ಚಿಂಚೋಳಿ: ತಾಲ್ಲೂಕಿನ ಗಡಿಕೇಶ್ವಾರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಬೆಳಿಗ್ಗೆ ಮತ್ತೆ ಭೂಮಿಯಿಂದ ಭಾರಿ ಸದ್ದು ಕೇಳಿ ಬಂದು ಲಘು ಕಂಪನ ಸಂಭವಿಸಿದೆ ಎಂದು ಗ್ರಾಮದ ಮುಖಂಡರಾದ ಪ್ರಕಾಶ ರಂಗನೂರ ಮತ್ತು ಅರುಣ ರಂಗನೂರ ತಿಳಿಸಿದ್ದಾರೆ.
ಬೆಳಿಗ್ಗೆ 9.51ಕ್ಕೆ ಭೂಮಿಯಿಂದ ಸದ್ದು ಕೇಳಿ ಬಂದಿದೆ. ಇಲ್ಲಿ ನಿತ್ಯ ಲಘು ಕಂಪನ ಸಂಭವಿಸುತ್ತಿದೆ ಇದರ ಅಧ್ಯಯನಕ್ಕಾಗಿ ಹೈದರಾಬಾದ್ನಲ್ಲಿ ರಾಷ್ಟ್ರೀಯ ಭೂಭೌತವಿಜ್ಞಾನ ಸಂಶೋಧನಾ ಸಂಸ್ಥೆ ಸಿಸ್ಮೊ ಮೀಟರ್ ಅಳವಡಿಸಿದೆ. ಕಂದಾಯ ಸಚಿವ ಆರ್ ಅಶೋಕ ಭೇಟಿ ನೀಡಿದ ನಂತರ ಒಂದೆರಡು ದಿನ ಸದ್ದಿನ ಅನುಭವ ತಗ್ಗಿತ್ತು ಆದರೆ ಈಗ ಮತ್ತೆ ಮುಂದುವರೆದಿದ್ದು ಗ್ರಾಮಸ್ಥರನ್ನು ಕಂಗಾಲಾಗಿಸಿದೆ.
ಗಡಿಕೇಶ್ವಾರ, ಕುಪನೂರ ಬೆನಕನಳ್ಳಿ, ಭಂಟನಳ್ಳಿ ಹಾಗೂ ಕಾಳಗಿ ತಾಲ್ಲೂಕಿನ ಹಲಚೇರಾ, ಹೊಸಳ್ಳಿ, ಕೊರವಿ, ತೇಗಲತಿಪ್ಪಿ ಗ್ರಾಮಗಳಲ್ಲಿಯೂ ಭೂಮಿಯಿಂದ ಸದ್ದು ಕೇಳಿ ಬಂದಿದೆ.