ಚಾಮರಾಜನಗರ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕುಟುಂಬ ಸಮೇತರಾಗಿ ಶುಕ್ರವಾರ ಜಿಲ್ಲೆಯ ದೇಗುಲ, ಯಾತ್ರಾಸ್ಥಳಕ್ಕೆ ಭೇಟಿ ನೀಡಿ, ಬಿಆರ್ಟಿಯಲ್ಲಿ ಸಫಾರಿ ನಡೆಸಿದರು.
ಬೆಳಿಗ್ಗೆ ಬಿಳಿಗಿರಿ ರಂಗನಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖ್ಯ ನ್ಯಾಯಮೂರ್ತಿ, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಕೆ.ಗುಡಿ ಸಫಾರಿ ವಲಯದಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದರು. ನಂತರ ಚಾಮರಾಜನಗರ ತಾಲ್ಲೂಕಿನ ಹರಳುಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.
ಡಿಸಿ ಶಿಲ್ಪಾನಾಗ್, ಎಸ್ಪಿ ಬಿ.ಟಿ.ಕವಿತಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಹೂಗುಚ್ಛ ನೀಡಿ ಸ್ವಾಗತ ಕೋರಿದರು. ದೇವರ ದರ್ಶನದ ಬಳಿಕ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿ ವಿಶ್ರಾಂತಿ ಪಡೆದು, ಸಫಾರಿ ನಡೆಸಿದರು. ಈ ವೇಳೆ ಕಾಡಾನೆ, ನವಿಲು, ಜಿಂಕೆ, ಕಾಡೆಮ್ಮೆ ಸೇರಿ ಇತರೆ ವನ್ಯಜೀವಿಗಳು ನೋಡಲು ಸಿಕ್ಕವು ಎಂದು ಅಧಿಕಾರಿಗಳು ತಿಳಿಸಿದರು.