರುವ ಪ್ರವಾಸಿಗರು
ಕೃಷ್ಣಾ ನದಿ ವೀಕ್ಷಿಸುತ್ತಿರುವ ಪ್ರವಾಸಿಗರು
ಕೃಷ್ಣಾ ಮಲಪ್ರಭಾ ನದಿ ತುಂಬಿಕೊಂಡಾಗ ಬಸವಣ್ಣನ ಐಕ್ಯ ಮಂಟಪದದಿಂದ ನದಿಯ ವಿಹಂಗಮ ದೃಶ್ಯ ನೋಡುವುದೇ ಸಂತೋಷಕರ
ರಾಜಶೇಖರ ಪಾಟೀಲ ಪ್ರವಾಸಿ ಗಜೇಂದ್ರಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT