ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುರುಗೋಡು | ಭಾರಿ ಮಳೆ: ಏಳು ಮನೆಗೆ ಹಾನಿ

Published 20 ಆಗಸ್ಟ್ 2024, 13:55 IST
Last Updated 20 ಆಗಸ್ಟ್ 2024, 13:55 IST
ಅಕ್ಷರ ಗಾತ್ರ

ಕುರುಗೋಡು: ತಾಲ್ಲೂಕಿನಲ್ಲಿ ಸೋಮವಾರ ತಡರಾತ್ರಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಮಧ್ಯರಾತ್ರಿಯಿಂದ ಪ್ರಾರಂಭಗೊಂಡ ಬಿರುಸಿನಿಂದ ಕೂಡಿದ ಮಳೆ ಬೆಳಗಿನ ಜಾವದವರೆಗೆ ಸುರಿಯಿತು. ಈ ವರ್ಷದಲ್ಲಿಯೇ ಸುರಿದ ಅತಿದೊಡ್ಡ ಮಳೆ ಇದಾಗಿದೆ.

ತಾಲ್ಲೂಕಿನ ಗೆಣಿಕೆಹಾಳು, ಸಿದ್ದಮ್ಮನಹಳ್ಳಿ ಮತ್ತು ಚಾನಾಳು ಗ್ರಾಮಗಳ ಬಳಿ ಹರಿಯುವ ಹಳ್ಳಗಳು ತುಂಬಿ ರಸ್ತೆಯ ಮೇಲೆ ಹರಿಯುತ್ತಿವೆ. ಪರಿಣಾಮ ಸೋಮವಾರ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನದವರೆಗೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ನಂತರ ಸಂಚಾರ ಪುನರಾರಂಭಗೊಂಡಿತು. ಹಳ್ಳದ ಸುತ್ತಮುತ್ತಲಿನ ರೈತರು ನೂರಾರು ಎಕರೆಯಲ್ಲಿ ಬೆಳೆದಿರುವ ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ.

ಸಿರಿಗೇರಿ ಗ್ರಾಮದಲ್ಲಿ ಎರಡು ಮತ್ತು ತಾಲ್ಲೂಕಿನ ಎಚ್.ವೀರಾಪುರದಲ್ಲಿ ಎರಡು ಮನೆ ಮತ್ತು ಒಂದು ಗುಡಿಸಲು, ಗುತ್ತಿಗನೂರು ಮತ್ತು ಪಟ್ಟಣಸೆರಗು ಗ್ರಾಮಗಳಲ್ಲಿ ತಲಾ ಒಂದು ಕಚ್ಚಾ ಮನೆಯ ಚಾವಣಿ ಬಿದ್ದಿವೆ. ಪಟ್ಟಣದ 22 ಮತ್ತು 23ನೇ ವಾರ್ಡ್‍ನ ಕೆಲವು ಮನೆಗಳಿಗೆ ಮಳೆಯ ನೀರು ನುಗ್ಗಿ ದಿನಬಳಕೆ ವಸ್ತುಗಳು ನೀರುಪಾಲಾಗಿವೆ.

ಪಟ್ಟಣದ ಬೆಟ್ಟದ ಸಾಲುಗಳಿಂದ ಭಾರಿ ಪ್ರಮಾಣದ ಮಳೆಯ ನೀರು ರಭಸದಿಂದ ನುಗ್ಗಿದ ಪರಿಣಾಮ ಹರಿಕೃಪಾ ಕಾಲೊನಿಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯ ಬುನಾದಿ ಸಂಪೂರ್ಣ ಕುಸಿದು ಬಿದ್ದಿದೆ. ಕೊಠಡಿಯಲ್ಲಿರುವ ಪುಸ್ತಕ, ಕಪಾಟು, ಯುಪಿಎಸ್ ನೀರುಪಾಲಾಗಿವೆ. ಸಂಪೂರ್ಣ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.

ಬೆಟ್ಟಕ್ಕೆ ಹೊಂದಿಕೊಂಡು ನೂತನವಾಗಿ ನಿರ್ಮಿಸಿರುವ ಬಡಾವಣೆಯಲ್ಲಿ ಮಳೆಯ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡದ ಪರಿಣಾಮ ಈ ಅನಾಹುತಕ್ಕೆ ಕಾರಣ ಎಂದು ಸುತ್ತಮುತ್ತಲಿನ ನಿವಾಸಿಗಳು ಆರೋಪಿಸಿದರು. ಬಡಾವಣೆಗೆ ನಿರ್ಮಿಸಿರುವ ತಡೆಗೋಡೆ ಮನೆಯ ಮೇಲೆ ಬಿದ್ದ ಪರಿಣಾಮ ಮುಂಭಾಗದ ಚಾಲಣಿ ಕುಸಿದುಬಿದ್ದಿದೆ.

ಸಾರಿಗೆ ಸಂಸ್ಥೆಯ ಬಸ್ ಘಟಕದಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿ ಡೀಸೆಲ್ ಟ್ಯಾಂಕರ್ ಜಲಾವೃತ್ತಗೊಂಡಿದೆ. ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿರುವ ಜನವಸತಿ ಪ್ರದೇಶ ಮತ್ತು ಸಸಿ ನರ್ಸರಿಗಳಿಗೆ ನೀರು ನುಗ್ಗಿ ನಷ್ಟಸಂಭವಿಸಿದೆ.

ತಹಶೀಲ್ದಾರ್ ನರಸಪ್ಪ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಮಳೆ ಹಾನಿ ಸ್ಥಳಗಳಿಗೆ ಭೇಟಿನೀಡಿ ಪರಿಶೀಲಿಸಿದರು. 12.2 ಸೇ.ಮೀ. ಮಳೆಯಾದ ಬಗ್ಗೆ ಇಲ್ಲಿನ ಮಳೆಮಾಪನ ಕೇಂದ್ರದಲ್ಲಿ ದಾಖಲಾಗಿದೆ.

ಕುರುಗೋಡು ತಾಲ್ಲೂಕಿನ ಚಾನಾಳು ಗ್ರಾಮದ ಬಳಿ ಹರಿಯುವ ಹಿರೇಹಳ್ಳ ಮಳೆಯಿಂದ ತುಂಬಿ ಹರಿಯುತ್ತಿದೆ
ಕುರುಗೋಡು ತಾಲ್ಲೂಕಿನ ಚಾನಾಳು ಗ್ರಾಮದ ಬಳಿ ಹರಿಯುವ ಹಿರೇಹಳ್ಳ ಮಳೆಯಿಂದ ತುಂಬಿ ಹರಿಯುತ್ತಿದೆ
ಕುರುಗೋಡಿನ ಬಾದನಹಟ್ಟಿ ರಸ್ತೆಯಲ್ಲಿನ ನರ್ಸರಿ ಜಲಾವೃತವಾಗಿದೆ
ಕುರುಗೋಡಿನ ಬಾದನಹಟ್ಟಿ ರಸ್ತೆಯಲ್ಲಿನ ನರ್ಸರಿ ಜಲಾವೃತವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT