ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುನಿರತ್ನ ಪ್ರಕರಣದಲ್ಲಿ ಬೆದರಿಕೆ: ಕಾರ್ಯಕರ್ತೆ ಸೇರಿ ಇಬ್ಬರ ವಿರುದ್ದ ಎಫ್‌ಐಆರ್

Published : 23 ಸೆಪ್ಟೆಂಬರ್ 2024, 22:24 IST
Last Updated : 23 ಸೆಪ್ಟೆಂಬರ್ 2024, 22:24 IST
ಫಾಲೋ ಮಾಡಿ
Comments

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ನೀಡಿರುವ ದೂರಿನಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ ಆರೋಪದಡಿ ಶಾಸಕರ ಬೆಂಬಲಿಗರಿಬ್ಬರ ವಿರುದ್ಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರು, ಬಿಜೆಪಿ ಕಾರ್ಯಕರ್ತೆ ಸುನಂದಮ್ಮ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ದೂರು ನೀಡಿದ್ದಾರೆ.

‘ಸೆ.21ರ ಬೆಳಿಗ್ಗೆ 11.30ಕ್ಕೆ ಬಿಜೆಪಿ ಕಾರ್ಯಕರ್ತೆ ಸುನಂದಮ್ಮ ಮತ್ತು ಮತ್ತೊಬ್ಬ ವ್ಯಕ್ತಿ ಮನೆಗೆ ಬಂದು ನನ್ನ ತಾಯಿಯ ಬಗ್ಗೆ ವಿಚಾರಿಸಿದರು. ಅವರು ಆಸ್ಪತ್ರೆಗೆ ಹೋಗಿದ್ದರು. ಅವರ ಸೂಚನೆಯಂತೆ ತಾಯಿಗೆ ಫೋನ್ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. ನನ್ನ ಅಣ್ಣನಿಗೆ ಕರೆ ಮಾಡಿದಾಗ, ಆತ ಗಾಬರಿಯಿಂದ ನಂತರ ಮಾತನಾಡುವುದಾಗಿ ಹೇಳಿ ಕರೆ ಸ್ಥಗಿತಗೊಳಿಸಿದ. ಆಸ್ಪತ್ರೆಯಲ್ಲಿರುವ ಕಾರಣ ಅವರು ಸರಿಯಾಗಿ ಮಾತನಾಡುತ್ತಿಲ್ಲ ಎಂದು ಹೇಳಿದೆ’ ಎಂದು ದೂರುದಾರ ವ್ಯಕ್ತಿ ತಿಳಿಸಿದ್ದಾರೆ. 

‘ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ನೀಡಿದ ದೂರಿನಲ್ಲಿ ನಿಮ್ಮ ತಾಯಿ ಸಾಕ್ಷಿದಾರರಾಗಿದ್ದಾರೆ. ಶಾಸಕರ ವಿರುದ್ಧ ಸಾಕ್ಷಿ ಹೇಳಿದರೆ ಮನೆಗೆ ಬೆಂಕಿ ಹಚ್ಚಿ ನಾಶ ಮಾಡುತ್ತೇವೆ ಎಂದು ಬೆದರಿಸಿದರು. ಪ್ರಕರಣ ವಾಪಸ್ ಪಡೆದುಕೊಳ್ಳುವಂತೆ ಬೆದರಿಕೆ ಹಾಕಿ ಇಬ್ಬರೂ ಕಾರಿನಲ್ಲಿ ಹೊರಟು ಹೋದರು. ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮುನಿರತ್ನ ದುಷ್ಕೃತ್ಯ ತಲೆತಗ್ಗಿಸುವಂಥದ್ದು’

ಬೆಂಗಳೂರು: ‘ಶಾಸಕ ಮುನಿರತ್ನ ಅವರ ಜೊತೆಯಲ್ಲಿದ್ದ ಎಲ್ಲ ಬಿಜೆಪಿ ಶಾಸಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಎಚ್‌ಐವಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ಎಚ್.ಡಿ. ರಂಗನಾಥ್ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುನಿರತ್ನ ಆರು ವರ್ಷಗಳ ಹಿಂದೆ ಬಿಜೆಪಿ ಮುಖಂಡರ ಮೇಲೆ ಎಚ್‌ಐವಿ ಹರಡುವ ಕೃತ್ಯ ಎಸಗಿರುವ ಆರೋಪವಿದೆ. ಎಚ್‌ಐವಿ ಸೋಂಕಿತರನ್ನು ಬಳಸಿಕೊಂಡು ಮಾಡಿರುವ ಇಂತಹ ದುಷ್ಕೃತ್ಯ ತಲೆತಗ್ಗಿಸುವಂಥದ್ದು’ ಎಂದರು.

ಕೆಪಿಸಿಸಿ ವೈದ್ಯಕೀಯ ಘಟಕದ ಅಧ್ಯಕ್ಷ ಡಾ. ಮಧುಸೂದನ್ ಮಾತನಾಡಿ, ‘ಮುನಿರತ್ನ ಮಾಡಿರುವ ಕೃತ್ಯ ಬಾಂಬ್‌ ಹಾಕಿದಷ್ಟೇ ಘೋರ. ಇದು ಭಯೋತ್ಪಾದನೆಗೆ ಸಮ’ ಎಂದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಮುಖಂಡರಾದ ಶ್ರೀನಿವಾಸ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT